ಕನ್ನಡವೇ ನಿತ್ಯ

ಎಂ.ಎಸ್.ಶ್ರೀರಾಮ್

ಹೈದರಾಬಾದ್: ಏಕೀಕರಣ?



Saturday, May 10, 2008

ಏಳನೆಯ ನಿಜಾಮನ ಇಷ್ಟಕ್ಕೆ ವಿರುದ್ಧವಾಗಿ, ಜನರ ಅಭಿಪ್ರಾಯಗಳನ್ನು ಸಂಗ್ರಹಿಸದೇ ಹೈದರಾಬಾದ್ ಪ್ರಾಂತವನ್ನು ಭಾರತದ ಸಂವಿಧಾನದಡಿ ತಂದುದರ ಬಗ್ಗೆ ಸಾಕಷ್ಟು ಬರೆಯಲ್ಪಟ್ಟಿದೆ. ಈ ಬಗ್ಗೆ ಇರುವ ರಾಷ್ಟ್ರವಾದೀ ಅಭಿಪ್ರಾಯವೂ ಎಲ್ಲರಿಗೂ ವಿದಿತವಾದದ್ದೇ - ನಿಜಾಮ ಮೀರ್ ಉಸ್ಮಾನ್ ಅಲಿಯ ನಿಲುವಿನಲ್ಲಿ ಹುರುಳಿರಲಿಲ್ಲ; ಭಾರತದ ನಡುಮಧ್ಯದಲ್ಲಿದ್ದ ಹೈದರಾಬಾದಿಗಿದ್ದ ಭೌಗೋಳಿಕ ಮಹತ್ವವನ್ನು ಗಮನಿಸಿದಾಗ ಆ ಪ್ರಾಂತವನ್ನು ಪಾಕಿಸ್ತಾನದ ಅಂಗವನ್ನಾಗಿ ಮಾಡುವ ಯೋಚನೆಯನ್ನು ಮಾಡುವುದಾಗಲೀ, ಹೈದರಾಬಾದನ್ನು ಸ್ವತಂತ್ರ ರಾಜ್ಯವಾಗಿ ಬಿಟ್ಟುಕೊಡುವುದಾಗಲೀ ಅಸಾಧ್ಯದ ಮಾತೇ ಆಗಿತ್ತು. ಹೀಗಾಗಿ ಪೋಲೀಸ್ ಕಾರ್ಯಾಚರಣೆ ಹಾಗೂ ಹೈದರಾಬಾದನ್ನು ಭಾರತದ ಸೇರಿಸುವ ಪ್ರಕ್ರಿಯೆಯಲ್ಲಿ ಉಕ್ಕಿನ ಮಾನವ ಸರದಾರ್ ಪಟೇಲರ ಸಾಧನೆಗಳಲ್ಲಿ ಮಹತ್ವದ್ದೆಂದು ಗುರುತಿಸುವುದು ಸಹಜವೂ ಆಗಿದೆ.

ಆದರೆ ಹೈದರಾಬಾದ್ ಹಿಸ್ಟಾರಿಕಲ್ ಸೊಸೈಟಿಯಂಥಹ ಸಂಸ್ಥೆಗಳು ಪ್ರತಿಪಾದಿಸುವ ಒಂದು ಭಿನ್ನ ಹಾಗೂ ಮಹತ್ವದ ವಿಚಾರಧಾರೆಯಿದೆ.
ಹಳೆಯ ಹೈದರಾಬಾದ್ ರಾಜ್ಯವನ್ನು ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಿದ್ದು ಬುದ್ಧಿವಂತಿಕೆಯ ಕ್ರಿಯಯಲ್ಲವೆಂದೂ, ಹೈದರಾಬಾದಿನಲ್ಲಿ ಕೋಮು ಸೌಹಾರ್ದ ಸಂಬಂಧಿತ ಸಮಸ್ಯೆಗಳು ಉದ್ಭವವಾಗುವುದಕ್ಕೆ, ಆಂಧ್ರಪ್ರದೇಶದಲ್ಲಿ ತೆಲಂಗಾಣಾ, [ಹಾಗೂ ಮಹಾರಾಷ್ಟ್ರದಲ್ಲಿ ಮರಾಠವಾಡಾ, ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ] ಹಿಂದುಳಿಯಲು ಹೈದರಾಬಾದಿನ ವಿಂಗಡಣೆಯೇ ಕಾರಣವೆಂದು ಕೆಲವರು ವಾದಿಸುತ್ತಾರೆ. ಈ ಬಗ್ಗೆ ಒಮರ್ ಖಲೀದಿ ಬರೆದ "ಹೈದರಾಬಾದ್: ಆಫ್ಟರ್ ದ ಫಾಲ್" ಅನ್ನುವ ಪುಸ್ತಕ ಮಹತ್ವದ್ದಾಗಿದೆ.

ಲೂಸಿನ್ ಬೆನಿಚೌ ಬರೆದ "ಫ್ರಮ್ ಆಟೋಕ್ರಸಿ ಟು ಇಂಟಿಗ್ರೇಷನ್" ಅನ್ನುವ ಪುಸ್ತಕವನ್ನು ನಾನು ನೋಡಿದಾಗ ಅದರಲ್ಲೂ ಈ ಬಗೆಗಿನ ಚರ್ಚೆ ಇರಬಹುದೆಂದು ನಾನು ಸಹಜವಾಗಿಯೇ ನಿರೀಕ್ಷಿಸಿದ್ದೆ. ಆ ಪುಸ್ತಕ ೧೯೩೮-೪೮ರ ದಶಕದ ರಾಜಕೀಯ ಬೆಳವಣಿಗೆಯ ಬಗ್ಗೆ ಇತ್ತೆಂದು ತಿಳಿಸಿದ್ದರಿಂದ ಈ ನಿರೀಕ್ಷೆ ಇಟ್ಟುಕೊಳ್ಳುವುದು ಅನುಚಿತವಾಗಿರಲಿಲ್ಲವೇನೋ. ಆ ಕಾಲದಲ್ಲೇ ಏಕೀಕರಣದ ಎಲ್ಲ ಕ್ರಮಗಳೂ, ಹೈದರಾಬಾದಿನ ಭಾಷಾವಾರು ವಿಂಗಡನೆಗೆ ತಯಾರಿ, ಎರಡೂ ಆಗಿತ್ತು. ಹೈದರಾಬಾದು ಭಾರತದಲ್ಲಿ ಏಕೀಕರಣವಾಗುತ್ತಿದ್ದಂತೆಯೇ ಆ ಪ್ರಾಂತವೂ ಮುಬ್ಭಾಗವಾಗಿ ಒಡೆದಿತ್ತು! ಪುಸ್ತಕದ ಹಿಂದಿನ ಬ್ಲರ್ಬಿನಲ್ಲಿ "ಈ ಪುಸ್ತಕ ಏಕೀಕರಣದ ಜನಪ್ರಿಯತೆ ಮತ್ತು ಕ್ರಮವನ್ನು ಪರೀಕ್ಷಿಸುತ್ತದೆ. ಹಾಗೂ ಏಕೀಕರಣಕ್ಕೆ ಇದ್ದದ್ದು ಇದೊಂದೇ ಮಾರ್ಗವೇ ಅಥವಾ ಅದಕ್ಕೆ ಭಿನ್ನ ಮಾರ್ಗಗಳಿದ್ದುವೇ ಅನ್ನುವ ಪ್ರಶ್ನೆಯನ್ನೂ ಎತ್ತುತ್ತದೆ..." ಎಂದು ಬರೆದಿತ್ತು. ಲೇಖಕರು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿದ್ದರಾದರೂ, ಬೇರೇನು ಸಾಧ್ಯತೆಗಳಿದ್ದುವು ಅನ್ನುವುದರ ಬಗ್ಗೆ ಗಟ್ಟಿಯಾದ ವಾದ ಇಲ್ಲ.

ಭಾರತದ ಸ್ವಾತಂತ್ರಕ್ಕೆ ಮುಂಚಿನ ದಶಕದಲ್ಲಿ ಹೈದರಾಬಾದಿನಲ್ಲಿ ಸಾಕಷ್ಟು ರಾಜಕೀಯ ಕಾರ್ಯಾಚರಣೆಗಳಾದುವಾದರೂ, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಾದ ಸ್ವಾತಂತ್ರ ಹೋರಾಟದಲ್ಲಿ ಹೈದರಾಬಾದಿನ ಪಾತ್ರದಲ್ಲಿ ಒಗ್ಗಟ್ಟು ಮತ್ತು ಇತರ ಜಾಗಗಳಷ್ಟು ಉತ್ಸಾಹ ಕಂಡುಬಂದಿರಲಿಲ್ಲ. ಹೈದರಾಬಾದಿನ ಜನತೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಹಾಗೂ ಕಾಂಗ್ರೆಸ್‍ಗೆ ಹೈದರಾಬಾದಿನಲ್ಲಿ ಮಹತ್ವದ ಸ್ಥಾನವೇನೂ ಇರಲಿಲ್ಲ. ಹೈದರಾಬಾದಿನಲ್ಲಿ ಸತ್ಯಾಗ್ರಹದಂತಹ ಹೆಚ್ಚಿನ ಚಟುವಟಿಕೆಗಳು ಕಾಣಿಸಲಿಲ್ಲ. ಅಲ್ಲಿದ್ದ ಅತ್ಯಂತ ಮಹತ್ವದ ಕಾಂಗ್ರೆಸ್ ನಾಯಕರು ಸ್ವಾಮಿ ರಾಮಾನಂದ ತೀರ್ಥರಾಗಿದ್ದರು.

ಇದಕ್ಕೆ ಇರಬಹುದಾದ ಕಾರಣಗಳು ಗಹನವಾದವು. ಆ ಪ್ರಾಂತ ಇನ್ನೂ ನಿಜಾಮನ ಆಳ್ವಿಕೆಯಡಿಯಲ್ಲಿತ್ತು. ಮುಸಲ್ಮಾನರು ಆ ರಾಜ್ಯದಲ್ಲಿ ಅಲ್ಪ ಸಂಖ್ಯಾತರಾಗಿದ್ದರೂ ಅವರುಗಳಲ್ಲಿದ್ದ ಮೇಲ್ಮಧ್ಯಮ ವರ್ಗದವರೂ ಬುದ್ಧಿಜೀವಿಗಳೂ ಸರಕಾರದಲ್ಲಿ ಮಹತ್ವದ ಹುದ್ದೆಗಳನ್ನಲಂಕರಿಸಿದ್ದರು. ಸಂಸ್ಥಾನದ ಭಾಷ್ ಫಾರ್ಸಿಯಾಗಿತ್ತಾದರೂ, ಹೆಚ್ಚಿನ ಲಾವಾದೇವಿಗಳು ಉರ್ದುಭಾಷೆಯಲ್ಲಿ ನಡೆಯುತ್ತಿತ್ತು. ಸಾಲದ್ದಕ್ಕೆ ರಾಜವಂಶಕ್ಕೆ ಸೇರಿದ ಪೈಗಾಗಳಲ್ಲದೇ ಅನೇಕ ಹಿಂದೂ ಜಮೀಂದಾರರು ಸಹ ನಿಜಾಮನ ಅನುಯಾಯಿಗಳಾಗಿದ್ದರು. ನಿಜಾಮನ ಆಳ್ವಿಕೆಯ ಬಗ್ಗೆ ಅವರಿಗೆ ಸಮಾಧಾನವಿತ್ತೋ ಇಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲವಾದರೂ, ನಿಜಾಮನಡಿಯಲ್ಲಿ ಅವರಿಗೆ ಅನೇಕ ಸವಲತ್ತುಗಳಿದ್ದುವು ಅನ್ನುವುದರಲ್ಲಿ ಅನುಮಾನವಿಲ್ಲ. ಏಕಾಧಿಪತ್ಯದ ಜಾಗದಲ್ಲಿ ಪ್ರಾಜಾತಂತ್ರ ವ್ಯವಸ್ಥೆ ಬಂದದ್ದೇ ಆದಲ್ಲಿ ಅನೇಕರ ಸವಲತ್ತುಗಳು ಇಲ್ಲವಾಗುತ್ತಿದ್ದವು ಅನ್ನುವುದರಲ್ಲಿ ಅನುಮಾನವಿಲ್ಲ. ಹಿಂದೂ ಬುದ್ಧಿಜೀವಿಗಳು, ಜಮೀಂದಾರರು, ಮುಸ್ಲಿಂ ರಾಜವಂಶದವರು ಒಂದು ಕಡೆಯಿದ್ದರೆ, ರಾಮಾನಂದ ತೀರ್ಥರಂಥಹ ರಾಷ್ಟ್ರವಾದಿಗಳು ಜನರನ್ನು ಸ್ವಾತಂತ್ರ ಸಂಗ್ರಾಮದತ್ತ ಸಂಘಟಿಸುವ ಪ್ರಯತ್ನಮಾಡುತ್ತಿದ್ದರು. ಈ ಸ್ವಾತಂತ್ರವನ್ನು ಅವರು ಬ್ರಿಟಿಷರಿಂದ ಮಾತ್ರ ಬಯಸದೇ ನಿಜಾಮನಿಂದಲೂ ಸ್ವಾತಂತ್ರವನ್ನು ಬಯಸುತ್ತಿದ್ದರು. ಅದೇ ಸಮಯಕ್ಕೆ ಇನ್ನೆರಡು ದೊಡ್ಡ ಗುಂಪುಗಳು ಕಾರ್ಯನಿರತವಾಗಿದ್ದುವು: [ಮಕ್ದೂಮ್ ಮೊಯಿನುದ್ದೀನರಂತಹ ಜನರಿದ್ದರೂ ಹೆಚ್ಚಾಗಿ ಹಿಂದೂಗಳಿಂದ ಕೂಡಿದ್ದ] ನಿಜಾಮನ ಮತ್ತು ಜಮೀಂದಾರರ ಹಿಂಸಾತ್ಮಕ ಆಳ್ವಿಕೆಯಿಂದ ಮುಕ್ತಿ ಕೋರುತ್ತಿದ್ದ ಕಮ್ಯೂನಿಸ್ಟರು. ಇವರುಗಳು ಕಾಂಗ್ರೆಸ್‌ನ ಅಹಿಂಸಾತ್ಮಕ ಸತ್ಯಾಗ್ರಹದ ಕಾರ್ಯವೈಖರಿಯ ವಿರೋಧಿಗಳಾಗಿದ್ದರು. ಜೊತೆಗೆ ಹಳೆಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ನಿಜಾಮನಿಗೆ ನಿಷ್ಠಾವಂತರಾಗಿದ್ದ ರಜಾಕರರೂ ಇದ್ದರು. ರಜಾಕರರು ನಿಜಾಮನಿಗೆ ನಿಷ್ಠೆ ತೋರಿಸಿದರೂ ಅವರುಗಳೆಲ್ಲಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ ಅನ್ನುವ ಸಂಸ್ಥೆಯ ಅನುಯಾಯಿಗಳಾಗಿದ್ದರು. ಈ ಸಂಸ್ಥೆ ಇಸ್ಲಾಮೀ ಅಸ್ಮಿತತೆಯನ್ನು ಪೋಷಿಸುವುದನ್ನೇ ತನ್ನ ಮೂಲ ಸಿದ್ಧಾಂತವನ್ನಾಗಿ ಇಟ್ಟುಕೊಂಡಿತ್ತು.

ಚಾರಿತ್ರಿಕ ಸಂಶೋಧನೆಯನ್ನು ಹುದುಗಿದ್ದ ಮಾಹಿತಿಯನ್ನು ಹೊರಕ್ಕೆ ತೆಗೆಯುವ ಕೆಲಸವನ್ನು ಬೆನೆಚೌ ಮಾಡಿದರೂ, ಆ ಮಾಹಿತಿಯನ್ನು ವಿಶ್ಲೇಷಿಸುವಲ್ಲಿ ಆತ ಸೋತಿದ್ದಾರೆ. ಒಂದರ ನಂತರ ಒಂದರತೆ ಘಟನಾವಳಿಗಳನ್ನು ಬೆನಿಚೌ ವಿವರಿಸುತ್ತಾ ಹೋಗುತ್ತಾರೆಯೇ ಹೊರಗಿನವರಾಗಿ ಬೆನಿಚೌ ಎಲ್ಲವನ್ನೂ ದಾಖಲಿಸುತ್ತಾ ಹೊರತು ಅದಕ್ಕೆ ಹೆಚ್ಚಿನ ಒಳನೋಟಗಳನ್ನು ಅವರು ನೀಡುವುದಿಲ್ಲ. ಹೀಗಾಗಿ ಬ್ಲರ್ಬಿನಲ್ಲಿ ಬರೆದಿರುವಂತೆ ಹಳೆಯ ಹೈದರಾಬಾದ್ ರಾಜ್ಯ ಒಂದೇ ಘಟಕವಾಗಿ ಮುಬ್ಭಾಗವಾಗದೇ ಮುಂದುವರೆಯುವ ಆಶಯ ಜನರಿಗಿತ್ತೇ ಅನ್ನುವುದು ತಿಳಿಯುವುದಿಲ್ಲ. ಆದರೆ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ರಾಷ್ಟ್ರದ ಮುಖ್ಯ ಪಕ್ಷವಾದ ರಾಷ್ಟ್ರೀಯ ಮನೋಧರ್ಮವಿದ್ದ ಕಾಂಗ್ರೆಸ್ ಪಕ್ಷ ಜನರನ್ನು ಒಗ್ಗೂಡಿಸುವ ಬಗ್ಗೆ ಒಂದು ನಿರ್ದಿಷ್ಟ ಮಾರ್ಗವನ್ನು ಹೊಂದಿರಲಿಲ್ಲ ಅನ್ನುವುದು ಮಾತ್ರ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಕಾಂಗ್ರೆಸ್ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡುತ್ತಿದ್ದರೆ, ಇಲ್ಲಿ ಆಡಳಿತದ ಮುಖ ನಿಜಾಮನದ್ದಾಗಿತ್ತು. ಹೀಗಾಗಿ ವಿದೇಶೀ ತಾಕತ್ತಿನ ವಿರುದ್ಧದ ಸಮರದ ಅನೇಕ ವ್ಯೂಹಗಳು ಹೈದರಾಬಾದಿನ ಪರಿಸ್ಥಿತಿಗೆ ಸಮರ್ಪಕವಗಿ ಇರಲೇ ಇಲ್ಲ. ಹೀಗಾದರೂ ಕೆಲವು ಭಿನ್ನ ಸಮಸ್ಯೆಗಳು ಇದ್ದೇ ಇದ್ದುವು. ಕಾಂಗ್ರೆಸ್‍ ಹೆಚ್ಚಾಗಿ ಪ್ರತಿನಿಧಿಸಿದ್ದು ಮೂರೂ ಪ್ರಾಂತಗಳ ಭಾಷಾವಾರು ಅಸ್ತಿತ್ವವಿದ್ದ ಹಿಂದೂಗಳನ್ನು. ಆದರೆ ಅವರುಗಳಲ್ಲಿನ ಯುವಕರ ಭಾಗ ಸತ್ಯಾಗ್ರಹದಂತಹ ಪ್ಯಾಸಿವ್ ಚಳುವಳಿಯಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿ ಒಡಕುಂಟಾಗಿ ಮಹಾರಾಷ್ಟ್ರ ಪರಿಷತ್ ಮತ್ತು ಆಂಧ್ರಮಹಾಸಭಾದಲ್ಲಿ ಹಂಚಿಹೋಯಿತು. ಮುಂದೆ ರಾವಿ ನಾರಾಯಣ ರೆಡ್ಡಿಯಂಥಹವರು ಆಂಧ್ರಮಹಾಸಭಾದಿಂದಲೂ ದೂರವಾಗಿ ಕಮ್ಯುನಿಸ್ಟರತ್ತ ವಾಲಿದರು.


ಈ ಕಡೆ ಮಹಾರಾಷ್ಟ್ರ ಪರಿಷದ್ ನಲ್ಲೂ ಭಿನ್ನತೆ ಮನೆಮಾಡಿತ್ತು. ಒಂದೆಡೆ ಕಾಂಗ್ರೆಸ್‌ನ ಕೆಲವರು ಮರಾಠವಾಡಾಕ್ಕೆ ಭಿನ್ನ ಪ್ರಾಂತ ಬೇಕೆಂಬ ಬೇಡಿಕೆಯಿತ್ತರೆ ಇನ್ನೊಂದು ಭಾಗ ಸ್ವಾತಂತ್ರಾನಂತರ ನಿಜಾಮನ ಆಳ್ವಿಕೆಯ ಭಾಗದಲ್ಲಿದ ಮರಾಠವಾಡಾವನ್ನು ವಿಶಾಲ ಏಕೀಕೃತ ಮಹಾರಾಷ್ಟ್ರದ ಭಾಗವನ್ನಗಿಸಬೇಕೆಂದು ಕೇಳುತ್ತಿದ್ದರು. ನಿಜಾಮನ ಆಳ್ವಿಕೆಯ ಭಾಗದಲ್ಲೂ [ಕಾಂಗ್ರೆಸ್ ಪಕ್ಷದ ಉದಾರ ಮುಖಗಳಾದ] ಕೆ.ಎಸ್.ವೈದ್ಯ ಮತ್ತು ನರಸಿಂಗ ರಾವ್ ಸ್ವಾತಂತ್ರಾನಂತರವೂ ಹೈದರಾಬಾದ್ ಪ್ರಾಂತ ನಿಜಾಮನಾಳ್ವಿಕೆಯಡಿಯಲ್ಲಿ ಹೇಗಿತ್ತೋ ಅದೇ ಭೌಗೋಳಿಕ ಪರಿಮಿತಿಗಳಲ್ಲಿ ಮುಂದುವರೆಯಬೇಕೆಂದು ಹೇಳುತ್ತಿದ್ದರು. ಹೀಗಾಗಿ [ನಿಜಾಮನಿರಲೀ ಇಲ್ಲದಿರಲೀ] ಹೈದರಾಬಾದ್ ಪ್ರಾಂತ ಹಾಗೇ ಇರಬೇಕೆಂಬ ಬೇಡಿಗೆ ಎಲ್ಲ ಜನರ ಒಗ್ಗಟ್ಟಿನ ಒಕ್ಕೊರಲಿನ ಬೇಡಿಕೆಯಾಗಿತ್ತೇ ಎನ್ನುವುದು ಸ್ಪಷ್ಟವಾಗಿರಲಿಲ್ಲ.


ಪುಸ್ತಕದಲ್ಲಿ ಬೆನಿಚೌ ಈ ಬಗ್ಗೆ ಪ್ರಸ್ತಪ ಮಾಡುತ್ತಾರೆ. [ಕ್ರಿಪ್ಸ್ ಪ್ರಸ್ತಾವವನ್ನು ಚರ್ಚಿಸುತ್ತಾ] "ಎರಡನೇ ಮಹಾಯುದ್ಧಕ್ಕಿಂತಲೂ ಮಹತ್ವದ ಸ್ಥಾನವನ್ನು ರಾಜ್ಯದ ಭೌಗೋಳಿಕ ಭವಿಷ್ಯ ಪಡೆಯಿತೆನ್ನಬೇಕು. ಇದರಿಂದ ಕೋಮು ಮತ್ತು ರಾಜಕೀಯ ಭಿನ್ನತೆಗಳು ಕಾಣಿಸತೊಡಗಿದವು. ಮಧ್ಯದ ದಾರಿಯಲ್ಲಿ ನಿತ್ತ ಹಿಂದೂಗಳು ಮೌನವಾಗಿದ್ದರು, ಆದರೆ ಉಗ್ರವಾದ ನಿಲುವು ತೆಗೆದುಕೊಂಡವರೆಲ್ಲಾ ಹೈದರಾಬಾದು ಜನಸತ್ತಾತ್ಮಕ ಭಾರತದ ಭಾಗವಾಗಿ ಸೇರಬೇಕು ಎಂದು ವಾದಿಸಿದರು. ಇತ್ತೆಹಾದ್ ಮುಸಲ್ಮಾನರು ಅದೊಂದು ಸ್ವತಂತ್ರ ರಾಜ್ಯವಾಗಿರಬೇಕೆಂಬ ನಿಲುವನ್ನು ತೆಗೆದುಕೊಂಡರು.


ಸ್ವಾತಂತ್ರಾನಂತರ [ಪೋಲೀಸ್ ಕಾರ್ಯಾಚರಣೆಗೆ ಮುನ್ನ] ಈ ಬಗ್ಗೆ ಗೊಂದಲ ಮುಂದುವರೆಯುತ್ತಿರುವುದು ಇನ್ನೂ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಯಾವೊಂದು ಗುರಿಯನ್ನೂ ಹಂಚಿಕೊಳ್ಳದಿದ್ದರೂ, ತೆಲಂಗಾಣಾ ಪ್ರಾಂತದಲ್ಲಿ ಕಮ್ಯುನಿಸ್ಟರು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಸಮರ್ಥನೆ ನೀಡಿದರು. "ಮದರಾಸು ಸರಕಾರ ಕಾಂಗ್ರೆಸ್ ವಿರೋಧಿಯಾಗಿದ್ದ ಕಮ್ಯುನಿಸ್ಟರಿಗೆ ಸಹಾಯ-ಸಹಕಾರ ನೀಡಿದ್ದು ಈ ವಿರೋಧಾಭಾಸದ ಬಗ್ಗೆ ಕಣ್ಣುಹಾಯಿಸದೇ ಇದ್ದದ್ದು ತರ್ಕಬದ್ಧ ಅನ್ನಿಸುವುದಿಲ್ಲ" ಎಂದು ಬೆನೆಚೌ ಹೇಳುತ್ತಾರೆ. ಆದರೆ ಮನದಟ್ಟಾಗುವಂತಹ ವಿವರಣೆ ಎಂದರೆ ಹೈದರಾಬಾದ್ ಕಾಂಗ್ರೆಸ್ ಛಿದ್ರವಾಗಿ ಬಲಹೀನವಾಗಿತ್ತು ಅನ್ನುವುದು ದೆಹಲಿಗೆ ಗೊತ್ತಿತ್ತು ಅನ್ನುವ ವಿಚಾರ. ತೆಲಂಗಾಣಾ ಪ್ರಾಂತದಲ್ಲಿ ನಿಜಾಮನ ಆಳ್ವಿಕೆಯನ್ನು ದುರ್ಬಲಪಡಿಸಲು ಇದ್ದ ಒಂದೇ ಮಾರ್ಗ ಕಮ್ಯುನಿಸ್ಟರನ್ನು ಬೆಂಬಲಿಸುವುದರಲ್ಲಿತ್ತು.

ಬೆನಿಚೌ ತಮ್ಮ ವಾದದಲ್ಲಿ ಅವಸರದಿಂದ ಕೈಗೊಂಡ ಪೋಲೀಸ್ ಕಾರ್ಯಾಚರಣೆಗೆ ಬದಲಾಗಿ ಭಾರತದೊಂದಿಗೆ ಹೈದರಾಬಾದಿನ ಏಕೀಕರಣ ಆಗಲು ಇದ್ದ ಅನೇಕ ಸಾಧ್ಯತೆಗಳನ್ನು ಚರ್ಚಿಸುತ್ತಾರಾದರೂ ಇವು ನಿಜಕ್ಕೂ ಕಾರ್ಯಗತಗೊಳಿಸುವಂಥವೇ ಅನ್ನುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮೇಲಾಗಿ ಏಕೀಕರಣ ಹೇಗಾಗಬೇಕು ಅನ್ನುವುದರ ಬಗ್ಗೆ ಒಂದು ಥರದ ಏಕಾಭಿಪ್ರಾಯವಿತ್ತೋ ಇಲ್ಲವೋ ಅನ್ನುವುದೂ ತಿಳಿಯುವುದಿಲ್ಲ. ಬೆನೆಚೌ ಅವರ ವಾದಸರಣಿಯಲ್ಲಿ ಹೈದರಾಬಾದನ್ನು ಗೋವಾದ ಹಾಗೆ ಅದರ ಪಾಡಿಗೆ ಬಿಟ್ಟುಬಿಟ್ಟಿದ್ದರೆ ಭೌಗೋಳಿಕ ಕಾರಣಗಳಿಂದ, ಬೇರೆ ದಾರಿಯಿಲ್ಲದೇ ಸಹಜವಾಗಿಯೇ ಏಕೀಕರಣ ಆಗಿಬಿಡುತ್ತಿತ್ತು ಅನ್ನುವುದಾಗಿದೆ. ಪಾಕಿಸ್ತಾನ ಹೈದರಾಬಾದನ್ನು ತನ್ನ ಪ್ರಾಂತದಲ್ಲಿ ಸೇರಿಸಿಕೊಳ್ಳುವುದು ಅಸಾಧ್ಯದ ಮಾತೇ ಆದ್ದರಿಂದ ಯಾರೂ ಇದನ್ನು ಸಮರ್ಥಿಸದಿದ್ದರೂ, ಏಕೀಕರಣದ ಅನಿವಾರ್ಯತೆಯ ಬಗ್ಗೆ, ಎಲ್ಲ ದಿಕ್ಕಿನಿಂದಲೂ ಭಾರತದ ನೆಲ ಸುತ್ತುವರಿದಿರುವ ಏಕೈಕ ಕಾರಣದಿಂದ ಸಹಜವಾಗಿಯೇ ಹೈದರಾಬಾದ್ ಭಾರತದ ಭಾಗವಾಗುತ್ತಿತ್ತು ಅನ್ನುವುದು ಅವರ ವಾದ.

ಕಡೆಯ ಹಂತದಲ್ಲಿ ನಿಜಾಮ ತನ್ನ ಪ್ರಜೆಗಳನ್ನು ತನ್ನ ಕಡೆ ಇರಿಸಿಕೊಳ್ಳುವುದರಲ್ಲಿ ವಿಫಲನಾಗಿರಬಹುದು ಎನ್ನುವ ಸೂಚನೆಯನ್ನು ಬೆನಿಚೌ ನೀಡುತ್ತಾರೆ. ನಿಜಾಮನ ಮೇಲೆ ಆಗಿನ ರಾಜಕೀಯ ಪರಿಸ್ಥಿತಿಯಲ್ಲಿ ಗೌಣವಾಗಿದ್ದ ಮಜ್ಲಿಸ್ ಹೆಚ್ಚಿನ ಹಿಡಿತವನ್ನು ಪಡೆದಿತ್ತೆನ್ನಿಸುತ್ತದೆ. ಹೀಗಾಗಿ ನಿಜಾಮ ಜನರ ನಾಡಿಯನ್ನಿ ಹಿಡಿಯುವುದರಲ್ಲಿ ವಿಫಲನಾದನೇನೋ. ಹಾಗೆ ನೋಡಿದರೆ "ಪ್ರಿಯ ರಾಜ" ಎಂದು ಕರೆಯಲ್ಪಡುತ್ತಿದ್ದ ಆರನೆಯ ನಿಜಾಮನಾದ ಮಹಬೂಬ್ ಅಲಿ ಖಾನ್‌ಗೆ ಸರೀ ವಿರುದ್ಧವಾದ ವ್ಯಕ್ತಿತ್ವ ಏಳನೆಯ ನಿಜಾಮನಾದ ಉಸ್ಮಾನ್ ಅಲಿ ಖಾನ್‍ನದಾಗಿತ್ತು. ಮಹಬೂಬ್‌ಗೆ ಸಮಾಜದ ಎಲ್ಲ ಸ್ಥರಗಳ ಜನರ ಸಂಪರ್ಕವಿತ್ತು. ಹಿಂದೂಗಳನ್ನು, ಮುಸಲ್ಮಾನರನ್ನೂ ಏಕರೀತಿಯಿಂದ ನೋಡುತ್ತಿದ್ದ ಮಹಬೂಬ್‌ನ ವ್ಯಕ್ತಿತ್ವ ಬಹಳವೇ ಭಿನ್ನವಾಗಿತ್ತು. ಹಿಂದೂ ಹಾಗೂ ಮುಸಲ್ಮಾನರಲ್ಲಿನ ಮಧ್ಯಮಾರ್ಗಿಗಳು ಹೆಚ್ಚಾಗಿ ಅಲ್ಲಿನ ಮುಲ್ಕಿ ಭಾವನೆಯಾದ "ಕೋಮಿನ ಪ್ರಮೇಯವಿಲ್ಲದೇ ಹೈದರಾಬಾದಿಗಳಿಗಾಗಿ ಹೈದರಾಬಾದು" ಅನ್ನುವ ಭಾವನೆಯಿತ್ತೆನ್ನುವುದು ಆಗಿನ ಬರಹಗಳು ಸೂಚಿಸುತ್ತವೆ. ಆದರೆ ಮಜ್ಲಿಸ್ ಮತ್ತು ರಜಾಕಾರರ ಕೂಗಾಟದ ನಡುವೆ ಈ ವಾದಕ್ಕೆ ಹೆಚ್ಚಿನ ಧ್ಯಾನ ಸಿಗಲಿಲ್ಲ. ಬಹುಷಃ ಏಕೀಕೃತ ಹೈದರಾಬಾದಿನ ರಾಜಕೀಯ ಅವಸಾನ ಅಲ್ಲಿಂದಲೇ ಪ್ರಾರಂಭವಾಯಿತೇನೋ.

ಹೈದರಾಬಾದಿನ ಮುಬ್ಭಾಗದ ಬಗ್ಗೆ ದುಃಖ ಪಟ್ಟವರು ಒಬ್ಬಿಬ್ಬರಲ್ಲ. ಆಂಧ್ರದ ಜೊತೆ ಕೂಡಿದ ಹೈದರಾಬಾದಿನ ರಾಜ್ಯದ ಅಸ್ತಿತ್ವ ಕಿರಿದಾಯಿತು. ಹಿಂದಿನ ಹೈದರಾಬಾದಿನ ಗುರುತುಗಳೆಲ್ಲಾ ಅಗ್ರಸ್ಥಾನದಿಂದ ಇಳಿದು ಹೈದರಾಬಾದು ಹರಿದು ಹಂಚಿಹೋದ ರಾಜ್ಯಗಳ ಅಂಚಿನಲ್ಲಿ ಕೂತವು. ತೆಲಂಗಾಣಾ ಹೋರಾಟದ ಮೂಲಗಳನ್ನು ನಾವು ಈ ಮುಬ್ಭಾಗದಲ್ಲಿ ಕಾಣಬಹುದು ಅನ್ನಿಸುತ್ತದೆ. ಹೈದರಾಬಾದ್ ನಗರದಲ್ಲಂತೂ ರಾಜ್ಯದ ಅಧಿಕೃತ ಭಾಷೆಯಾದ ತೆಲುಗನ್ನು ಚೆನ್ನಾಗಿ ಉಪಯೋಗಿಸಬಲ್ಲ ಕಡಲ ಆಂಧ್ರಪ್ರದೇಶದ ಜನರದೇ ಮೇಲುಗೈ ಆಯಿತು. ಅವರುಗಳು ಆಡಳಿತ ಯಂತ್ರಾಂವನ್ನು ತಮ್ಮ ಕೈವಶ ಮಾಡಿಕೊಂಡರು. ಉರ್ದುವುನಲ್ಲಿ ಕಲಿತ ಹಳೇ ಹೈದರಾಬಾದು ಸಂಸ್ಥಾನದ ಜನರಿಗೆ ಅದೇ ಒಂದು ತೊಡಕಿನ ವಿಷಯವಾಗಿ, ಅವರುಗಳಲ್ಲಿ ನಿರುದ್ಯೋಗ ಬೆಳೆಯಿತು. ೧೯೫೨ರಲ್ಲಿ ಬರೆದೆ ಈ ಮಾತುಗಳು ನಿಜಕ್ಕೂ ದೂರದೃಷ್ಟಿಯುತವಾಗಿತ್ತು ಎಂದು ನಾವು ಒಪ್ಪಲೇ ಬೇಕಾಗುತ್ತದೆ.

  • ಸುಮಾರು ಎಲ್ಲ ವಿಭಾಗಗಳಿಂದ ಉರ್ದು ಬಲ್ಲ ಜನರನ್ನು [ಸ್ವಯಂಪ್ರೇರಿತ ಹಾಗೂ ಬಲವಂತವಾಗಿ] ನಿವೃತ್ತಿಗೊಳಿಸಿ, ಅಮಾನತ್ತು, ಬರಖಾಸ್ತು ಮಾಡಿ ಆ ಜಾಗಕ್ಕೆ ಕಾರ್ಯತತ್ಪರತೆಯ ಕಾರಣ, ಹಾಗೂ ಹೊಸ ಅಧಿಕಾರಿಗಳಿಗೆ ಸಹಾಯಕವಾಗಿರಲೆಂಬ ಕಾರಣವನ್ನು ಕೊಟ್ಟು ತೆಲುಗು ಅಥವಾ ಇಂಗ್ಲೀಷ್ ಬಲ್ಲವರನ್ನು ನಿಯಮಿಸುವ ಪ್ರಯತ್ನಗಳು ಜೋರಾಗಿ ನಡೆದಿವೆ.

