ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.






No comments: