ಕಥೆ-ತಂತ್ರದ ನಡುವಿನ ಹದ

ಫಕೀರ ಎನ್ನುವ ಅಂಕಿನನಾಮದಲ್ಲಿ ಬರೆಯುವ ಶ್ರೀಧರ ಬನವಾಸಿಯವರು ನನ್ನನ್ನು ತಮ್ಮ ಕಾದಂಬರಿಗೆ ಮುನ್ನುಡಿಯನ್ನು ಬರೆದುಕೊಡಬೇಕೆಂದು ಹೇಳಿದಾಗ ನಾನು ಸಂತೋಷದಿಂದ ಒಪ್ಪಿದೆ. ಬನವಾಸಿಯವರು ತಮ್ಮ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ ಮತ್ತು ಬ್ರಿಟಿಷ್ ಬಂಗ್ಲೆಯ ಪ್ರತಿಗಳನ್ನು ನನಗೆ ಅವುಗಳು ಪ್ರಕಟವಾದ ತಕ್ಷಣವೇ ಕಳುಹಿಸಿದ್ದರು. ಹೀಗೆ ಯುವ ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸುತ್ತಿರುತ್ತಾರೆ ಹಾಗೂ ಕೂದಲು ನರೆಯುತ್ತಿರುವ ತಮ್ಮ ಹಿರಿಯ ಜನಾಂಗದವರಿಂದ ಒಂದು ರೀತಿಯ ಪ್ರೋತ್ಸಾಹದ-ವಿಮರ್ಶೆಯ-ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಅದು ಸಹಜವೇ. ಬರವಣಿಗೆಯನ್ನು ಕೈಗೊಂಡ ಹೊಸತರಲ್ಲಿ ಈ ಪ್ರಕ್ರಿಯೆಗೆ ಯುವ ಲೇಖಕರಾಗಿ ನಾನು ನನ್ನ ಓರಗೆಯವರೂ ಒಡ್ಡಿಕೊಂಡದ್ದು ನೆನಪಿಗೆ ಬರುತ್ತದೆ. ಹೀಗಾಗಿ ಯುವ-ಹೊಸದಾಗಿ ಬರೆವಣಿಗೆಯನ್ನು ಕೈಹಿಡಿದ ಬರಹಗಾರರಲ್ಲಿ ನಾವುಗಳು ನಮ್ಮ ಗತಕಾಲವನ್ನೂ,ಯೌವನವನ್ನೂ ಕಾಣುತ್ತೇವೆ. ಅದೇ ಕಾಲಕ್ಕೆ ನಮ್ಮ ಕಾಲದ-ಸಮಯದ-ಕಾಯಕದ ಒತ್ತಡಗಳಲ್ಲಿ ಹಲವೊಮ್ಮೆ ಬಂದ ಪುಸ್ತಕಗಳನ್ನು ಓದಿ, ಅದನ್ನು ಕಳುಹಿಸಿಕೊಡುವ ತೊಂದರೆಯನ್ನು ಕೈಗೊಂಡ ಲೇಖಕರಿಗೆ ಒಂದೆರಡು ಸಾಲು ಪತ್ರವನ್ನೂ ಬರೆಯದಿರುವ ಅಪರಾಧವನ್ನು ನಾವು ಸದಾ ಮಾಡುತ್ತಲೇ ಇರುತ್ತವೆ. ಬರೆಯಬಾರದೆಂದಲ್ಲ – ಆದರೆ ಹೇಗೂ ಇಂದು-ನಾಳೆಯೆಂದು ಆ ಓದನ್ನು ಮುಂದುವರೆಸಿ ಹತಾಶೆಯಿಂದ ಸುಮ್ಮನಾಗಿಬಿಡುತ್ತೇವೆ. ನಾವು ಅರಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಗಳು ಅರಳುತ್ತಿರುವುದೇ ಇದಕ್ಕೆ ಕಾರಣ.

ಮುಂದೆ....


   

ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ

ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು ಗಮನಿಸುವುದು ಮುಖ್ಯವಾಗುತ್ತದೆ. ಒಂದು ರೀತಿಯಲ್ಲಿ ಕಥೆಗಾರನ ಹಿನ್ನೆಲೆ, ನಿಲುವುಗಳು, ಓದು, ಅಭಿರುಚಿಗಳ ಪರಿಚಯವನ್ನೂ ಕಥೆಗಳ ಮೂಲಕ ಕಂಡುಕೊಳ್ಳುವುದು, ಆ ಒಲವುಗಳ ಬಗ್ಗೆ ಟಿಪ್ಪಣಿ ಮಾಡುವುದಕ್ಕೂ ಸಾಧ್ಯ. ಅನೇಕರು ಕೈಗೆ ದಕ್ಕದ ಕಥೆಗಳನ್ನು ಬರೆದು ಅದನ್ನು ಓದುಗ ವಿಸ್ತರಿಸಲು ಅದರ ಪದರಗಳನ್ನು ಬಿಡಿಸುತ್ತಾ ಹೋಗಲು ಪಂಥಾಹ್ವಾನ ನೀಡುವುದನ್ನೂ ನಾವು ಕಂಡಿದ್ದೇವೆ. ಕಥೆ ಎಂದರೇನು ಎನ್ನುವ ಮೂಲಭೂತ ಪ್ರಶ್ನೆಯನ್ನೂ ಕೆಲ ಕಥೆಗಾರರು ತಮ್ಮ ಓದುಗರತ್ತ ಎಸೆಯುವ ಕಥೆಗಾರರು ಕಥನ ತಂತ್ರವೂ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಕುಂಟಿನಿಯವರ ಪುಸ್ತಕವನ್ನು ಪ್ರೀತಿಯಿಂದ ಸ್ವಾಗತಿಸಬೇಕಾಗಿದೆ.

ಮುಂದೆ....

   

ಶಾಂತಿ ಮತ್ತು ಯುದ್ಧ

ಯುದ್ಧಕ್ಕೆ ತಡವಾಗಿಬಿಟ್ಟಿದ್ದರಿಂದ ನಾನು ಟ್ಯಾಕ್ಸಿ ಹಿಡಿಯಬೇಕಾಯಿತು. ಈಚೆಗೆ ಟ್ಯಾಕ್ಸಿಯ ಬಾಡಿಗೆಗಳನ್ನು ಜಾಸ್ತಿ ಮಾಡಿರುವುದರಿಂದ ಈ ಅನಿರೀಕ್ಷಿತ, ಅನಪೇಕ್ಷಿತ ಖರ್ಚು ಸ್ವಲ್ಪ ತೊಂದರೆಯನ್ನೇ ಮಾಡುತ್ತದೆ. ಇದರಿಂದ ಈ ತಿಂಗಳ ಬಜೆಟ್ ಗೆ ಏಟು ಬೀಳುವುದು ಖಚಿತ. ಏನೇ ಆದರೂ ನಾನು ಸಮಯಾನುಸಾರ ಹಾಜರಿ ಹಾಕಿ, ಇದಕ್ಕಿಂತ ದೊಡ್ಡ ತೊಂದರೆಯಿಂದ ಪಾರಾದೆ. ಪಂಚ್ ಕಾರ್ಡ್ ಯಂತ್ರದ ಮುಂದೆ ದೊಡ್ಡ ಕ್ಯೂ ಇತ್ತು. ಯದ್ಧಕ್ಕೆ ತಡವಾಗಿ ಬಂದಿದ್ದವನು ನಾನೊಬ್ಬನೇ ಅಲ್ಲ. ನನ್ನ ಗೆಳೆಯ ವಾಲ್ಟರ್ ಕೂಡಾ ಅಲ್ಲೇ ಗೊಣಗುತ್ತಾ ನಿಂತಿದ್ದ. ಅವನೂ ಟ್ಯಾಕ್ಸಿಯಲ್ಲಿ ಬರಬೇಕಾಯಿತಂತೆ. ನಾವುಗಳು ಪಕ್ಕಪಕ್ಕದಲ್ಲೇ ಮನೆ ಮಾಡಿದ್ದೆವು. ಸುಮಾರು ಒಂದೇ ಸಮಯಕ್ಕೆ ರಸ್ತೆಯಂಚಿನ ಬಸ್ ಹಿಡಿದು ಬಂದು ಯುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದೆವು.

"ಈ ಕೆಲಸದಿಂದ ರೋಸಿಹೋಗಿದ್ದೇನೆ" ವಾಲ್ಟರ್ ಹೇಳಿದ.

ಮುಂದೆ..

ಕೃಷಿ ಮಾರುಕಟ್ಟೆಯ ವಿಚಾರಗಳು.



ನಮ್ಮ ಸರಕಾರ ಕೆಲವು ದಿನಗಳ ಹಿಂದಷ್ಟೇ ನೂತನ ಕೃಷಿ ಮಾರಾಟ ನೀತಿಯನ್ನು ಪ್ರಕಟಮಾಡಿದೆ. ನೂತನ ನೀತಿಯಲ್ಲಿ ರೈತಪರ ಮತ್ತು ಕ್ರಾಂತಿಕಾರಿ ವಿಚಾರಗಳಿರಬಹುದೆಂದು, ಆಶಿಸಿದವರಿಗೆ ನಿರಾಶೆಯನ್ನುಂಟು ಮಾಡಲೆಂದೇ ಈ ಪ್ರಕಟಣೆಯನ್ನು ಸರಕಾರ ಹೊರಡಿಸಿದಂತಿದೆ. ಅಂದರಿಕೀ ಮಂಚಿವಾಡು ಆಗುವ ತವಕದಲ್ಲಿ ಇದು ಏಕಕಾಲಕ್ಕೆ ರೈತಪರವೂ, ವ್ಯಾಪಾರಿಗಳ ಪರವೂ, ಸಹಕಾರದ ಪರವೂ, ಖಾಸಗೀಕರಣದ ಪರವೂ, ಸಾಂಪ್ರದಾಯಿಕತೆಯ ಪರವೂ, ಸುಧಾರಣೆಯ ಪರವೂ ಗುಣಮಟ್ಟದ ಪರವೂ, ತಾಂತ್ರಿಕತೆಯ ಪರವೂ, ಪಾರದರ್ಶಕತ್ವದ ಪರವೂ, ಸೌಕರ್ಯಗಳನ್ನು ಹೆಚ್ಚಿಸುವುದರ ಪರವೂ ಆಗಿದ್ದು – ಈ ನೀತಿ ಲಾಗೂ ಆದಾಕ್ಷಣಕ್ಕೆ ಕೃಷಿಯು ರಾಮರಾಜ್ಯದಲ್ಲಿ ನಡೆಯುತ್ತಿದೆ ಎಂಬ ಭಾವನೆ ಉಂಟುಮಾಡುವ ಎಲ್ಲಿಗೂ ಸಲ್ಲದ ದಾಖಲೆಯಾಗಿದೆ. ಈ ರೀತಿಯ ದಾಖಲೆಯನ್ನು ಟೀಕಿಸುವುದೂ ಕಷ್ಟವೇ – “ರೈತರ ಹಿತರಕ್ಷಣೆಯನ್ನು ಕಾಪಾಡಲು ಕರ್ನಾಟಕ ಕೃಷಿ ಉತ್ಪನ್ನ (ನಿಯಂತ್ರಣಾ ಮತ್ತು ಅಭಿವೃದ್ಧಿ) ಅಧಿನಿಯಮ 1966ರಲ್ಲಿಯ ಎಲ್ಲ ರೈತಸ್ನೇಹಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು” ಎಂಬ ವಾಕ್ಯದ ಅರ್ಥವೇನು? ಇಷ್ಟುದಿನ ಅದು ಅನುಷ್ಠಾನದಲ್ಲಿರಲಿಲ್ಲವೇ? ರೈತ ಸ್ನೇಹಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದಾಗ ರೈತವಿರೋಧಿ ನಿಯಮಗಳನ್ನು ಬದಿಗಿಡಲಾಗುವುದೇ ಅಥವಾ ರೈತ ವಿರೋಧಿ ನಿಯಮಗಳು ಇಲ್ಲವೇ ಇಲ್ಲವೆ?


ಮುಂದೆ....




ಆರ್ಥಿಕ ಮಾರುಕಟ್ಟೆಯ ಸಾಧ್ಯತೆಗಳು-ಮಿತಿಗಳು

ರಘುರಾಮ್ ರಾಜನ್ ಭಾರತೀಯ ರಿಜರ್ವ್ ಬ್ಯಾಂಕಿನ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಆರಂಭಿಕ ಭಾಷಣ ಆಲಿಸಿದ ಮಾರುಕಟ್ಟೆಗಳು ಸಂತೋಷದಿಂದ ಸ್ವಾಗತಿಸಿವೆ. ಅವರೂ ಮಾರುಕಟ್ಟೆಗೆ ಪ್ರಿಯವಾಗುವ ಮಾತುಗಳನ್ನೇ ಆಡಿದ್ದಾರೆ. ಪಶ್ಚಿಮದಲ್ಲಿ ಆರ್ಥಿಕ ಮಾರುಕಟ್ಟೆಗಳ ತಾಂಡವ ನಡೆಯುತ್ತಿದ್ದಾಗ ಅಪಾಯದ ಗಂಟೆಯನ್ನು ಬಾರಿಸಿದ ಖ್ಯಾತಿ ರಾಜನ್ ಅವರದ್ದು. ಆದರೆ ಹಿಂದಿನ ಮುಖ್ಯಸ್ಥರಾಗಿದ್ದ ರೆಡ್ಡಿ ಮತ್ತು ಸುಬ್ಬಾರಾವುಗಳಿಗೆ ಹೋಲಿಸಿದರೆ ರಾಜನ್ ಮಾರುಕಟ್ಟೆಯ ಕಡೆಗೇ ವಾಲುತ್ತಾರೆ.

ಮುಂದೆ.....


ರಿಜರ್ವ್ ಬ್ಯಾಂಕಿನ ಸ್ವಾತಂತ್ರವನ್ನು ಕಾಪಾಡಿದ ದುವ್ವೂರಿ ಸುಬ್ಬಾರಾವು

ಭಾರತೀಯ ರಿಜರ್ವ್ ಬ್ಯಾಂಕಿನ ಮುಖ್ಯಸ್ಥರಾದ ಶ್ರೀ ದುವ್ವೂರಿ ಸುಬ್ಬಾರಾವು ಸೆಪ್ಟೆಂಬರ್ 4ಕ್ಕೆ ನಮ್ಮ ಅಧಿಕಾರಾವಧಿಯನ್ನು ಮುಗಿಸುತ್ತಾರೆ. ಸುಬ್ಬಾರಾವು ರಿಜರ್ವ್ ಬ್ಯಾಂಕಿಗೆ ಬರುವುದಕ್ಕೆ ಮೊದಲು ಭಾರತ ಸರಕಾರದ ವಿತ್ತ ಮಂತ್ರಾಲಯದಲ್ಲಿದ್ದರು. ಅವರು ರಿಜರ್ವ್ ಬ್ಯಾಂಕಿಗೆ ಬಂದಾಗ, ವಿತ್ತ ಮಂತ್ರಾಲಯದ ನೀತಿಗಳಿಗನಸಾರವಾಗಿ ನಡೆದುಕೊಳ್ಳಬಹುದೆಂಬ ಅಪೇಕ್ಷೆ ಅವರನ್ನು ನೇಮಕ ಮಾಡಿದವರಿಗಿತ್ತು. ಆ ಅಪೇಕ್ಷೆಯಂತೆಯೇ ನಡೆದುಕೊಳ್ಳಬಹುದೆಂಬ ನಿರೀಕ್ಷೆ ಇತರರದ್ದಾಗಿತ್ತು. ಹಿಂದಿನ ಮುಖ್ಯಸ್ಥ ವೇಣುಗೋಪಾಲ ರೆಡ್ಡಿಯವರು ತಮ್ಮ ಸ್ವತಂತ್ರ ನಿಲುವಿಗೆ ಹೆಸರುವಾಸಿಯಾಗಿದ್ದವರು. ರೆಡ್ಡಿಯವರಿಗಿಂತ ಭಿನ್ನವಾಗಿ, ವಿತ್ತಮಂತ್ರಾಲಯದ ದಿಶಾನಿರ್ದೇನಕ್ಕನುಸಾರವಾಗಿ ಸಾಗಬಹುದೆಂದುಕೊಂಡಿದ್ದವರ ನಿರೀಕ್ಷೆಯನ್ನು ಹುಸಿಮಾಡಿ ಸುಬ್ಬಾರಾವು ತಮ್ಮ ಸ್ಥಾನದ ಸ್ವಾತಂತ್ರವನ್ನು ಕಾಪಾಡಿಕೊಂಡು ಬಂದರು.



ಸಹಕಾರಕ್ಕೆ ಕರುಣೆ ಸುತ್ತೋಲೆಗಳ ಕಂಟಕ

ಹೊರಗಿನವರು ನಮ್ಮ ಒಂದು ಗ್ರಾಮಕ್ಕೆ ಭೇಟಿ ನೀಡಿದರೆ, ಅಲ್ಲಿ ಸಾಮಾನ್ಯವಾಗಿ ಉಳಿದುಕೊಳ್ಳುವ ವ್ಯವಸ್ಥೆಯಿರುವುದಿಲ್ಲ. ಹತ್ತಿರದ ತಾಲೂಕು ಪಟ್ಟಣದ ಸರ್ಕೀಟ್ ಹೌಸೇ ಹೊರಗಿನವರಿಗೆ ಸಿಗಬಹುದಾದ ತಂಗುದಾಣ. ಬಾಡಿಗೆಗೂ ಮನೆಗಳು ಸಿಗುವುದು ದುರ್ಲಭ. ಒಂದು ಗ್ರಾಮದಲ್ಲಿ ಸಾಧಾರಣ ನಮಗೆ ಟಪಾಲಾಪೀಸು, ಹಾಲಿನ ಸಂಘ, ಪ್ರಾಥಮಿಕ ಶಾಲೆ, ಪಂಚಾಯ್ತಿ ಮತ್ತು ಗುಡಿ ಕಾಣಸಿಗಬಹುದು. ಈ ಎಲ್ಲವನ್ನೂ ಸ್ಥಳೀಯರೇ, ಅಥವಾ ಆಸುಪಾಸಿನ ಊರಿನವರೇ ನಡೆಸುತ್ತಾರೆ. ಹೀಗೆಯೇ ಹಲವು ಗ್ರಾಮಗಳಿಗೊಂದರಂತೆ ನಮಗೆ ಪ್ರಾಥಮಿಕ ವ್ಯವಸಾಯ ಪತ್ತಿನ ಸೇವಾ ಸಹಕಾರ ಸಂಘಗಳೂ ಕಾಣಿಸುತ್ತಿದ್ದುವು. ಈ ಸಂಘಗಳ ನಿರ್ವಹಣೆಯನ್ನು ಸ್ಥಳೀಯರು ನಡೆಸುತ್ತಿದ್ದರು, ಗ್ರಾಮದ ಯುವಕನೊಬ್ಬ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ, ಸಹಕಾರ ಸಂಘದ ವ್ಯಾಪಾರಕ್ಕನುಸಾರವಾಗಿ ಒಂದಿಬ್ಬರು ಹುಡುಗರಿಗೂ ಅಲ್ಲಿ ಕೆಲಸ ಸಿಗುತ್ತಿತ್ತು. ಈ ಸಂಘ ಗ್ರಾಮದ ರೈತರನ್ನು ಒಂದೆಡೆಗೆ ಸೇರಿಸುವ ಕೆಲಸ ಮಾಡುತ್ತಿತ್ತು. ಒಂದೆಡೆಗೆ ಸೇರಲು – ಅಥವಾ ಸಂಘಕ್ಕೆ ರೈತರು ಬರಲು ಮುಖ್ಯವಾದ ಕಾರಣವೆಂದರೆ ಆ ಸಂಘ ರೈತರ ಕೃಷಿಗೆ ಸಾಲವನ್ನು ನೀಡುತ್ತಿತ್ತು. ಅವರ ಹಣ ಠೇವಣಿಯಾಗಿಟ್ಟರೆ ಸ್ವೀಕರಿಸುತ್ತಿತ್ತು. ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುತ್ತಿತ್ತು. ಹೀಗೆ ಗ್ರಾಮಸ್ಥರಿಗೆ ರಾಜಕೀಯ ಚರ್ಚಿಸಲು ಪಂಚಾಯ್ತಿ ಕಟ್ಟೆಯಿಂದ್ದಂತೆ, ಕೃಷಿಯನ್ನೂ ಅದರ ಅರ್ಥಿಕತೆಯನ್ನು ಹಂಚಿಕೊಳ್ಳಲು ಪತ್ತಿನ ಸಹಕಾರ ಸಂಘಗಳಿದ್ದುವು.

ಮುಂದೆ.....





ಸಮತಾವಾದ ಮತ್ತು ಬೆಳವಣಿಗೆ: ಯಾವುದು ಹಿತ?




ಈಚಿನ ರಾಜಕೀಯ ಬೆಳವಣಿಗೆಯ ನಡುವೆ ಗರಮಾಗರಂ ಚರ್ಚೆಗೆ ಒಳಗಾಗಿರುವುದು ಅಮಾರ್ತ್ಯ ಸೇನ್ ಮತ್ತು ಜಗದೀಶ್ ಭಗವತಿಯವರ ಅರ್ಥಶಾಸ್ತ್ರದ ಜಟಾಪಟಿ. ಇದು ದೇಶದ ಪ್ರಗತಿಯ ಹಾದಿಯನ್ನು ಆರಿಸಿಕೊಳ್ಳುವ ಜಟಾಪಟಿಯೂ ಹೌದು. ಆದರೆ ದುರಂತವೆಂದರೆ ಅದನ್ನು ರಾಜಕೀಯ ಪಕ್ಷಗಳ ಪರ-ವಿರೋಧವಾಗಿ ನಿಲ್ಲಿಸಿ ಕಪ್ಪು-ಬಿಳುಪಿನಲ್ಲಿ ಬಣ್ಣಿಸುವ ಪ್ರಕ್ರಿಯೆ ಪ್ರಾರಂಭವಾಗಿಬಿಟ್ಟಿದೆ. ಯಾರು ಮಾರುಕಟ್ಟೆ ಪರ, ಯಾರು ವಿರೋಧಿಗಳು, ಯಾರು ದೇಶವನ್ನು ಲೈಸೆನ್ಸ್ ರಾಜ್ ಕಡೆಗೆ ಹಿನ್ನಡೆಸುತ್ತಿದ್ದಾರೆ ಎಂದೆಲ್ಲಾ ಚರ್ಚೆಗಳು ಬಂದಿವೆ. ಆದರೆ ಈ ರೀತಿಯ ಚರ್ಚೆಗಳು ಅರ್ಥಶಾಸ್ತ್ರದ ದಿಗ್ಗಜರಾದ ಇಬ್ಬರಿಗೂ ಮಾಡುತ್ತಿರುವ ಅನ್ಯಾಯವೇ ಆಗಿದೆ. ಮಾರುಕಟ್ಟೆಯನ್ನು ನಂಬುವವರೂ ಬಡತನದ ಉಚ್ಚಾಟನೆಯ ಮಾರ್ಗಗಳ ಬಗ್ಗೆ ಯೋಚಿಸುತ್ತಾರೆ – ಹಾಗೂ ಅವರನ್ನು ಅರ್ಥವ್ಯವಸ್ಥೆಯಲ್ಲಿ ಒಳಗೊಳ್ಳುವ ರೀತಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಮಾರುಕಟ್ಟೆಯೇ ಆರಾಧ್ಯ ದೇವರೆಂಬ ನಂಬಿಕೆಯನ್ನು ಪ್ರಶ್ನಿಸುವವರೂ ಮಾರುಕಟ್ಟೆಯ ಚೌಕಟ್ಟನ್ನು ಗುರುತಿಸಿ ಅದರಲ್ಲಿ ನಡೆಯಬೇಕಾದ ಸುಧಾರಣೆಯನ್ನು ಚರ್ಚಿಸುತ್ತಾರೆಯೇ ಹೊರತು 
ಮಾರುಕಟ್ಟೆಯನ್ನು ಅಲ್ಲಗಳೆಯುವುದಿಲ್ಲ.

ಮುಂದೆ.......



ಗೋಡೆ ಸರಹದ್ದುಗಳ ನಡುವೆ ನಲುಗುವ ಬಜೆಟ್ಟು

ಬಜೆಟ್ಟು ಮಂಡಿಸುವುದು ಸರಳವಾದ ಕೆಲಸವೇನೂ ಅಲ್ಲ. ಅದರಲ್ಲೂ ತೆರಿಗೆಗಳನ್ನೇರಿಸದೇ, ಜನಪರ-ರೈತಪರ-ಬಡವರ ಪರ ಬಜೆಟ್ಟನ್ನು ಮಂಡಿಸುವುದು ಹುಲಿಸವಾರಿಯಂತಹ ಕಠಿಣವಾದ ಕೆಲಸವೇ. ಆ ಕೆಲಸದ ನಡುವೆ ನಮ್ಮಂತಹವರ ಅವಸ್ವರವನ್ನೂ ವಿತ್ತ-ಮುಖ್ಯ ಮಂತ್ರಿಗಳು ಕೇಳಬೇಕು. ಅಂದರಿಕೀ ಮಂಚಿವಾಡು ಆಗುವುದು ಸಾಧ್ಯವೇ ಇಲ್ಲವಾದ್ದರಿಂದ ಸರಕಾರ, ಖಾತೆ-ವಿಭಾಗಗಳ ಗೋಡೆ ಸರಹದ್ದುಗಳ ನಡುವೆ ಬಜೆಟ್ಟನ್ನು ರೂಪಿಸಬೇಕು. ಈ ರೀತಿಯ ಕಿಂಡಿಗಳನ್ನೇರ್ಪಡಿಸಿ ಅವುಗಳಿಗೆ ಹಣವನ್ನು ತುಂಬುವ, ಅದರಿಂದ ಖರ್ಚು ಮಾಡುವುದರಲ್ಲಿ ಬಜೆಟ್ಟನ್ನು ರೂಪಿಸವ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಅಪಾಯವಿದೆ.







ನರೇಗಾ, ಒಂದು ರೂಪಾಯಿಗೆ ಕಿಲೋ ಅಕ್ಕಿ ಮತ್ತು ಸೋಮಾರಿತನ

ಒಂದು ರೂಪಾಯಿಗೆ ಕಿಲೋ ಅಕ್ಕಿಯನ್ನು ಬಡವರಿಗೆ ಪಡಿತರ ವ್ಯವಸ್ಥೆಯ ಮೂಲಕ ಸರಬರಾಜು ಮಾಡುವುದಾಗಿ ಸರಕಾರ ಘೋಷಿಸಿದಾಗಿನಿಂದಲೂ ಆ ಬಗ್ಗೆ ಅನೇಕ ಚರ್ಚೆಗಳು ಬಂದಿವೆ. ಅದರಲ್ಲಿ ಮುಖ್ಯವಾದದ್ದು ಈ ಯೋಜನೆಯಿಂದ ಬಡವರು ಸೋಮಾರಿಗಳಾಗುತ್ತಾರೆ ಎನ್ನುವ ಮಾತು. ನಗರದ ಆಟೋರಿಕ್ಷಾ ಚಾಲಕರನ್ನೂ ನಾವು ಎಷ್ಟೋ ಬಾರಿ ಸೋಮಾರಿಗಳೆಂದು ಕರೆಯುತ್ತೇವೆ. ಕೆಲವು ಕಟ್ಟೆಗಳನ್ನು ಬಿಟ್ಟರೆ ನೀವು ಸೋಮಾರಿ ಆಟೋ ಚಾಲಕರನ್ನು ನೋಡಿದ್ದೀರಾ? ಅಕಸ್ಮಾತ್ ಆಟೋ ಚಾಲಕ ನಾವು ಕೇಳಿದ ಜಾಗಕ್ಕೆ ಬರದೇ ಇದ್ದರೆ ಆ ಸವಾರಿ ಆತನಿಗೆ ಗಿಟ್ಟುವುದಿಲ್ಲ ಎನ್ನುವುದೇ ಪ್ರಮುಖ ಕಾರಣವಾಗಬಹುದಾದರೂ ಸೋಮಾರಿತನ ಕಾರಣವಲ್ಲ. ಈ ಸವಾರಿಯನ್ನು ಬಿಟ್ಟುಕೊಡುವುದರಿಂದ ಆತನಿಗೆ ಇನ್ನೂ ದೂರ ಕ್ರಮಿಸುವ ಹೆಚ್ಚಿನ ಕೆಲಸದ ಸಾಧ್ಯತೆಯನ್ನಾತ ಪರಿಗಣಿಸಿರುತ್ತಾನೆ. ಹೀಗಾಗಿ ನಮ್ಮ ಸಮಾಧಾನಕ್ಕೆ ನಾವು ಅವರನ್ನು ಸೋಮಾರಿಗಳೆಂದು ಬೈದುಕೊಳ್ಳಬಹುದಾದರೂ, ಉದ್ಯಮಶೀಲತೆಯ ದೃಷ್ಟಿಯಿಂದ ನೋಡಿದರೆ ನಮಗೆ ಹೊಸ ಅರ್ಥದ ಹೊಳಹುಗಳೇ ಸಿಗುತ್ತವೆ. ಒಂದು ನಿಗದಿತ ಬೆಲೆಗೆ ಕೆಲಸ ಮಾಡದಿರುವುದಕ್ಕೂ ಸೋಮಾರಿತನಕ್ಕೂ ಮೂಲಭೂತವಾದ ವ್ಯತ್ಯಸವಿದೆ.



ಗುಟ್ಕಾ ನಿಷೇಧದ ವಿಚಾರಗಳು

ರಾತ್ರೆ ಒಂಬತ್ತೂವರೆ. ರಾಷ್ಟ್ರೀಯ ಎಕ್ಸಪ್ರೆಸ್ವೆ ನಂಬರ್ ಒಂದರಲ್ಲಿ ನಾನು ಆಣಂದದಿಂದ ಅಹಮದಾಬಾದಿಗೆ ಹೊರಡಬೇಕು. ಆ ರಸ್ತೆಯನ್ನು ಪ್ರವೇಶಿಸಿದರೆ ಮತ್ತೆ ಹೊರಬರಲು ಸಾಧ್ಯವಿಲ್ಲ, ವೇಗವಾಗಿಯೇ ಕಾರನ್ನು ಚಲಾಯಿಸಬೇಕು. ನನ್ನನ್ನು ಒಯ್ಯುತ್ತಿದ್ದ ಟ್ಯಾಕ್ಸಿಯ ಚಾಲಕ ಹೊರವಲಯದಲ್ಲಿ ಗಕ್ಕನೆ ನಿಲ್ಲಿಸಿದ. "ಏನಾಯಿತು?" ಎಂದೆ. "ಏನಿಲ್ಲ, ವಿಪರೀತ ನಿದ್ದೆ, ಸ್ವಲ್ಪ ಗುಟ್ಕಾ ತಿಂದರೆ ಸರಿಹೋಗುತ್ತದೆ" ಎಂದ. ಎರಡು ಪೊಟ್ಟಣ ಗುಟ್ಕಾ ಹಿಡಿದು ಬಂದ. ನನಗೆ ನಗುವಿಲ್ಲ, ಅಳುವಿಲ್ಲ. ಆತಂಕದಲ್ಲಿ(ಗುಟ್ಕಾ ಸೇವಿಸದೆಯೇ) ಕಣ್ಣೂ ಮಿಟುಕಿಸದಂತೆ ಜೀವವನ್ನು ಕೈಯಲ್ಲಿಹಿಡಿದು ಕೂತಿದ್ದೆ. ಯಾವ ತೊಂದರೆಯೂ ಇಲ್ಲದೆ, ಪೂರ್ಣ ಎಚ್ಚರದಿಂದ ನನ್ನನ್ನು ಬಿಡಬೇಕಾದ ಸ್ಥಳಕ್ಕೆ ಬಿಟ್ಟ. ಗುಟ್ಕಾದ ಗುಣಗಾನಕ್ಕೆ ಇದೂ ಒಂದು ಉದಾಹರಣೆ. ಕಷ್ಟಪಟ್ಟು ಕೆಲಸಮಾಡುವವರಿಗೆ ಗುಟ್ಕಾದಿಂದ ಉತ್ಪಾದಕತೆ ಹೆಚ್ಚಿ, ಆದಾಯವೂ ಹೆಚ್ಚುತ್ತದೆ. ಆದರೆ ಇದು ಸಮಂಜಸವಾದ ವಾದವೇ?

ಮುಂದೆ....


ಮಾರುಕಟ್ಟೆಗೆ ಒಡ್ಡಿಕೊಂಡ ಆಧುನಿಕ ಜೀತದಾಳುಗಳು

ಕಳೆದ ಕೆಲವು ದಿನಗಳಿಂದ ನಡೆದಿರುವ ವಿದ್ಯಮಾನಗಳು ಮಾರುಕಟ್ಟೆಯ ಅತಿರೇಕದ ಪ್ರತೀಕವಾಗಿರುವಂತಿದೆ. ಕ್ರಿಕೆಟ್ಟಿನಲ್ಲಿ, ಕಾರ್ಪರೇಟ್ ಜಗತ್ತಿನಲ್ಲಿ ಕಾಣುತ್ತಿರುವ ಮೌನದ ಸಂಚು ರಾಜಕೀಯಕ್ಕೂ-ವ್ಯಾಪಾರಕ್ಕೂ ಇರುವ ಮೂಲಭೂತ ವ್ಯತ್ಯಾಸಗಳನ್ನು ತೆರೆದಿಟ್ಟಿದೆ. ಇದರಿಂದ ವ್ಯಾಪಾರೀ ಜಗತ್ತಿನ ಕಾರ್ಯದಕ್ಷತೆಯನ್ನು ಹೊಸ ರೀತಿಯಿಂದ ಅರ್ಥೈಸುವುದಕ್ಕೂ ಸಾಧ್ಯವಾಗಿದೆ. ಈ ಎಲ್ಲದರ ಮಧ್ಯೆ ಸಂಸ್ಥಾಗತ ವ್ಯವಸ್ಥೆಯನ್ನು ಗಮನಿಸುತ್ತಿರುವವರಿಗೆ ಇವು ಖುಷಿಯದಿನಗಳೇನೂ ಅಲ್ಲ.






ಅಂತರರಾಷ್ಟ್ರೀಯ ಬುಕರ್ ಗೆ ಅನಂತಮೂರ್ತಿಯವರ ಓಟ!

ಅನಂತಮೂರ್ತಿಯವರಿಗೆ ಅಂತರರಾಷ್ಟ್ರೀಯ ಮ್ಯಾನ್ ಬುಕರ್ ಬಹುಮಾನ ಬರುವುದೋ ಇಲ್ಲವೋ ಎನ್ನುವ ಸಸ್ಪೆನ್ಸ್ ಈಗ ಮುಗಿದಿದೆ. ಮತ್ತೊಮ್ಮೆ ಅದು ಇಂಗ್ಲೀಷ್ ಮಹಾಮಾತೆಯ ಪಾಲಾಗಿದೆ. ಇದರ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆದಿದೆ.

ಅಂತರರಾಷ್ಟ್ರೀಯ ಮ್ಯಾನ್ ಬುಕರನ್ನು ಎರಡು ವರ್ಷಕ್ಕೊಮ್ಮೆ ಕೊಡಲಾಗುತ್ತದೆ. ಇದು ಅರವಿಂದ ಅಡಿಗರಿಗೆ ಬಂದ ಮ್ಯಾನ್ ಬುಕರ್ ಗಿಂತ ಭಿನ್ನವಾದ ಬಹುಮಾನ. ಮ್ಯಾನ್ ಬುಕರ್ ಬಹುಮಾನವನ್ನು ಪ್ರತೀ ವರ್ಷ ಕಾಮನ್ವೆಲ್ತ್ ಪ್ರಾಂತದಿಂದ ಇಂಗ್ಲೀಷಿನಲ್ಲಿ ಪ್ರಕಟಗೊಂಡ ಕೃತಿಗೆ ನೀಡಲಾಗುತ್ತದೆ. ಇಂಗ್ಲೀಷಿನಲ್ಲಿ ಅಥವಾ ಇಂಗ್ಲೀಷ್ ಅನುವಾದದಲ್ಲಿ ಲಭ್ಯವಿರುವ ಯಾವುದೇ ರಾಷ್ಟ್ರದ ಲೇಖಕರ ಜೀವನಕಾಲದ ಸಾಹಿತ್ಯಕೃಷಿಯನ್ನು ಗುರುತಿಸುತ್ತಾ ಈ ಬಹುಮಾನವನ್ನು ನೀಡಲಾಗುತ್ತದೆ.


ಸಹಕಾರಕ್ಕೆ ಸಮಾಜಶಾಸ್ತ್ರವನ್ನು ಲೇಪಿಸಿದ ಬಾವಿಸ್ಕರ್ ಅವರನ್ನು ನೆನೆಯುತ್ತಾ

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಬಿ.ಎಸ್.ಬಾವಿಸ್ಕರ್ ಏಪ್ರಿಲ್ ನಲ್ಲಿ ತೀರಿಕೊಂಡ ಸುದ್ದಿ ಯಾವ ಪತ್ರಿಕೆಯಲ್ಲೂ ಬಂದಂತಿಲ್ಲ. ಅವರ ಜೊತೆ ಕೆಲಸ ಮಾಡಿದ್ದ ಡಾನ್ ಆಟವುಡ್ ಒಂದು ಪುಟ್ಟ ಲೇಖನವನ್ನು ಬರೆದು ಪ್ರಕಟಿಸುವುದರ ಮೂಲಕ ನಮಗೆ ಬಾವಿಸ್ಕರ್ ಸಾವಿನ ಸುದ್ದಿ ಮುಟ್ಟಿದೆ. ಸಹಕಾರ ಚಳುವಳಿಯ ಬಗ್ಗೆ ವಿಸ್ತೃತ ಕೆಲಸ ಮಾಡಿದ್ದ ಬಾವಿಸ್ಕರ್ ಅವರನ್ನು ಮಾರುಕಟ್ಟೆಯ ಲೋಕ ಮರೆತಿರುವುದು ದುರಂತವೇ ಆಗಿದೆ. 

ಮುಂದೆ.....


ಸಿದ್ಧರಾಮಯ್ಯನವರ ರೈತವಿರೋಧಿ ಘೋಷಣೆಗಳು

ತಾವು ಅಧಿಕಾರ ವಹಿಸಿಕೊಂಡ ಕೆಲವೇ ಘಂಟೆಗಳಲ್ಲಿ ನೂತನ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕಾಂಗ್ರೆಸ್ ಪಕ್ಷದ ಚುವಾವಣಾ ಪ್ರಣಾಳಿಕೆಯಲ್ಲಿದ್ದ ಕೆಲವು ಆಶ್ವಾಸನೆಗಳನ್ನು ಕಾರ್ಯರೂಪಕ್ಕಿಳಿಸುವ ಘೋಷಣೆಗಳನ್ನು ಮಾಡಿದರು. ಈ ಘೋಷಣೆಗಳಲ್ಲಿ ಕೆಲವು ಬಡವರ ಪರವಾಗಿರಬಹುದಾದರೂ (ಸಾಲಮನ್ನಾ, ರೂಪಾಯಿಗೊಂದು ಕಿಲೋ ಅಕ್ಕಿ) ರೈತವಿರೋಧಿಯಾಗಿದೆ ಎನ್ನುವುದನ್ನು ನಾವು ಮನಗಾಣಬೇಕಾಗಿದೆ.

ಮುಂದೆ.....


ಶ್ರೀಮಂತಿಕೆಯ ವೈಭವೀಕರಣದ ಸಂದರ್ಭದಲ್ಲಿ ಕೇಳಲೇಬೇಕಾದ ಕಷ್ಟದ ಪ್ರಶ್ನೆಗಳು

ಫೋರ್ಬ್ಸ್ ಪತ್ರಿಕೆಯ ಬಿಲಿಯಾಧೀಶರ ಪಟ್ಟಿ ಈಚೆಗಷ್ಟೇ ಪ್ರಕಟವಾಗಿದೆ. ಈ ಬಾರಿ 1,426 ಜನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ 55 ಭಾರತೀಯರೂ ಒಳಗೊಂಡಿದ್ದಾರೆ.  ಒಂದು ಬಿಲಿಯನ್ ಡಾಲರುಗಳೆಂದರೆ, ಸುಮಾರು 5,000 ಕೋಟಿ ರೂಪಾಯಿಗಳಿಗಳು. ಭಾರತದ ಅತೀ ಶ್ರೀಮಂತರಾದ ಮುಕೇಶ್ ಅಂಬಾನಿಯವರ ಒಟ್ಟಾರೆ ಆಸ್ತಿ 1 ಲಕ್ಷ ಕೋಟಿಗೂ ಮೀರಿದೆ. 27 ಅಂತಸ್ತಿನ 5,000 ಕೋಟಿ ರೂಪಾಯಿ ಬೆಲೆಯ ಅವರ ಮುಂಬಯಿನ ಮನೆಯೊಂದೇ ಈ ಪಟ್ಟಿಯಲ್ಲಿ ಅವರನ್ನು ಷಾಮೀಲಾಗಿಸಲು ಸಾಕಾಗಿತ್ತು. ಅವರ ಸಂಪತ್ತಿನ

ಮುಂದೆ.......



ಸಹಕಾರೀ ಕ್ಷೇತ್ರದಲ್ಲಿ "ಪ್ರಗತಿ”ಯ ಗೊಂದಲ


ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಲದ  (ಅಮುಲ್) 2012-13ವರ್ಷದ ವ್ಯಾಪಾರ  13,750 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ. ಈ ಪ್ರಗತಿಯನ್ನು ನೋಡಿ ಮೆಚ್ಚುತ್ತಲೇ ಕೆಲವು ಕಷ್ಟದ ಪ್ರಶ್ನೆಗಳನ್ನು ನಾವು ಕೇಳಬೇಕು. ಸಹಕಾರಿ ಸಂಸ್ಥೆಗಳಲ್ಲಿ ಬೆಳೆವಣಿಗೆಯ/ಯಶಸ್ಸಿನ ಮಾಪನವೇನು? ಅವುಗಳಿಗೆ ಬೆಳವಣಿಗೆಯ ಮಿತಿಯಿರಬೇಕೇ? ಸಹಕಾರಿ ಸಂಸ್ಥೆಗಳು ಸ್ಥಳೀಯತೆಯನ್ನು ಎಷ್ಟು ಕಾಪಾಡಬೇಕು? ಇವು ಸರಳವಾದ ಪ್ರಶ್ನೆಗಳಲ್ಲವಾದರೂ ಕೇಳಲೇಬೇಕಾದ ಪ್ರಶ್ನೆಗಳು.





ಸಂಶೋಧನೆ, ವಿದ್ಯೆ, ಮತ್ತು ಖಾಸಗೀಕರಣ

ಕ್ಯಾನ್ಸರ್ ಗೆ ಬಳಸುವ ಔಷಧಿಯಾದ ಗ್ಲಿವೆಕ್ಕನ್ನು ತಯಾರಿಸಿ ಮಾರಾಟಮಾಡುವ ಏಕಸ್ವಾಮ್ಯ ಹಕ್ಕಿಗೆ ಅರ್ಜಿ ಸಲ್ಲಿಸಿದ್ದ ನೊವಾರ್ಟಿಸ್ ಸಂಸ್ಥೆಯ ಮನವಿಯನ್ನು ತಿರಸ್ಕರಿಸಿ ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿದೆ. ನೊವಾರ್ಟಿಸ್ ಸಂಸ್ಥೆ ಗೊಣಗುತ್ತಲೇ, ಭಾರತದ ಸಂದರ್ಭದಲ್ಲಿ ಮುಂದೆ ಹೊಸ ಔಷಧಗಳ ಸಂಶೋಧನೆಗೆ ಹಣ ಹೂಡುವುದು ಕಷ್ಟವೆಂಬ ಬೆದರಿಕೆ ಹಾಕಿ ಈ ತೀರ್ಪನ್ನು ಒಪ್ಪಿದೆ. ಜೀವವನ್ನುಳಿಸುವ ಔಷಧವನ್ನು ಯಾವ ಬೆಲೆಗೆ ಮಾರಬೇಕು, ಅದನ್ನು ರೂಪಿಸಲಾಗುವ ಸಂಶೋಧನೆಯ ಖರ್ಚನ್ನು ಯಾರು ಭರಿಸಬೇಕು ಅನ್ನುವುದು ಬಹು ಚರ್ಚಿತ ಮಾತು. ವೈದ್ಯಕೀಯ ಕ್ಷೇತ್ರದಲ್ಲಿ ಜನರ ಜೀವ ಒಳಗೊಂಡಿರುವುದರಿಂದ ಈ ಚರ್ಚೆ ಹೆಚ್ಚಿನ ಮಹತ್ವವನ್ನು ಪಡೆಯುತ್ತದಾದರೂ ಇದು ಈ ಕ್ಷೇತ್ರಕ್ಕೆ ಸೀಮಿತವಾಗಿಲ್ಲ.

ಮುಂದೆ.......



ಸಹಕಾರಕ್ಕೂ ಸರಕಾರಕ್ಕೂ ಇರಬೇಕಾದ ದೂರ


ಸಹಕಾರೀ ಕ್ಷೇತ್ರದಲ್ಲಿರುವ ಗುಜರಾತಿನ ಅಮುಲ್ ಸಂಸ್ಥೆ ಜಗತ್ತಿನಲ್ಲಿಯೇ ಮಾದರಿ ಸಹಕಾರಿ ಸಂಸ್ಥೆಯಾಗಿ ನಿಂತಿದೆ. ಆದರೆ ಅಮುಲ್ ಸಂಸ್ಥೆಯನ್ನು ಕಟ್ಟಿದ ನಾಯಕರು ರಾಜಕೀಯವಾಗಿ ಯಾವ ಸಾಫಲ್ಯವನ್ನೂ ಪಡೆಯಲಿಲ್ಲ. ಯಾರೂ ಮುಖ್ಯಮಂತ್ರಿಯಾಗಲಿಲ್ಲ, ದೊಡ್ಡ ರಾಜಕೀಯ ಹುದ್ದೆಯನ್ನಲಂಕರಿಸಲಿಲ್ಲ. ಅಮುಲ್ ಸಂಸ್ಥೆಯ ಮುಖವಾಗಿ ನಮಗೆ ಕಂಡದ್ದು ಕುರಿಯನ್ ಎಂ ರೈತಹಿತೈಶಿ ಮಾತ್ರ. ಅಮುಲ್ ಮೊದಲಿನಿಂದಲೂ ಸರಕಾರವನ್ನು ದೂರವಾಗಿಯೇ ಇಟ್ಟಿದೆ. ಸರಕಾರ ಅಮುಲ್ ಮೇಲೆ ಕೈಯಿಕ್ಕಿದಾಗೆಲ್ಲಾ ಕೈಸುಟ್ಟುಕೊಂಡಿದೆ.





ವಿಕಾಸ ವಿತ್ತೀಯ ಸಂಸ್ಥೆಗಳೂ, ವ್ಯಾಪಾರಿ ಬ್ಯಾಂಕುಗಳೂ...

ಅಹಮದಾಬಾದಿನ ಮಹಿಳಾ ಸೇವಾ ಬ್ಯಾಂಕಿನಲ್ಲಿ ನೌಕರರು, ಗ್ರಾಹಕರು, ಶೇರುದಾರರು, ಪಾಲಕವರ್ಗದವರು ಎಲ್ಲರೂ ಮಹಿಳೆಯರೇ. ಸೇವಾ ಬ್ಯಾಂಕಿರುವುದು ಆಧುನಿಕ ಕಟ್ಟಡದಲ್ಲಿ. ಪಕ್ಕದಲ್ಲಿ ಬ್ಯಾಂಕ್ ನ್ಯಾಷನಲ್ ದ ಪಾರಿಬಾ ಎಂಬ ವಿದೇಶೀ ಬ್ಯಾಂಕಿನ ಚಮಕ್ ದಾರ್ ಕಾರ್ಯಾಲಯವಿದೆ. ಸೇವಾ ಬ್ಯಾಂಕಿನ ಗ್ರಾಹಕರು ತಳ್ಳುಗಾಡಿಯಲ್ಲಿ, ರಸ್ತೆಬದಿಯಲ್ಲಿ ತರಕಾರಿ ಮಾರುವವರು, ಚಿಂದಿ ವ್ಯಾಪಾರದವರು, ಹರಕಲು ಬಟ್ಟೆ ಧರಿಸಿರುವವರು. ಇವರಿಗೆ ಈ ಕಟ್ಟಡಕ್ಕೆ ಬರಲು ಮುಜುಗರವಾಗುತ್ತದೆ. ಬ್ಯಾಂಕ್ ಪಾರಿಬಾದ ಸೆಂಟೇರಿಸಿ ಪ್ಯಾಂಟೇರಿಸಿ ಕಂಠಕ್ಕೆ ಟೈ ಕಟ್ಟಿದ ಗ್ರಾಹಕರ ನೋಟವನ್ನು ತಪ್ಪಿಸಲು, ಮೊದಲ ಮಹಡಿಯ ಹಿಂಬದಿಯಿಂದ ಒಂದು ಪ್ರತ್ಯೇಕ ದ್ವಾರವನ್ನು ಮಾಡಿಸಿಕೊಂಡು ತಮಗೆ ಆಪ್ಯಾಯಮಾನವಾಗುವ ರೀತಿಯಲ್ಲಿ ಕಾರ್ಯಾಲಯವನ್ನು ರೂಪಿಸಿಕೊಂಡಿದ್ದಾರೆ. ಬ್ಯಾಂಕನ್ನು ಹೊಕ್ಕರೆ ಗಿಜಿಗಿಜಿ ಜನ, ಮಕ್ಕಳು, ಕುರುಕಲು ತಿಂಡಿಯ ವ್ಯಾಪಾರ. ಸಂತೆಯ ಅನುಭವವನ್ನು ಈ ಮಹಿಳೆಯರು ಕೇಳಿ ಮಾಡಿಸಿಕೊಂಡಿದ್ದಾರೆ.




ಮಾಹಿತಿಯ ಮಹತ್ವದ ಬೆನ್ನೇರಿ


"ನಮ್ಮ ದೇಶದಲ್ಲಿ ಒಟ್ಟಾರೆ ಇರುವ ಪ್ರಾಥಮಿಕ ವ್ಯವಸಾಯ ಸಹಕಾರಿ ಸಂಘಗಳ ಸಂಖ್ಯೆ ಎಷ್ಟು?" ಇದು ಥಟ್ಟಂತ ಹೇಳಿ ಎಂದು ಕೇಳುತ್ತಿರುವ ಪ್ರಶ್ನೆಯಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವುದು ಸುಲಭವಾಗಿರಬೇಕು. ಆದರೆ ನಿಜಕ್ಕೂ ಈ ಪ್ರಶ್ನೆಗೆ ಉತ್ತರವಿಲ್ಲ. ಪ್ರತೀ ಜಿಲ್ಲೆಯಲ್ಲಿಯೂ ಇರುವ ಸಹಕಾರಿ ಆಡಿಟ್ ಅಧಿಕಾರಿಯ ವತಿಯಿಂದ ಈ ಮಾಹಿತಿಯನ್ನು ಸಂಗ್ರಹಿಸಬಹುದು. ಅದನ್ನು ಒಟ್ಟುಗೂಡಿಸಿ ರಾಜ್ಯ - ರಾಷ್ಟ್ರಮಟ್ಟದ ಮಾಹಿತಿಯನ್ನು ಒದಗಿಸಬಹುದು. ಆದರೆ ಈ ಮಾಹಿತಿಯನ್ನು ವ್ಯವಸ್ಥಿತವಾಗಿ ಕಲೆಹಾಕುವ ಕೆಲಸವನ್ನು 1997-98ರ ನಂತರ ಮಾಡಿಯೇ ಇಲ್ಲ. ಆದರೂ ನಾವುಗಳು ಸಹಕಾರಿ ರಂಗಕ್ಕೆ ಪ್ರಣಾಳಿಕೆಗಳನ್ನು ರೂಪಿಸುವುದನ್ನು ನಿಲ್ಲಿಸಿಲ್ಲ.




ಹೊಸ ಬ್ಯಾಂಕುಗಳು – ಹಳೆಯ ಪದ್ಧತಿಗಳು?


ಭಾರತೀಯ ರಿಜರ್ವ್ ಬ್ಯಾಂಕು ಇನ್ನಷ್ಟು ಹೊಸ ಬ್ಯಾಂಕುಗಳಿಗೆ ಪರವಾನಗಿ ಕೊಡುವ ನಿಟ್ಟಿನಲ್ಲಿ ತನ್ನ ನೀತಿಯನ್ನ ಪ್ರಕಟಮಾಡಿದೆ. 1969ರಲ್ಲಿ ಮೊದಲಿಗೆ ಹಾಗೂ 1975ರಲ್ಲಿ ಎರಡನೆಯ ಕಂತಿನಲ್ಲಿ ನಡೆದ ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಬಹುತೇಕ ಸರಕಾರೀ ಹಿಡಿತದಲ್ಲಿಯೇ ಇತ್ತು. ಇದರಿಂದಾದ ಉಪಯೋಗಗಳು ಅನೇಕ. ಬ್ಯಾಂಕುಗಳು ಸರಕಾರಿ ಸುಪರ್ದಿನಲ್ಲಿದ್ದದ್ದರಿಂದ ಸಾಮಾಜಿಕ ವಿತ್ತೀಕರಣ, ಕೃಷಿಗೆ, ಬಡವರಿಗೆ ಅಲ್ಪಮಟ್ಟಿಗೆ ಬ್ಯಾಂಕಿಂಗ್ ವ್ವವಸ್ಥೆಯಿಂದ ವಿತ್ತೀಯ ಸೇವೆಗಳು ಲಭ್ಯವಾದುವು.




ಯುದ್ಧಕಾಲೇ ಅರ್ಥಾಭ್ಯಾಸ


2001ರಲ್ಲಿ ಅಮೇರಿಕದ ಜಂಟಿ ಗೋಪುರಗಳ ಮೇಲೆ ಧಾಳಿ ನಡೆಸಿ ನೆಲಸಮ ಮಾಡಿದ ಅಲ್ ಕಾಯ್ದಾ ಉರುಳಿಸಿದ್ದು ಬರೇ ಗೋಪುರಗಳನ್ನಷ್ಟೇ ಅಲ್ಲ. ಬದಲಿಗೆ, ಯಾವುದೇ ದೊಡ್ಡ ಆರ್ಥಿಕ ಸಮಸ್ಯೆಯಿಲ್ಲದೆಯೇ, ಬಜೆಟ್ಟಿನಲ್ಲಿ ಖೋತಾ ಇಲ್ಲದೆಯೇ – ಬಿಲ್ ಕ್ಲಿಂಟನ್ನರ ಅಧ್ಯಕ್ಷೀಯಕಾಲದ ಬಂಗಾರಯುಗದ ಮತ್ತಿನಲ್ಲಿದ್ದ ಅಮೆರಿಕದ ಅರ್ಥವ್ಯವಸ್ಥೆಗೆ ಬಲವಾದ ಧಕ್ಕೆ ನೀಡಿತ್ತು. ಜಗತ್ತಿನಿತಿಹಾಸದಲ್ಲಿ ಸೆಪ್ಟೆಂಬರ್ 11 ಈಗೊಂದು ಮಹತ್ವದ ತಾರೀಖಾಗಿದೆ. ಅಂದಿನಿಂದ ವಿಮಾನಯಾನದ ನಿಯಮಗಳು ಬದಲಾಗಿವೆ, ಗುರುತಿನ ಚೀಟಿಗಳ ಅವಶ್ಯಕತೆ ಹೆಚ್ಚಾಗಿದೆ, ಭಯಭೀತಿ ಹೆಚ್ಚಾಗಿದೆ, ಭದ್ರತೆಯ ಹೆಸರಿನಲ್ಲಿನ ತಂತ್ರಜ್ಞಾನವೂ ತತ್ಫಲಿತ ಯಂತ್ರಗಳೂ, ಹೆಚ್ಚಾಗಿದೆ. ಜಗತ್ತಿನ ಅತ್ಯಂತ ಬಲಿಷ್ಠ ದೇಶವಾದ ಅಮೆರಿಕದ ದಿನನಿತ್ಯದ ಭಯಭೀತಿ ನಮಗೆ ಎಲ್ಲೆಲ್ಲೂ ಕಾಣಿಸುತ್ತದೆ.



ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಳೀಯತೆಯ ರಕ್ಷಾಕವಚ


ಹಲವು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಮುಂಜಾನೆಯೂ ಕಾಫಿ, ಮಧ್ಯಾಹ್ನವೂ ಕಾಫಿ, ಸಂಜೆಯೂ ಕಾಫಿ. ಚಹಾ ಅನ್ನುವುದು ಉತ್ತರಭಾರತದ ಅತಿಥಿಗಳು ಬಂದಾಗ ಮಾತ್ರ ತಯಾರಾಗುತ್ತಿತ್ತು. ಅಥವಾ ಯಾರಾದರೂ ಬೇಕೆಂದರೆ – ಅಥವಾ ಯಾವಾಗಲಾದರೊಮ್ಮೆ ಬೇಜಾರಾಯಿತೆಂದರೆ ಚಹಾದ ಸೇವನೆ ನಡೆಯುತ್ತಿತ್ತು. ಆದರೆ 1994ರಲ್ಲಿ ನಮ್ಮ ಮನೆಯ ಕಾಫಿ ಸೇವನೆಯ ಅಭ್ಯಾಸದಲ್ಲಿ ಮೂಲಭೂತ ಬದಲಾವಣೆಯಾಯಿತು. ಆಗಿನಿಂದ, ಮುಂಜಾನೆಯ ಮೊದಲ ಪೇಯ ಕಾಫಿ. ಅಲ್ಲಿಂದ ಮುಂದಕ್ಕೆ ದಿನದಲ್ಲಿ ಹಲವು ಕಪ್ಪುಗಳ ಚಹಾ ಸೇವನೆ. ಪ್ರಮುಖ ಎನ್ನಿಸುವ ಅತಿಥಿಗಳು ಬಂದರೆ ಕಾಫಿ. ಕ್ರಮಕ್ರಮೇಣ ದಿನದಲ್ಲಿ ಕಾಫಿಯೂ ಆಗಬಹುದು, ಚಹಾವೂ ಆಗಬಹುದು ಎನ್ನುವ ಪರಿಸ್ಥಿತಿಗೆ ತಲುಪಿಬಿಟ್ಟೆವು. ಇದು ನಮ್ಮ ಮನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅನೆಕರ ಮನೆಯಲ್ಲಿ ಈ ಮೂಲಭೂತ ಬದಲಾವಣೆಯಾಯಿತು. ಇದಕ್ಕೆ ಕಾರಣ ಮಾತ್ರ ಕುತೂಹಲದ್ದು.



ನೂರು ಮೈಲಿ ಸೂತ್ರ: ಆಹಾರ

ರಾಜಾಸ್ಥಾನದ ಡುಂಗರ್ ಪುರದಲ್ಲಿ ಒಂದು ಸರ್ವೆ ನಡೆಸುತ್ತಿದ್ದ ಕಾಲಕ್ಕೆ ನನ್ನ ಜೊತೆಯಿದ್ದ ರಾಮಾಕಾಂತ ಸಹೂ ಆಹಾರಕ್ಕೆ ತುಂಬಾ ಕಷ್ಟವಾಗುತ್ತಿದೆ ಎಂದು ಅಪಸ್ವರವನ್ನೆತ್ತಿದ. "ಊಟದಲ್ಲಿ ಟೊಮೇಟೋನೇ ಇಲ್ಲ. ಊಟಕ್ಕೆ ರುಚಿಯೇ ಇಲ್ಲ" ಎಂದದ್ದಕ್ಕೆ ಮಾತು ಹಾರಿಸುತ್ತ ಹೇಳಿದ್ದೆ: "ನಮ್ಮ ಅಧ್ಯಯನ ಬಿಟ್ಟು ಡುಂಗರ್ ಪುರದ ತರಕಾರಿ ಮಾರುಕಟ್ಟೆಯ ಆರ್ಥಿಕತೆಯನ್ನ ಪರಿಶೀಲಿಸೋಣ. ಟೊಮೇಟೋ ಎಲ್ಲಿಂದ ಬರುತ್ತೆ, ಸಾರಿಗೆ ಖರ್ಚು ಪರಿಶೀಲಿಸಿ ಆ ಬೆಲೆಗೆ ಇಲ್ಲಿಯ ಬಡವರು ಅದನ್ನು ಕೊಳ್ಳಲು ಸಾಧ್ಯವೇ ನೋಡೋಣ" ಎಂದಿದ್ದೆ. ರಮಾಕಾಂತ ತನ್ನ ಟೊಮೇಟೋ ಬೇಡಿಕೆಯನ್ನು ಬಿಟ್ಟುಕೊಟ್ಟದ್ದರಿಂದ ನಮ್ಮ ಮೂಲ ಸರ್ವೆಯನ್ನು ಮುಂದುವರೆಸಿದ್ದೆವು. ಅಂದೇ ಮಧ್ಯಾಹ್ನ ವಾಪಸ್ಸಾಗುತ್ತಿರುವಾಗ ಡುಂಗರ್ ಪುರದಿಂದ ಅಷ್ಟೇನೂ ದೂರವಲ್ಲದ ಬಿಚ್ಚಿವಾಡದ ಢಾಬಾದಲ್ಲಿ ಭರಪೂರ ಟೊಮೇಟೋ ಸಿಕ್ಕಿತ್ತು. ಹೊರಗಿನ ಜನರಷ್ಟೇ ಉಣ್ಣುವ ಹೆದ್ದರಿಯ ಮೇಲಿದ್ದ ಬಿಚ್ಚಿವಾಡಾದ ಢಾಬಾದಲ್ಲಿ ಸ್ಥಳೀಯರಿರಲೇ ಇಲ್ಲ!



ಲೈಫ್ ಸೈಕಲ್



ಬೆಂಗಳೂರಿನ ಜಯನಗರ ಪ್ರಾಂತವನ್ನು ಸೈಕಲ್ ಸ್ನೇಹೀ ಪ್ರಾಂತವೆಂದು ಘೋಷಿಸಿ ರಸ್ತೆಯ ಇಬ್ಬದಿಗಳಲ್ಲೂ ಸೈಕಲ್ ಗುರುತಿನ ಚಿತ್ರವನ್ನು ಹಾಕಿದ್ದಾರೆ. ಭಾಜಪದ ಶಾಸಕರ ಕ್ರಮದಿಂದ ಯಡ್ಯೂರಪ್ಪನವರ ಕೆಜೆಪಿಗೆ ಎಷ್ಟು ಫಾಯಿದೆಯಾಗುವುದೋ ತಿಳಿಯದು. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿಲ್ಲವಾದ್ದರಿಂದ ಭಾಜಪ ಈ ರೀತಿಯ ಸೈಕಲ್ಲನ್ನು ಹೊಡಯಬಹುದು.

ತಮ್ಮ ಪಕ್ಷದ ಚಿನ್ಹೆಯಾದ ಸೈಕಲ್ಲನ್ನು ಹಿಂದೆ ಶಾಲಾಮಕ್ಕಳಿಗೆ ಮುಫತ್ತಾಗಿ ಹಂಚಿದಕೂಡಲೇ ಚಂದ್ರಬಾಬು ನಾಯುಡು ಚುನಾವಣೆ ಸೋತಿದ್ದರು. ಅದೇ ಕೆಲಸ ಮಾಡಿದ ಜೆಡಿಎಸ್ ನ ನೀತೀಶ್ ಕುಮಾರ್ ಗೆದ್ದಿದ್ದಾರೆ; ಸೈಕಲ್ಲಿನ ಗುರುತನ್ನು ಹೊತ್ತ ಸಮಾಜವಾದಿ ಪಕ್ಷ – ಉತ್ತರಪ್ರದೇಶವನ್ನು ಆಳುತ್ತಿದೆ. ಹೀಗಾಗಿ ಈಚೆಗೆ ಸೈಕಲ್ಲಿನ ನಸೀಬು ಖುಲಾಯಿಸಿದಂತೆನ್ನಿಸುತ್ತಿದೆ. ಇದರಲ್ಲಿ ನಿಜವಾದ ಸೈಕಲ್ಲಿನ ಪಾತ್ರವೆಷ್ಟೋ, ಚಿನ್ಹೆಯ ಪಾತ್ರವೆಷ್ಟೋ, ಸೈಕಲ್ ದಾರಿಯನ್ನು ಮಾಡಿಕೊಟ್ಟದ್ದರಿಂದ ಆಗಬಹುದಾದ ಫಾಯಿದೆಯೆಷ್ಟೋ ಆ ಚಿನ್ಹೆಯನ್ನ ಕರ್ನಾಟಕದಲ್ಲಿ ಪಡೆದದ್ದರಿಂದ ಯಡ್ಯೂರಪ್ಪನವರಿಗೆ ಏನಾಗಬಹುದೋ ತಿಳಿಯದಾಗಿದೆ.


ಮುಂದೆ........



ಟಾಟಾರ ವ್ಯಾಪಾರವೂ, ಸಮಾಜಿಕ ಕಾರ್ಯಗಳೂ


ವ್ಯಾಪಾರಿ ಜಗತ್ತಿನಲ್ಲಿರುವ ಸಂಸ್ಥೆಗಳೆಲ್ಲಾ ಮಾರುಕಟ್ಟೆಯ ನಿಯಮಾನುಸಾರ ನಡೆದು ಮೂಲಧನವನ್ನು ಒದಗಿಸುವವರ ಶ್ರೀಮಂತಿಕೆಯನ್ನು ಬೆಳೆಯಿಸುತ್ತವೆ. ಈ ಸಂಸ್ಥೆಗಳು ಲಾಭವನ್ನು ಮೂಲಧನ ನೀಡಿದವರಿಗೆ ಲಾಭಾಂಶವನ್ನಾಗಿ ಹಂಚಿಡುತ್ತವೆ. ಕೆಲವು ಸಂಸ್ಥೆಗಳಿಗೆ ಲಾಭದ ಒಂದು ಭಾಗವನ್ನು ಸಾಮಾಜಿಕ ಜವಾಬ್ದಾರಿಯಾಗಿ ಅಭಿವೃದ್ಧಿಯ ಕೆಲಸಗಳಿಗೆ ಪ್ರತ್ಯೇಕವಾಗಿಡುವ ಪರಿಪಾಠವಿದೆ. ಇನ್ಫೋಸಿಸ್ ತನ್ನ ಲಾಭಾಂಶದ ಒಂದು ಪ್ರತಿಶತ ಭಾಗವನ್ನು ಸುಧಾ ಮೂರ್ತಿಯ ಅಧ್ಯಕ್ಷತೆಯ ಇನ್ಫೋಸಿಸ್ ಫೌಂಡೇಷನ್ನಿಗೆ ನೀಡುತ್ತದೆ. ಇದಲ್ಲದೇ ತಮ್ಮ ವೈಯಕ್ತಿಕ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ನೀಡುವ/ಉಪಯೋಗಿಸುವ ಉದಾಹರಣೆಗಳಾಗಿ ಬಿಲ್ ಗೇಟ್ಸ್ವಾರನ್ ಬಫೆಟ್ನಿಲೇಕಣಿ ದಂಪತಿಗಳು,ಪ್ರೇಂಜಿ ಹೀಗೆ ಅನೇಕರಿದ್ದಾರೆ. ಇವೆಲ್ಲಕ್ಕೂ ಅವರುಗಳ ವೈಯಕ್ತಿಕ ನಿರ್ಧಾರವೇ ಮೂಲಪ್ರೇರಣೆಯಾಗಿರುತ್ತದೆ. ಸ್ಟೀವ್ ಜಾಬ್ಸ್ ನಂತಹ ಯಶಸ್ವೀ ವ್ಯಾಪಾರಿ ತನ್ನ ಜೀವನದಲ್ಲಿ ಯಾವುದೇ ದೊಡ್ಡ ದೇಣಿಗೆಯನ್ನೂ ನೀಡದೇ ಇದ್ದುಬಿಟ್ಟ ಎನ್ನುವ ಟೀಕೆಗೆ ಒಳಗಾದರೂಅದು ಆತನ ವೈಯಕ್ತಿಕ ನಿರ್ಧಾರವೆಂದು ಎಲ್ಲರೂ ತೆಪ್ಪಗಾದರು. 


ಮುಂದೆ......



ಯಕ್ಷ ಪ್ರಶ್ನೆ


ಕಛ್ ಪ್ರಾಂತದ ಭುಜ್ ನಗರಕ್ಕೆ ಮತ್ತೊಮ್ಮೆ ಭೇಟಿ ನೀಡಿದೆ. ಸ್ಥಳೀಯ ಚುನಾವಣೆಯ ಪ್ರಚಾರ ಭರದಿಂದ ನಡೆಯುತ್ತಿತ್ತು. ಕಛ್ ಪ್ರಾಂತದಲ್ಲಿ ಮೋದಿಯ ಮೂರು ಆಯಾಮದ ಚಿತ್ರದ ಮೂಲಕ ಪ್ರಚಾರವೂ ನಡೆಯುತ್ತಿತ್ತು. ಅಲ್ಲಿನ ಸ್ಥಳೀಯ ಕಲಾವಂತಿಕೆಯ ನಡುವೆ ಈ ತಂತ್ರಜ್ಞಾನ ಎಲ್ಲಿಂದಲೋ ಟಪಕಾಯಿಸಿದಂತಿತ್ತು. ಬಟ್ಟೆಗಳ ಮೇಲಿನ ಕಸೂತಿ, ಅಜ್ರಕ್ ಪ್ರಿಂಟ್ಸ್, ರೋಗನ್ ಕಲೆ, ಬಾಂದಣಿಯ ತವರೂರಾದ ಕಛ್ ನಲ್ಲಿ ಈ ರೀತಿಯ ತಂತ್ರಗಾರಿಕೆಗೆ ತಾವೆಲ್ಲಿ ಅನ್ನಿಸುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ – ಮುಖ್ಯವಾಗಿ ಭೂಕಂಪದ ನಂತರ ಕಛ್ ಮೂಲಭೂತವಾಗಿ ಬದಲಾಗಿಬಿಟ್ಟಿದೆ. ಅದರಲ್ಲಿ ಮೋದಿಯ ವಿಕಾಸದ ಬೀಜಮಂತ್ರವೂ ಸೇರಿದೆ ಅನ್ನಿಸುತ್ತದೆ. ಆಪ್ತವಾಗಿ ತೋರುತ್ತಿದ್ದ ಇಲಾರ್ಕ್ ಹೋಟೇಲಿನಲ್ಲಿ ಮೊದಲೆರಡು ದಿನಗಳ ಕಾಲ ಮಾತ್ರ ರೂಮು ಲಭ್ಯ, ನಂತರ ಹೋಟೇಲಿನಲ್ಲಿ ಒಂದೂ ಕೋಣೆ ಖಾಲಿಯಿಲ್ಲ ಎನ್ನುವ ಕಥೆಯನ್ನು ನಾನು ಕಛ್ಛಿನಲ್ಲಿ ಯೋಚಿಸಲೂ ಸಾಧ್ಯವಿರಲಿಲ್ಲ. ಆದರೆ ರಣ್ ಉತ್ಸವ, ಇತ್ಯಾದಿ ಟೂರಿಸಂ ಪ್ಯಾಕೇಜುಗಳನ್ನು ಮಾರಾಟ ಮಾಡುವುದರಿಂದ ಸ್ಥಳೀಯ ಆರ್ಥಿಕತೆ ಉದ್ಧಾರವಾಗುತ್ತಿದೆಯಂತೆ. ಇರಲಿ.



ಪ್ರೇಂಜೀಭಾಯಿ ಮತ್ತು ಕಛ್ ಪುರಾಣ


ಕಛ್ ಭಾರತದ ಅತೀ ದೊಡ್ಡ ಜಿಲ್ಲೆ. 2011ರ ಜನಗಣತಿಯಂತೆ ಅಲ್ಲಿ ವಾಸ್ತವ್ಯವಿರುವುದು 2 ದಶಲಕ್ಷ ಜನ. ಅಲ್ಲಿಯ ಜನಸಂಖ್ಯಾ ಸಾಂದ್ರತೆ ಪ್ರತಿ ಚದರ ಕಿಲೋಮೀಟರ್ ಗೆ ಕೇವಲ 46. ಭಾರತದ ಸರಾಸರಿ ಜನಸಾಂದ್ರತೆ ಕಿಲೋಮೀಟರಿಗೆ 382, ಗುಜರಾತ್ ರಾಜ್ಯದ್ದು 308, ಪಶ್ಚಿಮ ಬಂಗಾಲದ್ದು 1030 ಮತ್ತು ಬಿಹಾರದ್ದು 1102. ಈ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ಹದಿನೈದು ದಿನಕಾಲ 375 ಮಿಲಿಲೀಟರು ಮಳೆ ಬೀಳುತ್ತದೆ. ಕೃಷಿ ಅಷ್ಟಕ್ಕಷ್ಟೇ. ಕಡಲಿರುವುದರಿಂದ ಮೀನುಗಾರಿಕೆ ಇದೆ. ಈಚೆಗೆ ಕಡಲನ್ನು ಆಕ್ರಮಿಸಿಕೊಂಡಿರುವ ಅದಾನಿ ಸಂಸ್ಥೆಯಿಂದಾಗಿ ಆ ಕೆಲಸವನ್ನೂ ಜನ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೇ ಉಪ್ಪನ್ನು ಸರಬರಾಜು ಮಾಡುವಷ್ಟು ಉಪ್ಪು ಉತ್ಪಾದನೆಯಿದೆಯಾದರೂ ಅಲ್ಲಿ ಕೆಲಸ ಮಾಡುವ ಅಗಾರಿಯಾಗಳ ಕಡು ಬಡತನ ಮತ್ತು ಅಮಾನವೀಯ ಪರಿಸರ ಹೃದಯವಿದ್ರಾವಕವಾಗಿರುತ್ತದೆ. ಈ ಎಲ್ಲದರ ನಡುವೆಯೂ ಲ್ಲಿ ಇರುವ ಕಲಾವಂತಿಕೆಯನ್ನು ನೋಡಿಯೇ ನಂಬಬೇಕು.




ಕೇಜ್ರೀವಾಲರ ರಾಜಕೀಯ

ವಿಕೇಂದ್ರೀಕರಣದ ಬಗೆಗೆ ಬರೆಯುವಾಗ ಕೇಜ್ರೀವಾಲರ ರಾಜಕೀಯ ಅರಂಗೇಟ್ರಂ‘ ಪದವನ್ನು ನಾನು ಉಪಯೋಗಿಸಿದ್ದು ಸರಿಯಲ್ಲವೆಂದು ಹಿತೈಷಿಗಳಾದ ಹಿರಿಯರೊಬ್ಬರು ಹೇಳಿದರು. ರಾಜಕೀಯವನ್ನು ಭಿನ್ನವಾಗಿ ಅರ್ಥೈಸುತ್ತಿರುವ, ಭ್ರಷ್ಟಾಚಾರವನ್ನು ಖುಲ್ಲಾ ಮಾಡಿ ದೊಡ್ಡವರ ಬಲೂನುಗಳಿಗೆ ಸೂಜಿ ಚುಚ್ಚಿ, ನಮ್ಮ ಸಂವಾದಕ್ಕೆ ಹೊಸತನವನ್ನು ತರುತ್ತಿರುವ ಶಕ್ತಿಗಳನ್ನು ಲೇವಡಿ ಮಾಡಿ ಲಘುವಾಗಿ ಮಾತಾಡಬಾರದು, ಗಂಭೀರ ವಿಚಾರವನ್ನು ಕುಹಕದಿಂದ ನೋಡಬಾರದು ಎಂದು ಅವರು ಹೇಳಿದ ಮಾತು ಸರಿಯೇ. ಆ ಬಗ್ಗೆ ಯೋಚಿಸುತ್ತಿದ್ದಂತೆ ಕೇಜ್ರೀವಾಲರ ರಾಜಕೀಯವನ್ನು ಅರ್ಥೈಸಿ ನೋಡೋಣ ಅನ್ನಿಸಿತು.

ಮುಂದೆ.....




ಟಾಪ್-ಡೌನ್ ಮತ್ತು ಬಾಟಮ್-ಅಪ್ ರಾಜಕೀಯ

ಈಚೆಗೆ ನಡೆದ ಒಂದು ಸಂವಾದದಲ್ಲಿ ದೇಶದ ಸಮಸ್ಯೆಗಳನ್ನು ಚರ್ಚಿಸುತ್ತಾ ಮಹಾಶಯರೊಬ್ಬರು ಕೇಂದ್ರ ಸರಕಾರದ ಮೇಲೆ ಮುಗಿಬಿದ್ದು ಅದರ ಯೋಜನೆಗಳೆಲ್ಲಾ ವಿಫಲವಾಗಿವೆ, ಟಾಪ್-ಡೌನ್ ಬಿಟ್ಟು ಬಾಟಮ್-ಅಪ್ ರೀತಿಯಲ್ಲಿ ನಾವು ಕೆಲಸ ಮಾಡಿದಾಗಲೇ ನಮ್ಮ ದೇಶದ ಶ್ರೀಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು. ತಮ್ಮ ರಾಜಕೀಯ ಅರಂಗೇಟ್ರಂ ಸೂಚಿಸುತ್ತಾ "ಜನರನ್ನು ಒಳಗೊಂಡ" ಯೋಜನೆಗಳನ್ನು ತಮ್ಮ ಪಕ್ಷ ತಯಾರಿಸುವುದೆಂದು ಕೇಜ್ರೀವಾಲ್ ಕೂಡಾ ಹೇಳಿದ್ದರು. ಗುಜರಾತಿನಿಂದ ವಸೂಲಾಗುವ ತೆರಿಗೆಯನ್ನು ಗುಜರಾತಿಗೇ ನೀಡಿಬಿಟ್ಟರೆ ಕೇಂದ್ರದ ಸಹಾಯವೇ ಬೇಡ ಎಂದು ನರೇಂದ್ರ ಮೋದಿ ಹೇಳಿದ್ದರು. ಬಾಳಾ ಠಾಕ್ರೆಯಂಥಹ ಸ್ಥಳೀಯ ನಾಯಕರು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುವುದಕ್ಕೂ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಕರಿಸುವುದಕ್ಕೂ ಕಾರಣ ಈ ಕೇಂದ್ರೀಕರಣ-ವಿಕೇಂದ್ರೀಕರಣದ ಅಸಮತೋಲನದ ಕಷ್ಟದ ವಿಚಾರವೇ ಆಗಿರಬಹುದು.


ಮುಂದೆ.....



ದುಡ್ಡೇ, ದೊಡ್ಡಪ್ಪ?


ಆಧಾರ್ ಯೋಜನೆಯ ಲಾಭಗಳನ್ನು ವಿವರಿಸುತ್ತಾ ನಂದನ್ ನಿಲೇಕಣಿ ಅದು ಒಂದು ದೊಡ್ಡ ಕ್ರಾಂತಿಯ ಮೊದಲ ಅಡಿಗಲ್ಲು ಎನ್ನುವ ಅರ್ಥ ಬರುವ ಹಾಗೆ ಮಾತನಾಡಿದ್ದಾರೆ. ಮುಖ್ಯವಾಗಿ ಆಧಾರ್ ಬಂದಕೂಡಲೇ ಬದಿಬದಿಯಲ್ಲಿಯೇ ಎಲ್ಲರಿಗೂ ಬ್ಯಾಂಕಿನ ಖಾತೆ ಬರಬಹುದು ಎನ್ನುವುದನ್ನು ಅವರು ಹೇಳುತ್ತಾರೆ. ಬ್ಯಾಂಕಿನ ಖಾತೆಗೆ ಅನೇಕ ಸವಲತ್ತುಗಳನ್ನು ವಿತ್ತೀಯರೂಪದಲ್ಲಿ ಕೊಡಬಹುದು ಅನ್ನುವುದನ್ನೂ ಹೇಳುತ್ತಾರೆ. ಮೊದಲ ಹಂತದಲ್ಲಿ ಈಗ ಹಣದ ರೂಪದಲ್ಲಿಯೇ ಸಂದಾಯವಾಗುತ್ತಿರುವ ಪಿಂಚನಿ, ನರೇಗಾದ ಕೂಲಿಗಳು ಖಾತೆಗೆ ನೇರವಾಗಿ ಹೋಗುತ್ತವೆ. ಎರಡನೆಯ ಹಂತದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಸಿಗುವ ದಿನಸಿ, ಸೀಮೆಎಣ್ಣೆ, ಇತ್ಯಾದಿಗಳ ಸರಕಾರಿ ಧರಕ್ಕೂ ಮಾರುಕಟ್ಟೆಯ ಧರಕ್ಕೂ ಇರುವ ವ್ಯತ್ಯಾಸವನ್ನು ವಿತ್ತೀಯ ರೂಪದಲ್ಲಿ ಕೊಡುವ ಮಾತು ಕೇಳಿಬರುತ್ತಿದೆ. ಹೀಗಾದಾಗ ಮಧ್ಯವರ್ತಿಯ ಚಿಲ್ಲರೆ ಭ್ರಷ್ಟಾಚಾರವಿಲ್ಲದೇ, ನೇರವಾಗಿ ಬಡವರ ಖಾತೆಗೆ ಸವಲತ್ತುಗಳು ತಲುಪುವ ಸುವರ್ಣಯುಗದ ಮಾತನ್ನು ನಂದನ್ ಆಡುತ್ತಾರೆ. 




ಭ್ರಷ್ಟಾಚಾರದ ವೃತ್ತಾಂತ



ಭ್ರಷ್ಟಾಚಾರ ಎಂಬುದು ಸದಾಬಹಾರ್ ಸೂಪರ್ ಸ್ಟಾರ್. ಒಂದು ಕಡೆ ಕಾನೂನು ವ್ಯವಸ್ಥೆಯನ್ನು ಬಿಗಿ ಮಾಡಬಹುದಾದರೂ, ಭ್ರಷ್ಟಾಚಾರ ಒಂದು ಹೆಜ್ಜೆ ಮುಂದಿದ್ದು ಹೊಸ ರೂಪದಲ್ಲಿ, ಹೊಸ ಪ್ರಯೋಗದೊಂದಿಗೆ ಮುಂದುವರೆಯುತ್ತದೆ. ಭ್ರಷ್ಟಾಚಾರದ ಪರಿಭಾಷೆಯೂ ಬದಲಾಗುತ್ತದೆ. ಕೆಲ ವ್ಯವಹಾರಗಳನ್ನು ಭ್ರಷ್ಟಾಚಾರವೆಂದು ವರ್ಗೀಕರಿಸುವದೂ ಕಷ್ಟಕರ. ನನ್ನ ಗೆಳೆಯರೊಬ್ಬರು ಭ್ರಷ್ಟಾಚಾರವನ್ನು ಮೂರು ಮಜಲುಗಳಲ್ಲಿ ವಿವರಿಸಿದ್ದರು ಅರ್ಥೈಸಿದ್ದರು.

ಭ್ರಷ್ಟಾಚಾರದ ನೇರ ವಿಧಾನವನ್ನು ಜಬರಾನಾ ಎಂದರು. ಅದರ ಹೊರರೂಪ ನಮಗೆ ದಿನನಿತ್ಯ ಕಾಣಿಸುತ್ತದೆ. ಮೀಟರಿಗಿಂತ ಮೇಲೆ ಕೇಳುವ ಆಟೋ, ಸಂದರ್ಶನಾ ವೇಳೆಗೆ ಮೀರಿ ರೋಗಿಗಳನ್ನು ನೋಡಗೊಡುವ ಆಸ್ಪತ್ರೆಯ ಸೆಕ್ಯೂರಿಟಿ, ಹೀಗೆ ಖಾಸಗೀ ಬದುಕು, ಸರಕಾರೀ ಕಾರ್ಯಾಲಯ, ಎಲ್ಲೆಲ್ಲೂ ನಾವು ಜಬರಾನಾ ಕಾಣಬಹುದು. ಇದು ಕಿರಿಕಿರಿಯುಂಟುಮಾಡುವ ತೆರೆದ ಭ್ರಷ್ಟಾಚಾರ. ಜಬರ್ದಸ್ತಿಯಾಗಿ ಇಂತಿಷ್ಟು ಕೊಡದಿದ್ದರೆ ಕೆಲಸವಾಗುವುದಿಲ್ಲ ಎನ್ನುವ ಖುಲ್ಲಂಖುಲ್ಲಾ ಲೇನ್ ದೇನ್ ನ ವಿಚಾರ


ಮುಂದೆ.....



ವಿಕೇಂದ್ರೀಕರಣದ ವಿಚಾರಗಳು



ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ಹೂಡಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಬೇರೆ ರೀತಿಯ ಸ್ಥಳೀಯ ಪ್ರಯೋಗಗಳು ಹೇಗೆ ನಡೆದಿವೆ ಎನ್ನುವುದನ್ನು ಅವಲೋಕಿಸಿವುದು ಉಚಿತವಿರಬಹುದು. ವಿದೇಶೀ ಹೂಡಿಕೆ ಬಂದಾಕ್ಷಣಕ್ಕೆ ಜಾದೂವಿನ ಛಡಿಯಂತೆ ನಮ್ಮ ಗ್ರಾಮಾಂತರ ಪ್ರದೇಶದ ರೈತರ ಕಿಸ್ಮತ್ತು ಸರಿಹೋಗುವುದು ಎನ್ನುವ ಕಥೆಗಳನ್ನು ಕೇಳುತ್ತಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳಿಗೂ ವಿದೇಶದಲ್ಲಿಯೇ ಉತ್ತರವನ್ನು ಹುಡುಕುವ ಅಭ್ಯಾಸ ತುಸು ಸಮಯದವರೆಗೆ ಬಿಟ್ಟರೆ ನಮ್ಮದೇ ಅದ್ಭುತ ಪ್ರಯೋಗಗಳು ನಮಗೆ ಕಾಣಿಸುತ್ತವೆ.

ಚಿಲ್ಲರೆ ವ್ಯಾಪಾರದಲ್ಲಿ ಹೂಡಿಗೆ ಬರುವುದರಿಂದ ನಮಗೆ ದಾಸ್ತಾನು ಮಾಡಲು ಸದುಪಾಯ, ರೈತರಿಗೆ ಒಳ್ಳೆಯ ಬೆಲೆ ಇತ್ಯಾದಿಗಳ ಕಥೆಗಳನ್ನು ಬಿಟ್ಟು ನಮ್ಮ ಕೋಳಿ ಸಾಕಣೆಯ ಕ್ಷೇತ್ರದತ್ತ ಗಮನ ಹರಿಸೋಣ.
ಕೃಷಿಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆಯ ಫಲ ಎಲ್ಲಾದರೂ ನಮಗೆ ಕಾಣಸಿಗುವುದಾದರೆ ಅದು ಹೈನುಗಾರಿಕೆ ಮತ್ತು ಕೋಳಿ ಸಾಕಣೆಯ ಕ್ಷೇತ್ರದಲ್ಲಿಯೇ.




ಎಫ್ ಡಿ ಐ ಅಂದರೆ ಭಯವೇಕೆ?


ಚಿಲ್ಲರೆ ವ್ಯಾಪಾರದಲ್ಲಿ ಎಫ್.ಡಿ.ಐ ಈಚಿನ ದಿನಗಳಲ್ಲಿ ಬಹುಚರ್ಚಿತ ವಿಷಯವಾಗಿದೆ. ಈ ವಿಷಯದ ಬಗ್ಗೆ ಅದನ್ನು ವಿರೋಧಿಸುವವರಿಂದ ಕೆಲವು ಆತಂಕಗಳೂ, ಬೆಂಬಲಿಸುವವರಿಂದ ಕೆಲವು ಭರವಸೆಗಳೂ ಕೇಳಿಬರುತ್ತಿವೆ. ಈ ಎರಡನ್ನೂ ನಾವು ತುಸು ಉದ್ವೇಗರಹಿತವಾಗಿ ನೋಡಬೇಕಾಗಿದೆ. ಈ ಮಲ್ಟಿಬ್ರಾಂಡ್ ಎಫ್.ಡಿ.ಐ ಅಂದಕೂಡಲೇ ನಮಗೆ ಕೇಳಿಬರುವುದು ವಾಲ್ ಮಾರ್ಟ್ ಹೆಸರು. ಒಂದು ಕ್ಷಣಕ್ಕೆ ವಾಲ್ ಮಾರ್ಟನ್ನು ಪಕ್ಕಕ್ಕಿಟ್ಟು ಇದರಿಂದ ರೈತರಿಗಾಗುವ ಪ್ರಯೋಜನವೇನು ಅನ್ನುವುದನ್ನು ಅರ್ಥಮಾಡಿಕೊಳ್ಳೋಣ.

ಈ ಪ್ರಸ್ತಾವದ ಬೆಂಬಲಿಗರು ಎಫ್.ಡಿ.ಐ ನಿಂದಾಗಿ ಒಟ್ಟಾರೆ ಆಗುವ ಲಾಭವನ್ನು ಉತ್ತಮ ಉದ್ಯೋಗಾವಕಾಶ ಮತ್ತು ಉತ್ತಮವಾದ ಭೌತಿಕ ಸದುಪಾಯಗಳು – ಗೋದಾಮುಗಳು, ಶೀತಲೀಕರಣಕ್ಕೆ ಅನುಗುಣವಾದ ದಾಸ್ತಾನು ವ್ಯವಸ್ಥೆ ಬರುತ್ತದೆಂದು ಹೇಳುತ್ತಿದ್ದಾರೆ. ಅದು ನಿಜವೇ? ಹಾಲಿನ ಕ್ಷೇತ್ರದಲ್ಲಿ ಅಮುಲ್ ಸಹಕಾರ ಸಂಸ್ಥೆ ಈ ಇಡೀ ಭೌತಿಕ ಸದುಪಾಯವನ್ನು ಉಂಟುಮಾಡಲು ಅನೇಕ ವರ್ಷಗಳನ್ನೇ ತೆಗೆದುಕೊಂಡಿತು. ಅದರಲ್ಲಿ ಹಾಲನ್ನು ಪ್ರತೀ ಹಳ್ಳಿಯ ಸಹಕಾರ ಸಂಘದಿಂದ ಕೊಳ್ಳುವುದಲ್ಲದೇ, ಅದನ್ನು ದಾಸ್ತಾನು ಮಾಡುವ ಸದುಪಾಯವನ್ನು ಏರ್ಪಾಟು ಮಾಡಿತು. ಇದಲ್ಲದೇ ಹಾಲನ್ನ, ಪುಡಿಯಾಗಿ, ಇತರೆ ಪದಾರ್ಥಗಳಾಗಿ ಪರಿವರ್ತಿಸಲು ಬೇಕಾದ ಸಂಶೋಧನೆಯನ್ನೂ ಅಮುಲ್ ಪ್ರೋತ್ಸಾಹಿಸಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಎಮ್ಮೆ ಹಾಲಿನಿಂದ ಪುಡಿಯನ್ನೂ, ಚೀಸನ್ನೂ ಮಾಡುವ ತಂತ್ರವನ್ನು ಭಾರತದಲ್ಲಿ ಅಳವಡಿಸಿತು. ಈ ಇಂಥ ಕೆಲಸವನ್ನು ವಿದೇಶೀ ಹೂಡಿಕೆದಾರರು ಮಾಡಬಹುದೇ? ಮಾಡುವುದಾದರೆ ನಾವು ಅದಕ್ಕೆ ಸ್ವಾಗತ ಕೋರಬೇಕು.

ಮುಂದೆ.....




ದೇವರ ಪ್ರಸಾದ, ಬಕ್ಷೀಸು, ರಸೀತಿಪುಸ್ತಕ


ಗಣಪತಿ ಹಬ್ಬದ ಸೀಜನ್ ಬಂತೆಂದರೆ ರಸೀದಿಯ ಪುಸ್ತಕಗಳು ಹೊರಬಂದು ಚಂದಾ ವಸೂಲಿಯ ಕಾರ್ಯಕ್ರಮ ಪ್ರಾರಂಭವಾಗಿಬಿಡುತ್ತದೆ. ಮೊಹಲ್ಲಾದ ಪಡ್ಡೆ ಹುಡುಗರಿಗೆಲ್ಲಾ ಇದ್ದಕ್ಕಿದ್ದಂತೆ ಭಕ್ತಿಯ ಭಾವ ಉಕ್ಕಿ ಹರಿದು ಸಾಂಸ್ಕೃತಿಕ ಪರಿಜ್ಞಾನ ಬಂದುಬಿಡುತ್ತದೆ. ಈ ಗಣಪತಿ ಹಬ್ಬದ ಅರ್ಥವ್ಯವಸ್ಥೆ ಗುಜರಾತಿನಲ್ಲಿ ನಡೆವ ದಸರಾ ಹಬ್ಬದ ದಾಂಡಿಯಾಗಿಂತ ಮತ್ತು ದೀಪಾವಳಿಯ ಬಕ್ಷೀಸಿನ ಅರ್ಥವ್ಯವಸ್ಥೆಗಿಂತ ಭಿನ್ನವಾಗಿದೆ.

ಗುಜರಾತಿನಲ್ಲಿ ಅನೇಕ ವರ್ಷಗಳನ್ನು ಕಳೆದ ನನಗೆ ಅಲ್ಲಿನ ವ್ಯಾಪಾರೀ ಮನೋಭಾವದಲ್ಲಿರುವ ವಿಚಿತ್ರ ನ್ಯಾಯ ಅರ್ಥವಾಗುವುದಕ್ಕೆ ವರ್ಷಗಳೇ ಹಿಡಿದುವು. ಆದರೆ ಅದನ್ನು ಅರ್ಥೈಸಿದ ನಂತರ ಅಲ್ಲಿನ ಜೀವನ ದುಸ್ತರವೆನ್ನಿಸಲಿಲ್ಲ. ಮೊದಲಿಗೆ ದಸರಾದ ದಾಂಡಿಯಾದ ಕಥೆ ಹೇಳುತ್ತೇನೆ. ಪ್ರತೀ ದಸರಾದಲ್ಲೂ ಹತ್ತೂ ದಿನ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ದಾಂಡಿಯಾ ಕಾರ್ಯಕ್ರಮವೆಂದರೆ ರಾತ್ರೆಯ ಊಟದ ನಂತರ ಇಡೀ ಸಮುದಾಯ ಒಂದೆಡೆ ಸೇರಿ ಅಲ್ಲಿನ ದಾಂಡಿಯಾ ಸಂಗೀತಕ್ಕೆ ವೃತ್ತಾಕಾರದಲ್ಲಿ ಕೋಲಾಟ ಆಡುವುದು. ನಿಮಗೆ ಆಟ ಬರಬೇಕೆನ್ನುವ ನಿಯಮವೇನೂ ಇಲ್ಲ. ಭಾಗವಹಿಸುವ ಮನಸ್ಸಿರಬೇಕು ಅಷ್ಟೇ. ಮೊದಲ ದಿನ ಕೆಲ ಘಂಟೆಗಳು ನಡೆಯುವ ಈ ಕಾರ್ಯಕ್ರಮ ದಶಮಿಯ ಹೊತ್ತಿಗೆ ಇಡೀ ರಾತ್ರೆಯ ಕಾರ್ಯಕ್ರಮವಾಗುತ್ತದೆ. ಸಾಮಾನ್ಯತಃ ಎಲ್ಲ ಮೊಹಲ್ಲಾಗಳಲ್ಲೂ, ಕ್ಯಾಂಪಸ್ಸಿನಲ್ಲೂ ತಮ್ಮದೇ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ಸಮುದಾಯದವರನ್ನು ಯಾರೂ ಹಣ ಕೇಳುವುದಿಲ್ಲ. ಆದರೆ ದಿನಕ್ಕೊಂದಿಷ್ಟು ಜನರ ಮನೆಯಿಂದ ಪ್ರಶಾದ್ ಬರುತ್ತದೆ, ಹಣ ಎಲ್ಲಿಂದ ಬಂತು, ಹೇಗೆ, ಎಷ್ಟು ಎನ್ನುವ ಹಿಸಾಬಿಲ್ಲದೇ ಸಂಭ್ರಮವಾಗಿ ಹಬ್ಬ ನಡೆಯುತ್ತದೆ. ಇದು ಯಾವ ನಿಯಮಗಳಿಗೂ ಬದ್ಧವಲ್ಲ. ನಮ್ಮ ಮನೆಯಲ್ಲಿ ನಡೆಯುವ ಜಂಟಿ ಸಂಸಾರದ ಖರ್ಚಿನ ಮಾದರಿಯಲ್ಲಿ ನಡೆದುಹೋಗುತ್ತದೆ. ಇಲ್ಲಿ ಯಾವ ಸರಕಾರದ ಪಾತ್ರವೂ ಇಲ್ಲ.


ಕುರಿಯನ್: ಹಾಲು ಕುಡಿಯದ ಹುಡುಗಾ


ಭಾನುವಾರ ಮುಂಜಾನೆ ಎಚ್ಚರವಾಗುವಷ್ಟರಲ್ಲಿ ತಲುಪಿದ ಸುದ್ದಿ: "ವರ್ಗೀಸ್ ಕುರಿಯನ್ ಅಸುನೀಗಿದರು". ತೊಂಬತ್ತು ವರ್ಷ ಪೂರ್ಣ ಜೀವನ ನಡೆಸಿ ತಮ್ಮ ಕರ್ಮಭೂಮಿಯಾದ ಗುಜರಾತಿನಲ್ಲಿ ಅಸುನೀಗಿದ ಕುರಿಯನ್ ಅವರ ಸೇವೆಗೆ ಪ್ರತಿಯಾಗಿ ಕನಿಷ್ಟ ಒಂದು ಭಾರತ ರತ್ನ ಪುರಸ್ಕಾರವನ್ನೂ ಕೊಡದೆಯೇ ದೇಶ ಅವರನ್ನು ಬೀಳ್ಕೊಟ್ಟಿತು. ಸಿರಿಯನ್ ಕ್ರೈಸ್ತರಾದ ಆತನ ದೇಹವನ್ನು ಮಣ್ಣು ಮಾಡದೆಯೇ ಆತನ ಕೋರಿಕೆಯಂತೆ ಆಣಂದದ ಕೈಲಾಶಭೂಮಿಯಲ್ಲಿನ ವಿದ್ಯುತ್ ಚಿತಾಗಾರಕ್ಕೆ ಅರ್ಪಿಸಲಾಯಿತು. ತಮ್ಮ ಕಾಯಿದೆಯ ಪ್ರಕಾರ ತಮಗಿಷ್ಟಬಂದಂತೆ, ರಾಜನಂತೆ, ಜೀವಿಸಿದ ಕುರಿಯನ್ ಸಾವಿನಲ್ಲೂ ತಮ್ಮದೇ ಮಾರ್ಗವನ್ನು ಹಿಡಿದು ನಡೆದರು. ಅವರು ತಮ್ಮ ದೇಹವನ್ನು ಸ್ಥಳೀಯ ಸಂಸ್ಕೃತಿಗೆ – ತಾವು ದುಡಿದ ರೈತರ ಆಚಾರಕ್ಕೆ ಸಮರ್ಪಕವಾಗಿ ಸುಡಬೇಕೆಂದು ಕೇಳಿಕೊಂಡಿದ್ದರಂತೆ. ಎಂದೂ ಸ್ಥಳೀಯ ಸಂಸ್ಕೃತಿಗೆ ಒಗ್ಗಿಕೊಳ್ಳದ ಅವರ ಈ ಕೋರಿಕೆ ಅಸಾಧಾರಣವಾದದ್ದೇ. ಬದುಕಿರುವಾಗಲೇ ತಾವು ಇದ್ದ ಮೊದಲ ಮನೆ, ಅದರ ಗ್ಯಾರೇಜನ್ನು ಸಂಗ್ರಹಾಲಯವನ್ನಾಗಿಸಿದ್ದನ್ನು ಕಂಡು ತೃಪ್ತಿ ಪಟ್ಟಿದ್ದ ಆತನಿಗೆ ತಮ್ಮ ದೇಹದ ಮೇಲೊಂದು ಸ್ಮಾರಕವನ್ನು ನಿರ್ಮಿಸುವುದು ಇಷ್ಟವಿರಲಿಲ್ಲವೆನ್ನಿಸುತ್ತದೆ. ಸಾಂಪ್ರದಾಯಿಕ ಗುಜರಾತಿಗಳ ನಡುವೆ ತಮ್ಮ ಮಾಂಸಾಹಾರದ ಬಗ್ಗೆ ಖುಲ್ಲಂ ಖುಲ್ಲಾ ಆಗಿದ್ದು – ಪಾನವಿರೋಧಿ ಕಾಯಿದೆಯಿದ್ದ ಗುಜರಾತಿನಲ್ಲಿ ತಮ್ಮ ಸಂಜೆಯ ಪೆಗ್ಗನ್ನು ಸಂತೋಷದಿಂದಲೇ ಹಾಕುತ್ತಾರೆಂದು ಪ್ರತೀತಿಯಿದ್ದ, "ಹಾಲೆಂದರೆ ನನಗಿಷ್ಟವಿಲ್ಲ, ನಾನು ಕುಡಿಯುವುದಿಲ್ಲ" ಎನ್ನುತ್ತಿದ್ದ, ಎಂದೂ ಗುಜರಾತಿ ಭಾಷೆ ಮಾತಾಡದ ಕುರಿಯನ್ ಇದ್ದಕ್ಕಿದ್ದ ಹಾಗೆ ತಮ್ಮ ಸಾವಿಗೆ ಸ್ಥಳೀಯ ಸಂಸ್ಕೃತಿಯ ಲೇಪ ಕೊಡುವುದರಲ್ಲಿ ಅದಕ್ಕಿಂತಲೂ ಮಿಗಿಲಾದ ಅರ್ಥವಿರಬಹುದು.




ಬದಲಾಗುತ್ತಿರುವ ನಗರದ ತಲ್ಲಣಗಳ ಒಳಪದರಗಳು


ನಾವು ಚಿಕ್ಕವರಿದ್ದಾಗ ಬೆಂಗಳೂರಿನ ರಸ್ತೆಯ ಮೇಲೆ ನಮಗೆ ಬಿಟಿಎಸ್ ನ ಕೆಂಪು ಬಸ್ಸುಗಳಲ್ಲದೇ, ಎಚ್ಎಎಲ್, ಎಚ್ಎಂಟಿ, ಐಟಿಐ, ಬಿಇಎಲ್ ಸಂಸ್ಥೆಗಳ ಬಸ್ಸುಗಳೂ ಕಾಣಿಸುತ್ತಿದ್ದುವು. ದಿನದ ಷಿಫ್ಟಿಗನುಸಾರ ನಗರದ ವಿವಿಧ ಜಾಗಗಳಿಂದ (ಆಗ) ಊರಾಚೆ ಇದ್ದ ಫ್ಯಾಕಟರಿಗಳಿಗೆ ಜನ ಹೋಗುತ್ತಿದ್ದರು. ಆ ಬಸ್ಸುಗಳಲ್ಲಿ ಇದ್ದವರೆಲ್ಲರೂ ಇಂಜಿನಿಯರುಗಳೇನೂ ಅಲ್ಲ. ಕೆಲವರು ಇಂಜಿನಿಯರುಗಳಿದ್ದರೂ, ಐಟಿಐ ತರಬೇತಿ ಪಡೆದ ಮಾಡಿದ ಫೋರ್ಮನ್ನು, ಸೂಪರ್ ವೈಸರು, ಕಾರ್ಮಿಕರು – ಹೀಗೆ ವಿವಿಧ ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದ ಸಮವಸ್ತ್ರ ಧರಿಸಿದ ಜನರು ಇರುತ್ತಿದ್ದರು. ಇದೂ ಸಾಲದೆಂಬಂತೆ, ಸಂಸ್ಥೆಗಳಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುತ್ತಿದ್ದ ಜನರೂ ಇರುತ್ತಿದ್ದರು. ಬಸ್ಸಿನಲ್ಲಿ – ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಮಾತನಾಡುವವರು ಸಿಗುತ್ತಿದ್ದರು. ಊಟವನ್ನು ಮನೆಮನೆಯಿಂದ ಪಡೆದು ಟಿಫಿನ್ ಕ್ಯಾರಿಯರ್ ಗಳನ್ನು ಪಡೆದು ಸೈಕಲ್ ಮೇಲೆ ಒಯ್ಯುವ "ಡಬ್ಬಾವಾಲಾ"ಗಳೂ ಇದ್ದರು. ಫ್ಯಾಕ್ಟರಿಯಲ್ಲಿ ವಿಭಾಗೀಯ ಕ್ಯಾಂಟೀನ್ ಇರುತ್ತಿತ್ತು. ಹಾಗೂ ಅಂದಿನ ಸಿನೇಮಾಗಳಲ್ಲಿ ಹೀರೋ ಕಾರ್ಮಿಕ ನಾಯಕನಾಗಿರುವುದು ಅಪರೂಪವೇನೂ ಆಗಿರಲಿಲ್ಲ. ಕಾರ್ಮಿಕ ಸಂಘಗಳೂ ಚಟುವಟಿಕೆಯಿಂದಿದ್ದುವು. ಕಾರ್ಮಿಕರು ಸಾಂಸ್ಕೃತಿಕ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮುದಾಯದಂತಹ ಸಾಂಸ್ಕೃತಿಕ ಸಂಸ್ಥೆಗಳ ಮೂಲವೂ ಕಾರ್ಮಿಕ ಸಂಘಟನೆಯಲ್ಲಿತ್ತು.



ಮಕ್ಕಳ ಶಾಲೆಗಳೂ, ಗಿಟ್ಟದ ವ್ಯಾಪಾರವೂ


ಇದು ನಮ್ಮ ಸರಕಾರಿ ಶಾಲೆ/ ಶಾಲೆಗಿರುವುದೆ ನಾಲ್ಕು ಮೂಲೆ
ಹಂಚಿರುವ ಮೂಲೆಯಲ್ಲಿ ಮೇಷ್ಟ್ರು ಕೂರುವರು/ ಉಳಿದ ಕಡೆಗಳಲ್ಲಿ ನೀರು ಸೋರುವುದು
-ಎಚ್.ಡುಂಡಿರಾಜ್.

ಇಂಥ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಯಾವ ಪೋಷಕರಾದರೂ ಎರಡು ಬಾರಿ ಯೋಚಿಸುವುದು ನಿಜವೇ. ಅಥವಾ ಶಾಲೆಗೆ ಶಿಕ್ಷಕರ ಹಾಜರಾತಿಯೇ ಕಡಿಮೆಯಿದೆ ಎಂದುಕೊಳ್ಳೋಣ, ಅಥವಾ ಶಿಕ್ಷಕರೇ ಇಲ್ಲವೆಂದುಕೊಳ್ಳೋಣ, ಅಥವಾ ಮಧ್ಯಾಹ್ನದ ಬಿಸಿಯೂಟಕ್ಕೆ ಬದಲು ಹಳಸಲು ಊಟ ಸಿಗುತ್ತಿದೆ ಅಂದುಕೊಳ್ಳೋಣ, ಅಥವಾ ಶಾಲೆ ಮಕ್ಕಳಿರುವ ಜಾಗದಿಂದ ಬಹುದೂರದಲ್ಲಿದೆ ಎಂದುಕೊಳ್ಳೋಣ, ಅಥವಾ....