  • ಇನ್ನುಮುಂದೆ [ಭಾರತ ಸರಕಾರಕ್ಕೆ ಸೇರಿಹೋದ] ಈ ವಿಭಾಗಗಳ ಬಾಗಿಲುಗಳು ಮಣ್ಣಿನ ಮಕ್ಕಳಿಗೆ ಎಂದೆಂದಿಗೂ ಮುಚ್ಚಲಾಗಿದೆ ಎನ್ನುವುದು ವೇದ್ಯವೇ ಆಗುತ್ತಿದೆ. ಅವರು ಈಗಾಗಲೇ ಈ ವಿಷಯವಾಗಿ ಅಶಕ್ತ ನೆಲೆಯಲ್ಲಿರುವುದೂ ಎಲ್ಲರಿಗೂ ತಿಳಿದ ವಿಷಯ.

  • ಏಕೀಕರಣದ ಇನ್ನೊಂದು ಅದ್ಭುತ ಫಲವೆಂದರೆ ಇಲ್ಲಿಯವರೆಗೂ ತರಿಗೆಗಳ ಮೂಲಕ ತನ್ನ ಕಾಲಮೇಲೆ ತಾನೇ ನಿಂತಿದ್ದ ಹೈದರಾಬಾದ್ ಸಂಸ್ಥಾನ ಈಗ ತನ್ನ ದಿನನಿತ್ಯದ ಅಸ್ತಿತ್ವಕ್ಕಲ್ಲದೇ ರಾಷ್ಟ್ರನಿರ್ಮಾಣಕ್ಕಾಗಿಯೂ ಕೇಂದ್ರ ಸರಕಾರ ನೀಡುವ ದೇಣಿಗೆಯ ಮೇಲೆ ಆಧಾರಿತವಾಗಿ ಮುಂದುವರೆಯಬೇಕಾಗುತ್ತದೆ.

  • ಈ ಸಂಕಟದ ದನಿ ಸ್ಪಷ್ಟವಾಗಿ ನಮಗೆಲ್ಲರಿಗೂ ಕಾಣಿಸುತ್ತಿದೆ. ಭಾರತಕ್ಕೆ ಹೈದರಾಬಾದ್ ಸಂಸ್ಥಾನ ಸೇರುವ ಮುನ್ನ ಅವರಿಗೆ ತಮ್ಮದೇ ರಾಜನಿದ್ದ, ತಮ್ಮದೇ ಸಂವಿಧಾನವಿತ್ತು [ಆ ಸಂವಿಧಾನದಲ್ಲಿ ಅನೇಕ ಹುಳುಕುಗಳಿದ್ದಾಗ್ಯೂ ಅದು ತಮ್ಮದೇ ಆಗಿತ್ತು], ತಮ್ಮದೇ ರೀತಿಯಾದಂತಹ ಪ್ರಜಾಪ್ರಾತಿನಿಧ್ಯ ಮತ್ತು ಆಳ್ವಿಕೆಯಿತ್ತು. ಈ ಎಲ್ಲವನ್ನೂ ಆಗಷ್ಟೇ ಕಣ್ತೆರೆದು ಕಲಿಕೆಯ ಹಂತದಲ್ಲಿದ್ದ ಭಾರತದ ಸಂವಿಧಾನಕ್ಕೆ ಏಕೀಕರಣಗೊಳಿಸಲಾಯಿತು. ಈ ಏಕೀಕರಣವೂ ಸಂಸ್ಕೃತಿಯ ಐಕ್ಯವನ್ನು ಪರಿಗಣಿಸದೇ, ಭಾಷೆಯ ಆಧಾರದ ಮೇಲೆ, ಭಿನ್ನ ಸಂಸ್ಕೃತಿಗಳನ್ನು ಬಲವಂತವಾಗಿ ಐಕ್ಯ ಗೊಳಿಸಲಾಯಿತು.
ಬೆನಿಚೌ ಈಗಾಗಲೇ ವಿದಿತವಾದ ವಾದಗಳನ್ನು ಮೀರಿ ಹೊಸದೇನನ್ನೂ ಪುಸ್ತಕದಲ್ಲಿ ಹೇಳುವುದುಲ್ಲ. ಹೊಸ ವಿಶ್ಲೇಷಣೆಯನ್ನೂ ಒದಗಿಸುವುದಿಲ್ಲ. ಆದರೆ ಚರಿತ್ರೆಯ ಪುಟಗಳನ್ನು ಪುನಃ ತಿರುವಿಹಾಕಲು ಈ ಪುಸ್ತಕ ಎಡೆಮಾಡಿಕೊಡುತ್ತದೆ. ಅದೂ ಮುಖ್ಯವೇ.

Labels: , , ,

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು



Sunday, May 04, 2008

ಭಾನುವಾರದ
ವಿಶೇಷ

ಇತರ ಹಿಂದುಳಿದ ಜಾತಿಯವರಿಗೆ ವಿದ್ಯಾಸಂಸ್ಥೆಗಳಲ್ಲಿ ೨೭% ಮೀಸಲಾತಿ ನೀಡುವಂತಹ ಕಾನೂನನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆಯೇ ಸಮಾನತೆ, ಗುಣಮಟ್ಟ ಇತ್ಯಾದಿಯ ಬಗೆಗಿನ ಚರ್ಚೆ ಮತ್ತೆ ಆರಂಭವಾಗಿದೆ. ಚರ್ಚೆಗೆ ಒಂದು ಸ್ಪಷ್ಟ ಉತ್ತರ ಸಿಗುವುದಾಗಿದ್ದರೆ ಇಷ್ಟು ಗೊಂದಲಮಯ ವಸ್ತುವೇ ಆಗುತ್ತಿರಲ್ಲ. ಇದರಿಂದಾಗಿ .ಬಿ.ಸಿಗಳಿಗೆ ಒಳಿತಾಗುವುದೇ? ಮೇಲ್ವರ್ಗದವರ ಅವಕಾಶಗಳು ಕಡಿಮೆಯಾಗುವುದೇ? ಎಲ್ಲರನ್ನೂ ಸಮಾನ ಮಾನದಂಡದ ಮೇಲೆ ಅಳೆಯುತ್ತಿದ್ದ ಸಿದ್ಧಾಂತಕ್ಕೆ ಧಕ್ಕೆ ಬಂದಿದೆಯೇ? ಎಲ್ಲ ಪ್ರಶ್ನೆಗಳೂ ಉದ್ಭವಿಸುತ್ತವೆ. ಜಟಿಲವಾದ ವಿಷಯದ ನಿರಚನೆ ಅಷ್ಟೇ ಜಟಿಲವಾದದ್ದು.

ಸರ್ವರಿಗೂ ಸಮಬಾಳು ಅನ್ನುವ ಮಾತು ಎಂದಿಗಾದರೂ ನಿಜವಾಗಲು ಸಾಧ್ಯವೇ? ನಾವು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಅಸಮಾನತೆ ಇದ್ದೇ ಇರುತ್ತದೆ. ಅಸಮಾನತೆಯ ಮೂಲ ಹುಟ್ಟಿನಿಂದ, ಪ್ರತಿಭೆಯಿಂದ, ಬದುಕುವ ಸಂದರ್ಭದಿಂದ, ನೈಸರ್ಗಿಕ ಕಾರಣಗಳಿಂದ, ಪ್ರಕೃತಿಯಿಂದ, ಹಾಗೂ ಮಾನವನಿರ್ಮಿತ ತೊಡಕುಗಳಿಂದಾಗಿ ಉಂಟಾಗುತ್ತದೆ. ಅಸಮಾನತೆಯ ಮೂಲವನ್ನು ಹುಡುಕುವುದು ಕಷ್ಟದ ಸಂಗತಿ. ಹಾಗೂ, ಅಸಮಾನತೆಯನ್ನು ಇಲ್ಲವಾಗಿಸಲು ನಮಗೆ ಎಂದೆಂದಿಗೂ ಸಾಧ್ಯವಿಲ್ಲವೆಂಬ ಸತ್ಯವನ್ನು ನಾವು ಗಮನಿಸುತ್ತಲೇ, ಅದನ್ನು ತುಸುವಾದರೂ ಕಡಿಮೆಗೊಳಿಸುವ ಯತ್ನಕ್ಕೆ ಕಂಕಣಬದ್ಧರಾಗಬೇಕಾಗಿದೆ. ಹೀಗಾಗಿ ಮೀಸಲಾತಿಯನ್ನು ಒಂದು ಪರಿಹಾರ ಎಂದು ನಂಬದೇ ಅದು ಒಂದು ಪ್ರಕ್ರಿಯೆ ಅನ್ನುವುದನ್ನು ನಾವು ಗಮನಿಸಿದರೆ ಆಗ ಅದರಲ್ಲಿ ಕಡಿಮೆ ಹುಳುಕುಗಳನ್ನು ನಾವು ಕಾಣಬಹುದು. ಅದೇ ಸಮಯಕ್ಕೆ ಸಮಾನತೆಯ, ಗುಣಮಟ್ಟದ ಮಾತನ್ನಾಡುವ ಜನರ ವಿಚಾರಗಳನ್ನೂ ನಾವು ಒಂದುಕಡೆ ಅರ್ಥಮಾಡಿಕೊಳ್ಳಬಹುದು, ಅವರ ಜೊತೆ ಸಂಭಾಷಣೆಯ ಪ್ರಕ್ರಿಯೆಗೆ ತೊಡಗಬಹುದು.

ಸರಕಾರದ ಮೀಸಲಾತಿಯ ನೀತಿಯಲ್ಲಿ ವಿರೋಧಾಭಾಸವಿರಬಹುದೇ? ಈಗಾಗಲೇ ಆರ್ಥಿಕವಾಗಿ ಮುಂದುವರೆದವರಿಗೆ [ಕೆನೆಪದರ?] ಮೀಸಲಾತಿ ವರ್ತಿಸಬೇಕೇ? ಹಿಂದುಳಿದವರು ಅನ್ನುವುದಕ್ಕೆ ಆರ್ಥಿಕ ಹಿಂದುಳಿಯುವಿಕೆ ಮೂಲವೋ, ಜಾತಿ ಆಧಾರಿತ ಸಾಮಾಜಿಕ ಹಿಂದುಳಿಯುವಿಕೆಯನ್ನು ನಾವು ಪರಿಗಣಿಸಬೇಕೋ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ. ಯಾವ ಸ್ಥರದಲ್ಲಿ ಮೀಸಲಾತಿ ನಮಗೆ ಬೇಕಾಗಿದೆ? ಮೀಸಲಾತಿ ಎಲ್ಲಿ ನಿಲ್ಲಬೇಕು? ಇಂಥ ಪ್ರಶ್ನೆಗಳನ್ನೂ ನಾವು ನಮ್ಮಲ್ಲೇ ಕೇಳಿಕೊಳ್ಳಬೇಕಾಗುತ್ತದೆ. ಸಮಸ್ಯೆಯ ಮೂಲವಿರುವುದು ಎಲ್ಲರಿಗೂ ಸಮಾನಾವಕಾಶ ಇಲ್ಲದಿರುವ ಸತ್ಯದಲ್ಲಿ. ಸಮಾನಾವಕಾಶದ ಯುಟೋಪಿಯದ ಬೆನ್ನಟ್ಟಿ ನಾವು ಎಲ್ಲಿಯವರೆಗೆ ಪ್ರಯಾಣ ಮಾಡಬಹುದು?

ಒಂದು ಕ್ಷಣದ ಮಟ್ಟಿಗೆ ನಾವು ಶಿಕ್ಷಣ ಪದ್ಧತಿಯ ಆದಿಗೆ ಹೋಗೋಣ. ಪ್ರಾಥಮಿಕ ಶಾಲೆಯ ಮೊದಲನೆಯ ತರಗತಿಯಲ್ಲಿ ಮೀಸಲಾತಿ ಇರಬೇಕೆಂದು ಹೋರಾಡುವವರನ್ನು ನಾವು ಕಂಡಿದ್ದೇವೆಯೇ? ಪ್ರಾಥಮಿಕ ಶಾಲೆಯ ಮೊದಲ ತರಗತಿಗೆ ಮಕ್ಕಳನ್ನು ಸೇರಿಸುವಾಗ ಯಾವ ರೀತಿಯ ಭೇದ ಭಾವವನ್ನು ನೋಡಲು ಸಾಧ್ಯ? ಹಂತಕ್ಕೆ ಹೋದಾಗ ನಮಗೆ ವೇದ್ಯವಾಗುವುದು ಅಲ್ಲಿನ ಭೇದ ಭಾವವೆಲ್ಲ ಆರ್ಥಿಕ ಸಾಮಾಜಿಕ ಸ್ಥರಕ್ಕೆ ಸಂಬಂಧಿಸಿದ್ದು. ಶಾಲೆಗಳಲ್ಲಿ ನಡೆಸುವ ಮಕ್ಕಳ ಮತ್ತವರ ತಂದೆ ತಾಯಿಯರ ಸಂದರ್ಶನ ಮಗುವಿನ ಬುದ್ಧಿವಂತಿಕೆಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಬದಲಿಗೆ ಸ್ಕೂಲಿನ ನೀತಿ ನಿಯಮಗಳಿಗೆ, ಅಲ್ಲಿ ಓದಲು ಆಗುವ ಖರ್ಚಿಗೆ, ಅಲ್ಲಿಗೆ ಬರುವ ಇತರ ಮಕ್ಕಳೊಂದಿಗೆ ಸಾಮಾಜಿಕವಾಗಿ ಹೊಂದಾಣಿಕೆಯಾಗಬಹುದೇ ಇಲ್ಲವೇ ಅನ್ನುವ ಅಂಶವನ್ನೇ ಸ್ಥರದಲ್ಲಿ ನೋಡುತ್ತಾರೆ. ಎಲ್ಲೋ ಹೈದರಾಬಾದ್ ಪಬ್ಲಿಕ್ ಸ್ಕೂಲ್ನಂತಹ ಕೆಲವು ಶಾಲೆಗಳಲ್ಲಿ ಲಾಟರಿ ಎತ್ತಿ ಮಕ್ಕಳಿಗೆ ಪ್ರಾಥಮಿಕ ಶಾಲೆಗೆ ಸೇರಿಸಿಕೊಳ್ಳುವ ಅಪವಾದವನ್ನು ಅಲ್ಲಿ, ಇಲ್ಲಿ ನೋಡಿದ್ದೇವೆ. ಅನಂತಮೂರ್ತಿಯವರು ಪ್ರತಿಪಾದಿಸುವ ನೈಬರ್ಹುಡ್ ಶಾಲೆಗಳ ವಾದಸರಣಿಯನ್ನು ಒಂದು ಮಟ್ಟಿಗೆ ನಾವು ಒಪ್ಪಲೇಬೇಕಾಗುತ್ತದೆ. ಆದರೆ ಉತ್ತಮ ಅವಕಾಶಗಳಿರುವ ನೈಬರ್ಹುಡ್ಗಳನ್ನು ಹುಡುಕಿ ಹೋಗುವ ಪ್ರಕ್ರಿಯೆಯೂ ತಕ್ಷಣ ಪ್ರಾರಂಭವಾಗುತ್ತದೆನ್ನುವುದನ್ನು ನಾವು ಗಮನಿಸಬೇಕು.

ಹಾಗಾದರೆ ಮೂಲದಲ್ಲೇ ಜನರಿಗೆ ಸಿಗುವ ಅವಕಾಶಗಳು ಮತ್ತು ಅನುಭವಗಳು ಭಿನ್ನ ಎಂದ ಹಾಗಾಯಿತು. ಹಾಗೆ ನೋಡಿದರೆ ಒಂದೇ ಶಾಲೆಗೆ ಸೇರಿ ಒಂದೇ ತರಗತಿಗೆ ಹೋದ ಎಲ್ಲರೂ ಒಂದೇ ಸಮನಾಗಿ ಕಲಿಯುತ್ತಾರೆ ಅನ್ನುವುದೂ ಸುಳ್ಳೇ ಅಲ್ಲವೇ? ಹುಟ್ಟಿನಿಂದ, ತಂದೆತಾಯಿಯರ ಆರ್ಥಿಕ ಸ್ಥರದಿಂದ ಲಭ್ಯವಾಗುವ ಅವಕಾಶ ಅನುಭವದಿಂದ ಒಂದು ಮಗುವಿನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಹೀಗಾಗಿ ಅಸಮಾನತೆಯನ್ನು ನಾವು ಮೂಲದಲ್ಲೇ ಒಪ್ಪಿ ಮುಂದುವರೆಯುತ್ತಿದ್ದೇವೆ ಅಂದಹಾಗಾಯಿತು. ಅಸಮಾನತೆಯು ಒಂದೇ ಹಿನ್ನೆಲೆಯಿಂದ ಬಂದ ವ್ಯಕ್ತಿಗಳಿಗೂ ಆಗಬಹುದು. ಹಿನ್ನೆಲೆಯಿಂದಾಗಿ, ಹಿನ್ನೆಲೆಯ ಪರಿಸ್ಥಿತಿಯಿಂದಾಗಿ ಒಂದು ಸ್ಥರದ, ಜಾತಿಯ, ಹಿನ್ನೆಲೆಯ ಜನ ಮುಂಬರುವ ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯನ್ನು ನಾವು ಗುರುತಿಸಿದಲ್ಲಿ, ಮೀಸಲಾತಿಯನ್ನು ಹೀಗಾಗುವ ಏರುಪೇರುಗಳಿಗೆ ಕೊಡಬಹುದಾದ ಒಂದು ಮಿಡ್ ಕೋರ್ಸ್ ಕರೆಕ್ಷನ್ ಎಂದು ಪರಿಗಣಿಸಬೇಕಾಗುತ್ತದೆ. ಹೀಗೆ ನಾವು ಪರಿಗಣಿಸಿದಾಗ, ಮೀಸಲಾತಿಯ ವಿವಿಧ ರೂಪಗಳು ವಿವಿಧ ಸ್ಥರದಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಉಚ್ಚ ಶಿಕ್ಷಣದಲ್ಲಿ ಮೀಸಲಾತಿಯ ಬಗ್ಗೆ ಚರ್ಚೆ ಪ್ರಾರಂಭಿಸಿದಾಗ ವಿಷಯ ಜಟಿಲವಾಗುತ್ತಾ ಹೋಗುತ್ತದೆ. ಉದಾಹರಣೆಗೆ ಮೀಸಲಾತಿ ನೀತಿಯಿಂದಾಗಿ ವೈದ್ಯಕೀಯ ರಂಗದಲ್ಲಿ ಅಷ್ಟೇನೂ ಉತ್ತಮವಾದ ಮಾರ್ಕುಗಳನ್ನು ಪಡೆಯದವರು ಬಂದು ವೈದ್ಯರಾಗಿಬಿಟ್ಟರೆ ಜನರ ಆರೋಗ್ಯದ ಗತಿಯೇನು ಎಂದು ಪ್ರಶ್ನಿಸುವವರಿದ್ದಾರೆ. ಆದರೆ ಉತ್ತಮ ಮಾರ್ಕುಗಳನ್ನು ಪಡೆಯುವುದೇ ಉತ್ತಮ ಶಸ್ತ್ರಚಿಕಿತ್ಸೆ ಮಾಡುವ ಕೌಶಲ್ಯವನ್ನು ನೀಡುವುದೇ? ರಾಜಕೀಯ ಶಾಸ್ತ್ರ ಓದಿದವರೆಲ್ಲಾ ಉತ್ತಮ ರಾಜಕಾರಣಿಗಳೂ, ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರೆಲ್ಲಾ ಉತ್ತಮ ಪತ್ರಕರ್ತರೂ, ಎಂ.ಬಿ. ಗಳೆಲ್ಲಾ ಉತ್ತಮ ಆಡಳಿತಗಾರರೂ ಆಗಬೇಕೆಂದೇನೂ ಇಲ್ಲ. ಎಂ.ಬಿ,. ಡಿಗ್ರಿಯೇ ಉತ್ತಮ ಆಡಳಿತಕ್ಕೆ ದ್ಯೋತಕವಾಗಿದ್ದರೆ, ಎನ್ರಾನ್, ವರ್ಲ್ಡ್ಕಾಂ ಥರದ ಘಟನೆಗಳು ನಡೆಯದಿರಬೇಕಿತ್ತು. ಹೀಗಾಗಿ ಕ್ಷಮತೆಗೂ-ವಿದ್ಯೆಗೂ, ವಿದ್ಯೆಗೂ-ಕಾರ್ಯಕುಶಲತೆಗೂ, ಕಾರ್ಯಕುಶಲತೆಗೂ-ಶ್ರೀಮಂತಿಕೆಗೂ, ಶ್ರೀಮಂತಿಕೆಗೂ-ಕ್ಷಮತೆಗೂ ನಾವು ಇಲ್ಲದ ಸಂಬಂಧಗಳನ್ನು ಹುಡುಕುತ್ತಾ ಗೋಲ್ ಗೋಲ್ ಸುತ್ತುತ್ತೇವೆ.

ಹೀಗಾಗಿ ೨೭% ಮೀಸಲಾತಿಯ ತೀರ್ಪು ಸ್ವಾಗತಾರ್ಹವೇ ಸರಿ. ಇದರಿಂದ ಎಲ್ಲೋ ಮಧ್ಯದಲ್ಲಿ ಅವಕಾಶಕ್ಕೆ ವಂಚಿತರಾದ ಕೆಲವರಿಗಾದರೂ ಮತ್ತೆ ಅವಕಾಶ ನೀಡಿದಂತಾಗುತ್ತದೆ. ಯಾರಿಗಾದರೂ ಹೀಗೆ ಅವಕಾಶ ನೀಡಿದಾಗ, ಅವಕಾಶವ ನಿರ್ದಿಷ್ಟವಾದ ಸೀಟುಗಳಿಂದ ಬಂದಾಗ ಮತ್ತೊಬ್ಬರ ಸಹಜ ಅವಕಾಶದ ವಂಚನೆಯ ಮೂಲವಾಗಿ ಬರುತ್ತದೆ. ಜಟಾಪಟಿ ಉಂಟಾಗಿರುವುದರ ಹಿನ್ನೆಲೆ ಇಂತಿದೆ: ಮನುಷ್ಯರಲ್ಲಿ ಜಾತಿ, ಕುಲ, ಆರ್ಥಿಕ ಸ್ಥರಗಳ ವ್ಯತ್ಯಾಸವಿರುವಂತೆಯೇ ವಿದ್ಯಾಸಂಸ್ಥೆಗಳಲ್ಲೂ ರೀತಿಯ ವ್ಯತ್ಯಾಸಗಳಿವೆ. ಇಂಜಿನಿಯರಿಂಗ್ ಕ್ಷೇತ್ರಕ್ಕೆ ಬಂದರೆ ಐಐಟಿ, ಐಟಿ-ಬಿಎಚ್ಯು, ಬಿಟ್ಸ್ ಪಿಲಾನಿ, ಧನ್ಬಾದ್ ಶಾಲೆ, ಎನ್..ಟಿಗಳು, ಮತ್ತು ಇತರ ಇಂಜಿನಿಯರಿಂಗ್ ಕಾಲೇಜುಗಳೆಂಬ ಜಾತಿಪಂಥವಿದೆ. ಪಂಥದಲ್ಲಿ ಐಐಟಿಗಳಲ್ಲಿ ಓದಲು ಸಿಕ್ಕರೆ ಲಾಟರಿ ಹೊಡದಂತೆ ಅನ್ನುವ ನಂಬಿಕೆಯಿದೆ. ಕಾರಣ: ಕ್ಷೇತ್ರದಲ್ಲಿನ ಉತ್ತಮ ನೌಕರಿಗಳು ಅಲ್ಲಿನ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಹೀಗಾಗಿ ಅಲ್ಲಿಗೆ ಹೋಗಲು ಜನ ಪೈಪೋಟಿಯಿಂದ ಕಾದಾಡುತ್ತಾರೆ. ಮೇಲೆ ನಮೂದಿಸಿದ ಎಲ್ಲ ಸಂಸ್ಥೆಗಳೂ ಒಂದೇ ಸ್ಥರದಲ್ಲಿ ಇದ್ದಿದ್ದರೆ, ಎಲ್ಲಿಂದ ಬಂದರೂ ಸಮಾನಾವಕಾಶ ಎನ್ನುವುದಿದ್ದರೆ ಇಷ್ಟು ಜಟಾಪಟಿಯಾಗಲೀ ಕಾದಾಟವಾಗಲೀ ಆಗುತ್ತಿರಲಿಲ್ಲ. ಆದರೆ ನಾವು ಸಾಮಾನ್ಯವಾಗಿ ನೋಡುವುದು, ನಮಗೆ ಮೀಡಿಯಾದ ಕೃಪೆಯಿಂದ ದರ್ಶನವಾಗುವುದು ಸಫಲವಾದ ವಿದ್ಯಾರ್ಥಿಗಳ ಯಶೋಗಾಥೆ ಮಾತ್ರ. ಐಐಟಿಗಳಿಂದ ಪಾಸಾಗಿ ಜೀವನದಲ್ಲಿ ಅತ್ಯುತ್ತಮ ನೌಕರಿ ಪಡೆಯದಿರುವುದೆಷ್ಟು ಮಂದಿ? ಅಥವಾ ಐಐಟಿ/ಐಐಎಂ ನಂತಹ ಸಂಸ್ಥೆಗಳಲ್ಲಿ ಅವಕಾಶ ಸಿಕ್ಕದ, ಅಥವಾ ಸಿಕ್ಕಿಯೂ ಅಲ್ಲಿ ಓದದ ಸಫಲ ಕೆರಿಯರ್ ಕಂಡುಕೊಂಡ ಮಂದಿ ಎಷ್ಟು?

ನಮ್ಮ ಮಂತ್ರಿಮಂಡಲವನ್ನೇ ತೆಗೆದುಕೊಳ್ಳಿ. ಮಣಿಶಂಕರ್ ಐಯ್ಯರ್ ಓದಿರುವುದು ಡೂನ್ ಸ್ಕೂಲಿನಲ್ಲಿ, ನಂತರ ಬಹುಶಃ ಸ್ಟೀವನ್ಸ್ ಕಾಲೇಜಿನಲ್ಲಿ. ಚಿದಂಬರಂ ಹಾರ್ವರ್ಡ್ನಲ್ಲಿ, ಜೈರಾಮ್ ರಮೇಶ್ ಐಐಟಿಯಲ್ಲಿ. ಲಾಲೂ ಎಲ್ಲಿ ಓದಿರಬಹುದು? ಎಲ್ಲರೂ ಮಂತ್ರಿಗಳು. ಲಾಲೂ ಹಾರ್ವರ್ಡ್, ಐಐಎಂಗಳಲ್ಲಿ ಪಾಠಮಾಡಿಬಂದರು. ಮಿಕ್ಕವರು ಯಾರಿಗೂ ಅವಕಾಶ ಸಲ್ಲಲಿಲ್ಲ! ಹಾಗೆ ನೋಡಿದರೆ ಲಾಲೂ ಬಿಹಾರದ [ನೇರ ಮತ್ತು ಹಿನ್ನೆಲೆಯ] ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನು ನಾಶನಮಾಡಿದರೆಂದು ನಂಬಿದ ಮೀಡಿಯಾ, ರೈಲ್ವೇ ಮಂತ್ರಿ ಲಾಲೂ ಬಗ್ಗೆ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಹೀಗಾಗಿ ನಮಗೆ ವ್ಯಕ್ತಿ ಕೆಲವು ಸಂದರ್ಭಗಳಲ್ಲಿ ಫೇಲಾದರೂ, ಮತ್ತೆ ಕೆಲವು ಸಂದರ್ಭಗಳಲ್ಲಿ ಮಿಂಚಬಹುದು. ಆದರೆ ಮಿಂಚಲು ಅವಕಾಶ ಸಿಗಬೇಕಷ್ಟೇ. ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಕ್ಕರೆ, ಮಿಂಚಲು ಸಾಧ್ಯವಾಗುವ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಸಹಜ ಕ್ಷಮತೆ ಇರುವವರು ಸಂದರ್ಭವನ್ನು ತಾವೇ ನಿರ್ಮಿಸಿಕೊಳ್ಳುವ ಸಾಧ್ಯತೆ ಹೆಚ್ಚು. ನಾವು ವಾದಸರಣಿಯಲ್ಲಿ ಹೋದಾಗ ಹೆಚ್ಚಿನ ಕ್ಷಮತೆಯಿರಬಹುದಾದ ಮೇಲ್ವರ್ಗದ ವಿದ್ಯಾರ್ಥಿಗೆ ಸಹಜವಾಗಿ ಬರುತ್ತಿದ್ದ ಉನ್ನತ ಶಿಕ್ಷ್ಣಣದ ಸೀಟು ಮೀಸಲಾತಿಯ ಮೂಲಕ ಬೇರೊಬ್ಬರಿಗೆ ಹೋದರೆ ಒಂದು ಸಮಾಜದ ಸ್ಥರದಲ್ಲಿ ಅಷ್ಟೇನೂ ದುಃಖ ಪಡುವ ಕಾರಣವಿಲ್ಲವೇನೋ.

ಧೀರೂಭಾಯಿ ಅಂಬಾನಿ, ಬಿಲ್ ಗೇಟ್ಸ್, ಲ್ಯಾರೀ ಪೇಜ್, ನಾರಯಣ ಮೂರ್ತಿ ಯಾರೂ ಎಂ.ಬಿ. ಮಾಡಿದವರಲ್ಲ, ಆದರೂ ಅದ್ಭುತವಾಗಿ ತಮ್ಮ ಧಂಧೆ ನಡೆಸಿದರು. ಷಾ ರೂಕ್ ಖಾನ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ ಫಿಲಂ ಇನ್ಸ್ಟಿಟ್ಯೂಟಿಗೆ ಹೋದವರಲ್ಲ. ಆಡ್ ಲೋಕದ ಪ್ರಸೂನ್ ಜೋಷಿ ಓದಿದ್ದು ಐಐಎಂನಲ್ಲಿ ಅಲ್ಲ - ಅವರ ವಿದ್ಯಾಭ್ಯಾಸವಾದದ್ದು ಆಡ್ ಲೋಕಕ್ಕೆ ಸಂಬಂಧಿಸಿದ ಮುದ್ರಾ ಇನ್ಸ್ಟಿಟ್ಯೂಟಿನಲ್ಲೂ ಅಲ್ಲ - ಅವರು ಓದಿದ್ದು ಘಾಜಿಯಾಬಾದ್ ಐಎಂಟಿ ಅನ್ನುವ ಸಂಸ್ಥೆಯಲ್ಲಿ. ವಾಲ್ ಸ್ಟ್ರೀಟ್ ಜರ್ನಲ್ ಯುರೋಪಿನ ಎಡಿಷನ್ಗೆ ಸಂಪಾದಕರಾಗಿದ್ದು ಇಂದು ಭಾರತದಲ್ಲಿ ಮಿಂಟ್ ಎಂಬ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ರಾಜು ನಾರಿಸೆಟ್ಟಿ ಓದಿದ್ದು ಕುರಿಯನ್ ಸ್ಥಾಪಿಸಿದ ಗ್ರಮೀಣ ನಿರ್ವಹಣೆಯ ಸಂಸ್ಥೆ ಇರ್ಮಾದಲ್ಲಿ. ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣದಿಂದೆತ್ತಣ ಸಂಬಂಧವಯ್ಯಾ?

ಹೀಗಾಗಿ ಮೀಸಲಾತಿಯ ಬಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರತಿಕ್ರಿಯಗಳನ್ನು [ಮಂಡಲ್ ಆಯೋಗವನ್ನು ಅಮಲುಗೊಳಿಸಬೇಕೆಂದು ವಿ.ಪಿ.ಸಿಂಗ್ ನಿರ್ಧರಿಸಿದಾಗ ರಾಜೀವ್ ಗೋಸ್ವಾಮಿಯಂಥಹ] ಕೆಲ ಉತ್ಸಾಹೀ ಯುವಕರು ತೋರಿಸಿದಾಗ ಇದೆಲ್ಲಾ ಯಾಕೆ ಅಂತ ನನಗೆ ಅನ್ನಿಸುವುದುಂಟು. ಮೀಸಲಾತಿ ಇರಬೇಕೇ? ನಿಜವಾದ ಸಮಬಾಳಿನ ಲೋಕದಲ್ಲಿ ಮೀಸಲಾತಿಯೇ ಇರಬಾರದು. ಮೀಸಲಾತಿಯಿರಬಾರದು ಅಂದರೆ ಅಷ್ಟು ಭಿನ್ನ ಮತ್ತು ಭರಪೂರ ಅವಕಾಶಗಳಿರಬೇಕು. ರೈಲಿನ ಟಿಕೆಟ್ಟನ್ನು ನಾವು ಕಾಯ್ದಿರಿಸುತ್ತೇವೆ. ಆದರೆ ಆಟೊ ಹತ್ತಬೇಕೆಂದರೆ ನಮಗೆ ಬೇಕಾದಾಗ ಸಿಗುತ್ತದೆ. ಮಧ್ಯ ಹೆಚ್ಚಿನಂಶ ವಿಮಾನಯಾನಕ್ಕೂ ಭಿನ್ನ ಅವಕಾಶಗಳಿವೆ. ವಿದ್ಯೆಗೂ ಇಂಥ ಉತ್ತಮ ಅವಕಾಶಗಳಿರಬೇಕು. ಪ್ರತಿ ಸಂಸ್ಥೆಯೂ ಉತ್ತಮ ಗುಣಮಟ್ಟದ ಗುರಿಯನ್ನು ಹೊಂದಿ ನಿಟ್ಟಿನಲ್ಲಿ ನಡೆದಷ್ಟೂ ಮೀಸಲಾತಿಯ ಅವಶ್ಯಕತೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಕನಸು ನನಸಾಗುವವರೆಗೂ, ಜಟಾಪಟಿ ಇದ್ದೇ ಇರುತ್ತದೆ.

ಎಂ.ಎಸ್. ಶ್ರೀರಾಮ್
೨೪ ಏಪ್ರಿಲ್ ೨೦೦೮

Labels: , ,

ಸಾಲಮನ್ನಾ ರಾಜಕಾರಣ



Monday, April 28, 2008

ಭಾನುವಾರದ
ವಿಶೇಷ

ಕರ್ನಾಟಕದಲ್ಲಿ ಚುನಾವಣೆಯ ಬಿಸಿಯೇರುತ್ತಿದ್ದಂತೆ, ಅನೇಕ ಹೊಸ ಆಶ್ವಾಸನೆಗಳು, ಹೊಸ ಭರವಸೆಗಳನ್ನು ವಿವಿಧ ಪಕ್ಷಗಳು ನೀಡುತ್ತಿವೆ. ಸಾಮಾನ್ಯವಾಗಿ ಗ್ರಾಮೀಣ ಮತದಾರರನ್ನು ಓಲೈಸಲು ಪಕ್ಷಗಳು ಕೃಷಿ, ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮಾತನ್ನಾಡುವುದನ್ನು ನಾವು ಕಂಡೇ ಇದ್ದೇವೆ. ಎಲ್ಲ ಪಕ್ಷಗಳಿಗೂ ಪ್ರಿಯವಾದ ಯೋಜನೆಗಳೆಂದರೆ ಕೃಷಿ ಸಂಬಂಧಿತವಾದ ಸಾಲವನ್ನು ಮನ್ನಾ ಮಾಡುವುದು, ಅಥವಾ ಕೃಷಿ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತವನ್ನು ಘೋಷಿಸುವುದು, ಉಚಿತ ವಿದ್ಯುತ್ ಸರಬರಾಜಿನ ಭರವಸೆ ನೀಡುವುದು ಹಾಗೂ ಕರುಣಾನಿಧಿಯವರ ಕರುಣೆಯ ನಂತರ ಹೊಸತಾಗಿ ಚುನಾವಣಾ ಭರವಸೆಗೆ ಸೇರಿರುವ ಉಚಿತ ಬಣ್ಣದ ಟೀವಿಗಳನ್ನು ಹಂಚುವುದು. ಮೊದಲಿಗೆ ಯಾವುದಾದರೂ ಯೋಜನೆಯಿದ್ದಲ್ಲಿ ಅದರ ಕರ್ತೃವಿನ ಛಾಪು ಇರುತ್ತಿತ್ತು. ಉದಾಹರಣೆಗೆ ೨ ರೂಪಾಯಿಗಳಿಗೊಂದು ಕಿಲೋ ಅಕ್ಕಿಯನ್ನು ಕೊಡಲು ಪ್ರಾರಂಭಿಸಿದವರು ತೆಲುಗುದೇಶಂ ಪಕ್ಷದ ನಾಯಕರಾಗಿದ್ದ ಎನ್.ಟಿ.ರಾಮಾರಾವು ಅವರು. ಆದರೆ ಅದನ್ನು ಕಾಂಗ್ರೆಸ್ ಪಕ್ಷ ಈಗ ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ಉಚಿತ ವಿದ್ಯುತ್ತಿನ ಬಗ್ಗೆ ಮಾತಾಡುತ್ತಿರುವಾಗಲೇ ಅವರದೇ ಪಕ್ಷದ ಸರಕಾರ ಗುಜರಾತಿನಲ್ಲಿ ವಿದ್ಯುತ್ತಿಗೆ ಪೂರ್ಣ ಶುಲ್ಕವನ್ನು ವಿಧಿಸಿಯೂ ಚುನಾವಣೆ ಗೆದ್ದಿದೆ. ಡಿಎಂಕೆ ನೀಡಿದ ಬಣ್ಣದ ಟೀವಿಯ ಭರವಸೆಯನ್ನು ಕಾಂಗ್ರೆಸ್ ತನ್ನದೇ ಎಂಬಂತೆ ಸ್ವೀಕರಿಸಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಿಗೂ ಪ್ರಾಂತೀಯ ಪಕ್ಷಗಳಿಗೂ ವ್ಯತ್ಯಾಸವೇ ಕಾಣದಂತಾಗಿದೆ.

ನಮ್ಮ ಅನೇಕ ಸಾಂಸದರು ಗ್ರಾಮೀಣ ಪ್ರದೇಶಗಳಿಂದ ಚುನಾಯಿತರಾಗಿ ಬರುತ್ತಾರೆ. ಅವರುಗಳಿಗೆ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು ನಮ್ಮೆಲ್ಲರಿಗಿಂತ ಚೆನ್ನಾಗಿಯೇ ಗೊತ್ತಿರುತ್ತದೆ. ಸಮಸ್ಯೆಗಳು ತಿಳಿದಿರುವಾಗ ಅದಕ್ಕೆ ತಕ್ಕ ಸಮಾಧಾನದ ಬಗ್ಗೆಯೂ ಅವರಿಗೆ ಉತ್ತಮ ಅವಗಾಹನೆಯಿರುತ್ತದೆ. ಬಹಳಷ್ಟು ವ್ಯಂಗ್ಯಚಿತ್ರಗಳಲ್ಲಿ ಚಿತ್ರಿಸುವಂತೆ ನಮ್ಮ ರಾಜಕಾರಣಿಗಳು ಮೂರ್ಖರಲ್ಲ. ಸಿನೇಮಾಗಳಲ್ಲಿ ಚಿತ್ರಿಸುವಂತೆ ಖಳರೂ ಅಲ್ಲ. ಪಾರ್ಲಮೆಂಟರಿ ಸ್ಟಾಂಡಿಂಗ್ ಕಮಿಟಿಗಳ ಚರ್ಚೆಯ ವಿವರಗಳನ್ನು ನೋಡಿದರೆ, ಅವರುಗಳು ಪಕ್ಷಗಳ ಭಿನ್ನತೆಗಳನ್ನು ಬಿಟ್ಟು ಮೂಲ ವಿಷಯಗಳ ಬಗ್ಗೆ ಗಹನವಾಗಿ ಚರ್ಚಿಸಬಲ್ಲರು ಅನ್ನುವುದು ವೇದ್ಯವಾಗುತ್ತದೆ. ಕ್ಯಾಮರಾ ಎದುರಿಗಿಲ್ಲದಾಗ, "ಪಕ್ಷದ ಹಿತ" ಅನ್ನುವ ವಿಚಿತ್ರ ನಾಟಕೀಯ ಪರಿಸ್ಥಿತಿ ಇಲ್ಲದಾಗ ಇತರ ಪಕ್ಷದ ಕಾರ್ಯಕರ್ತರೊಂದಿಗೆ ಸ್ನೇಹದಿಂದ, ಎಷ್ಟೋ ಭಿನ್ನ ವಿಷಯಗಳನ್ನು ಚರ್ಚಿಸುವುದನ್ನು ಕಾಣಬಹುದು. ಉದಾಹರಣೆಗೆ ಈಚೆಗೆ ತಮ್ಮ ಪುಸ್ತಕ ಬಿಡುಗಡೆಯಾದಾಗ ಅದ್ವಾನಿಯವರು ತಮಗೂ ರಾಹುಲ್ ಗಾಂಧಿಗೂ ದೆಹಲಿಯ ವಿಮಾನ ನಿಲ್ದಾಣದ ಲೌಂಜಿನಲ್ಲಿ ನಡೆದ ಸಂಭಾಷಣೆಯ ಬಗ್ಗೆ ಮಾತನಾಡಿದ್ದರು. ಇಂತಹ ಮಾತುಕತೆಗಳು ಬಹಳವೇ ಸಾಮಾನ್ಯ. ಆದರೂ ಚುನಾವಣೆ, ಸಂಸತ್ತಿನ ಕೆಲಸಕ್ಕೆ ಬಂದಾಗ ತಮ್ಮ ಸ್ವಂತ ಅಭಿಪ್ರಾಯವನ್ನೂ ಮೀರಿ, ತಾವು ಖುದ್ದಾಗಿ ಬಹುಶಃ ನಂಬದ ವಿಚಾರದ ಬಗ್ಗೆ ಮೇಜುಗುದ್ದಿ ಮಾತನಾಡುವ ಶಕ್ತಿಯೂ ಅವರುಗಳಿಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮಂಡಿಸಿದ ೬೦,೦೦೦ ಕೋಟಿರೂಪಾಯಿಯ ಸಾಲ ಮನ್ನಾ ಯೋಜನೆಯನ್ನು ಒಳ್ಳೆಯ ಯೋಜನೆಯೆಂದು ಚಿದಂಬರಂ ಅವರು ನಿಜಕ್ಕೂ ನಂಬಿದ್ದಾರೆಯೇ? ಅದೇ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೃಷಿಗೇ ಬಳಸಬಹುದಿತ್ತೇ?
ಈ ಪ್ರಶ್ನೆಗಳನ್ನು ಕೇಳಿದಾಗ ಚಿದಂಬರಂ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ಬರಲಿರುವ ಚುನಾವಣೆಗಾಗಿ ತಯಾರಿ ನಡೆಸಬೇಕೆಂದಿರುವ ಕಾಂಗ್ರೆಸ್ ಪಕ್ಷಕ್ಕೆ ಬೇಕಿರುವ, ಜನರನ್ನು ಆಕರ್ಷಿಸಬಹುದಾದ "ಒಂದು ಸಾಲಿನ ಕಥೆ"ಯ ಒತ್ತಡಕ್ಕೂ ಇರಬಹುದಾದ ಜಟಾಪಟಿ ನಮಗೆ ಕಾಣಿಸುತ್ತದೆ.

ಸಿನೇಮಾ ರಂಗದಲ್ಲಿ "single line story" ಅನ್ನುವ ಮಾತು ಪ್ರಚಲಿತವಿದೆ. ಸಿಂಗಲ್ ಲೈನ್ ಕಥೆಯೆಂದರೆ, ಚಿತ್ರಕಥೆಯ ಮುಖ್ಯಾಂಶಗಳು ಏನೆಂದು ಸರಳವಾಗಿ ವಿವರಿಸುವ ವ್ಯೂಹ. ಇದರಿಂದಾಗಿ ಆ ಚಿತ್ರದಲ್ಲಿ ಏನು ನಿರೀಕ್ಷಿಸಬಹುದು ಎಂದು ಅದರ ತಯಾರಿಯಲ್ಲಿ ತೊಡಗಿರುವವರಿಗೆ ಅರ್ಥವಾಗುತ್ತದೆ. ಹಾಗೂ ಅದು ಬಾಕ್ಸ್ ಆಫೀಸಿನಲ್ಲಿ ಗೆಲ್ಲಬಹುದೋ ಅನ್ನುವ ಒಂದು ಅಂದಾಜೂ ಸಿಗುತ್ತದೆ. ಆದರೆ ಎಷ್ಟೋ ಇಂಥಹ ಪ್ರಯೋಗಗಳು ಮಣ್ಣುಮುಕ್ಕುವುದನ್ನು ನಾವು ಕಂಡಿದ್ದರೂ "ಲವ್ ಸ್ಟೋರಿ, ಸೆಂಟಿಮೆಂಟು ಇದೆ, ಪಕ್ಕದ ಕಾಮೆಡಿಯ ಟ್ರಾಕಿನಲ್ಲಿ ಹೀಗೆ ನಡೆಯುತ್ತದೆ.. ೮ ಹಾಡುಗಳು, ೬ ಫೈಟುಗಳು, ಯೂತ್‍ಗೆ ಅಪೀಲ್ ಆಗುತ್ತದೆ" ಅನ್ನುವಂಥಹ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೇ. ಚುನಾವಣೆಗೆ ಮುನ್ನ ಬರುವ ಘೋಷಣಾ ಪತ್ರಗಳೂ ರಾಜಕೀಯ showmanshipನ ಸಿಂಗಲ್ ಲೈನ್ ಕಥೆಗಳೇ ಆಗಿವೆ. ಈ ಸಿಂಗಲ್ ಲೈನ್ ಕಥೆಗಳ ಬಂಧನವನ್ನು ಮೀರಿ ನಿಂತಾಗ ಅನಿರೀಕ್ಷಿತ ಗೆಲುವುಗಳು ಸಿಗುತ್ತವೆ ಅನ್ನುವುದನ್ನು ರಾಜಕೀಯ ಪಕ್ಷಗಳು ಗಮನಿಸಿದಂತಿಲ್ಲ. ಗೆಲ್ಲುತ್ತಾರೆಂದು ನಂಬಿದ್ದ ಚಂದ್ರಬಾಬುವಿನ ಸೋಲು, ಸೋಲುತ್ತಾರೆಂದು ನಂಬಿದ್ದ ಮಾಯಾವತಿಯ ಗೆಲುವು, ಯಾವುದೇ ಭರವಸೆಗಳನ್ನು ನೀಡದೇ - ಕೆಲಸದ ಆಧಾರದ ಮೇಲೆ ಓಟು ಕೇಳಿ ಗೆದ್ದ ನರೇಂದ್ರ ಮೋದಿಯ ಮಾಯ, ಅದೇ ಇಂಡಿಯಾ ಶೈನಿಂಗ್ ಉಪಯೋಗಿಸಿ ನೆಲಕಚ್ಚಿದ ಬಿಜೆಪಿ, ಈ ಎಲ್ಲವನ್ನೂ ನೋಡಿದಾಗ ಯಾವುದೇ ಗೆಲುವಿಗೆ ನಿರ್ದಿಷ್ಟ ಫಾರ್ಮುಲಾ ಇಲ್ಲವೆಂಬುದು ವೇದ್ಯವಾಗುತ್ತದೆ. ಆದರೂ, ಪ್ರತಿ ಸಿನೇಮಾದಲ್ಲೂ ಇರುವ ೮ ಹಾಡು ೨ ಮಾನಭಂಗ ಪ್ರಸಂಗಗಳಂತೆ ಘೋಷಣಾಪತ್ರಗಳು ಇಂಥದೇ ಒಂದು ಫಾರ್ಮುಲಾ ಹುಡುಕಿ ಮುಂದೆ ನಡೆದಿವೆ. ಗೆದ್ದ ಸಿನೇಮಾದ ಕಥೆಯನ್ನು ರೀಮೇಕ್ ಮಾಡಿದಂತೆಯೇ ರಾಜಕೀಯ ಯೋಜನೆಗಳೂ ಎರವಲು ನೀತಿಯ ಮೇಲೆಯೇ ನಿಂತಂತಿದೆ!

ನೀತಿಗಳನ್ನು ಯೋಜನೆಗಳನ್ನೂ ರೂಪಿಸುವಾಗ ನಾವುಗಳು ಕೆಲವು ಮಿಥ್ಯೆಗಳಿಗೆ ಬಲಿಯಾಗುತ್ತೇವೆ. ಅದರಲ್ಲಿ ಒಂದು ದೊಡ್ಡ ಮಿಥ್ಯೆಯೆಂದರೆ ಗ್ರಾಮೀಣ ಪ್ರದೇಶದ ನೀತಿಗಳನ್ನು ರೂಪಿಸುವಾಗ ಅದು ಪೂರ್ಣವಾಗಿ ಕೃಷಿಯಲ್ಲಿ ಅಡಕವಾಗಿರಬೇಕೆಂಬ ಮಿಥ್ಯೆ. ಈಚಿನ ಸೆನ್ಸಸ್ ಮಾಹಿತಿಯನುಸಾರ ದೇಶದ ಗ್ರಾಮೀಣ ಪ್ರಾಂತದಲ್ಲಿ ಕೃಷಿಕರು [ಕಲ್ಟಿವೇಟರ್ಸ್] ಕೇವಲ ೪೦% ಜನ ಮಾತ್ರ ೩೩% ಜನ ವ್ಯವಸಾಯ ಕೂಲಿಗಳು. ಹೀಗಾಗಿ ಕೃಷಿಯಾಧಾರಿತ ನೀತಿಗಳನ್ನು ಯೋಜಿಸಿದಾಗ ಹೆಚ್ಚಿನಂಶ ಪ್ರಯೋಜನವಾಗುವುದು ಈ ೪೦% ಜನರಿಗೆ ಮಾತ್ರ. ಆದರೂ ಬಡತನದ ಮಾತಾಡುವಾಗ ಅದನ್ನು ಗ್ರಾಮೀಣ ಪ್ರದೇಶಕ್ಕೆ ಸೀಮಿತಗೊಳಿಸುವ ಮಿಥ್ಯೆ. ಹೀಗಾಗಿ ಬಡತನ=ಗ್ರಾಮೀಣ ಪ್ರದೇಶ = ಕೃಷಿ ಅನ್ನುವ ಸರಳೀಕರಣದ ಆಧಾರದ ಮೇಲೆ ಅನೇಕ ನೀತಿಗಳು ರೂಪಿತವಾಗುತ್ತವೆ. ಕಳೆದ ಹಲವು ದಶಕಗಳಲ್ಲಿ ಭಿನ್ನ ಸರಕಾರಗಳು ರೂಪಿಸಿರುವ ಗ್ರಾಮೀಣ ವಿತ್ತ ನೀತಿಯನ್ನು ಗಮನಿಸಿದಾಗ ನಮಗೆ ಈ ನೀತಿಗಳು ಎಷ್ಟು ದೂರದೃಷ್ಟಿರಹಿತವಾಗಿದ್ದವು ಅನ್ನುವ ಮಾತು ಮನವರಿಕೆಯಾಗುತ್ತದೆ.


ಗ್ರಾಮೀಣ ವಿತ್ತದ ದುರಂತದ ದೊಡ್ಡ ಘಟ್ಟ ಆರಂಭವಾದದ್ದು ಬಹುಶಃ ೧೯೮೯ರಲ್ಲಿ. ಆದರೆ ಅದಕ್ಕೂ ಮುಂಚೆ ಆ ದುರಂತದ ಮುನ್ಸೂಚನೆಗಳನ್ನು ಭಿನ್ನ ಸರಕಾರಗಳು ನೀಡುತ್ತಲೇ ಬಂದಿದ್ದವು. ಆದರೆ ೫೦ರಿಂದ ೭೦ರ ದಶಕದವರೆಗೂ ಸರಕಾರದ ನೀತಿಗಳು ಮೇಲ್ಮುಖವಾಗಿದ್ದವೆಂದೇ ಹೇಳಬೇಕು. ೧೯೫೦ರ ಅಖಿಲ ಭಾರತ ಗ್ರಾಮೀಣ ಋಣ ಸರ್ವೆ, ಮತ್ತು ದಶಕಕ್ಕೊಮ್ಮೆ ಬರುವ ಅಖಿಲ ಭಾರತ ಋಣ ಮತ್ತು ಹೂಡಿಕೆಯ ಸರ್ವೆ [ಆಲ್ ಇಂಡಿಯಾ ರೂರಲ್ ಕ್ರೆಡಿಟ್ ಸರ್ವೆ/ಗೋರ್ವಾಲಾ ಸಮಿತಿ, ಆಲ್ ಇಂಡಿಯಾ ಡೆಟ್ ಅಂಡ್ ಇನ್ವೆಸ್ಟ್ಮೆಂಟ್ ಸರ್ವೆ] ಮಾಹಿತಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಿತ್ತೀಯ ಸದುಪಾಯ ಹೆಚ್ಚಿನಂಶ ಬಡ್ಡೀ ವ್ಯಾಪಾರಿಗಳು ಪೂರೈಸುತ್ತಿದ್ದು ಸಂಸ್ಥಾಗತ ಮೂಲದಿಂದ ಬರುತ್ತಿದ್ದ ಭಾಗ ಅಲ್ಪವಾಗಿತ್ತು. ಹೀಗಾಗಿಯೇ ಸಹಕಾರೀ ಸಂಸ್ಥೆಗಳಲ್ಲಿ ಸರಕಾರದ ಭಾಗಸ್ವಾಮ್ಯವಿರಬೇಕೆಂದು ಗೊರ್‍ವಾಲಾ ಸಮಿತಿ ಸೂಚಿಸಿತ್ತು. ಹೆಚ್ಚಿನಂಶ ನಮ್ಮ ಸಹಕಾರೀ ನೀತಿಗಳು ಈ ಸಮಿತಿಯ ಸೂಚನೆಗಳ ಆಧಾರದ ಮೇಲೆ ಆ ದಶಕಗಳಲ್ಲಿ ರೂಪಿತವಾದವು.

೧೯೭೦ರ ವೇಳೆಗೆ ಗ್ರಾಮೀಣ ವಿತ್ತ ರಂಗದಲ್ಲಿ ಸಂಸ್ಥಾಗತ ಮೂಲಗಳ ಪಾತ್ರವನ್ನು ಹಿಗ್ಗಿಸಲು ಬ್ಯಾಂಕುಗಳ ರಾಷ್ಟ್ರೀಕರಣವನ್ನೂ ಮಾಡಲಾಯಿತು. ಅದರಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಲಾಭವಾಯಿತೆಂದು ರೋಹಿಣಿ ಪಾಂಡೇ ಮತ್ತು ಬರ್ಗಸ್ ತಮ್ಮ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಇದಕ್ಕೆ ಪೂರಕವಾದ ವಿತ್ತೀಯ ನೀತಿಯಲ್ಲಿ ಎರಡು ಅಂಶಗಳಿದ್ದವು.
  • ೧. ಈಗಾಗಲೇ ಬೇರೆ ಯಾವುದಾದರೂ ಬ್ಯಾಂಕಿನ ಶಾಖೆಯಿರುವ ನಗರ ಪ್ರದೇಶದಲ್ಲಿ ಹೊಸ ಶಾಖೆಯನ್ನು ತೆರೆಯಬೇಕಾದರೆ, ಬ್ಯಾಂಕಿಲ್ಲದ ನಾಲ್ಕು ಹಳ್ಳಿಗಳಲ್ಲಿ ಶಾಖೆ ತೆಗೆದಾಗ ಮಾತ್ರ ಅದಕ್ಕೆ ಲೈಸೆನ್ಸ್ ಸಿಗುತ್ತಿತ್ತು.
  • ೨. ಒಟ್ಟಾರೆ ಸಾಲದ ೧೮ ಪ್ರತಿಶತ ಕೃಷಿಗಾಗಿಯೇ ನೀಡುವುದು ಅನಿವಾರ್ಯವಾಗಿತ್ತು. ಅದರಲ್ಲೂ ೧೩.೫% ಕೃಷಿಗೆ ನೇರವಾಗಿ ನೀಡಬೇಕಾದ ಸಾಲವಾಗಿತ್ತು.
ಮೊದಲ ನೀತಿಯನ್ನು ೧೯೯೦ರ ದಶಕದಲ್ಲಿ ಕೈಬಿಡಲಾಯಿತಾದರೂ, ಎರಡನೆಯ ನೀತಿಯನ್ನು ಇಂದಿಗೂ ಪಾಲಿಸುತ್ತಿದ್ದೇವೆ. ಈ ನೀತಿ ಒಳ್ಳೆಯದೇ, ಆದರೆ ಒಟ್ಟಾರೆ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರಬೇಕು ಅನ್ನುವ ನೀತಿಯಿಂದ ಮುಂದೆ ಹೋಗಿ ಆ ಸಂಸ್ಥೆಗಳು ಯಾವರೀತಿಯಾದಂತಹ ಪಾತ್ರವನ್ನು ವಹಿಸಬೇಕು - ಯಾವ ರೀತಿಯ ಋಣ ಸದುಪಾಯವನ್ನು ಯಾವ ಯೋಜನೆಗಳ ಮೂಲಕ, ನೀಡಬೇಕೆನ್ನುವುದನ್ನು ಸರಕಾರ ರೂಪಿಸತೊಡಗಿದಾಗ ಸರಕಾರದ ನೀತಿಯ ಪತನ ಕಾಣಿಸಿತು ಅನ್ನಿಸುತ್ತದೆ. ಈ ಪತನದ ಮುಖ್ಯ ಮೈಲಿಗಲ್ಲುಗಳೆಂದರೆ -

  • ೧. ಕೇಂದ್ರದಲ್ಲಿ ರೂಪಿತವಾಗಿ ಬ್ಯಾಂಕು, ಸಹಕಾರಿ ಸಂಘಗಳ ಗಂಟಲುಗಳಿಗೆ ತುರುಕಿದ, ಬಹುಷಃ ಅನೇಕ ಪ್ರದೇಶಗಳಿಗೆ ಸಮರ್ಪಕವಾಗಿಲ್ಲದ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಸಾಲಗಳು.
  • ೨. ಊರೂರಲ್ಲಿ ಗ್ರಾಮಗ್ರಾಮಗಳಲ್ಲಿ ಮಂತ್ರಿಗಳ ಮೂಲಕ ನಡೆದ ಬ್ಯಾಂಕುಗಳ ಸಾಲ ಮೇಳ ಕಾರ್ಯಕ್ರಮಗಳು.
ಈ ಎರಡೂ ಕಾರ್ಯಕ್ರಮಗಳಿಂದಾಗಿ, ಸಾಲ ಕೇಳದ ಜನರಿಗೆ, ಅವರ ಮನೆಯ ಬಾಗಿಲಿಗೇ ಹೋಗಿ ಅವರಿಗೆ ಸಮರ್ಪಕವಾಗಿಲ್ಲದ ಉದ್ದೇಶಕ್ಕಾಗಿ ಸಾಲ ನೀಡುವುದು. ಅಥವಾ ನೀಡಿದಂತೆ ಬರಕೊಳ್ಳುವ ಪ್ರಕ್ರಿಯ ಪ್ರಾರಂಭವಾಯಿತು. ಯಾವುದೇ ಆಗಿರಲಿ ಇದು ಒಂದು ಟೈಂ ಬಾಂಬಿನಂತೆ, ಸಿಡಿಯಲು ತಯಾರಾದ ವಿಷಯವಾಗಿತ್ತು. ಇದು ಎಷ್ಟರ ಮಟ್ಟಿಗೆ ದುರಂತಮಯ ವಿಷಯವಾಗಿತ್ತೆಂದರೆ, "ಲೋನಿ"ಗೂ "ಸಾಲ"ಕ್ಕೂ ಇರುವ ವ್ಯತ್ಯಾಸ ಭಾಷಾಂತರದ ವಿಷಯವಾಗದೆ, ಲೋನೆಂದರೆ, ಬ್ಯಾಂಕಿನಿಂದ ಬರುವ ಮೊಬಲಗು, ಅದನ್ನು ವಾಪಸ್ಸು ಕಟ್ಟುವ ಅವಶ್ಯಕತೆಯಿಲ್ಲ, ಸಾಲವೆಂದರೆ ಬಡ್ಡಿವ್ಯಾಪಾರಿಗಳಿಂದ ಬರುವುದು, ಅದನ್ನು ಕಟ್ಟುವ ಅವಶ್ಯಕತೆ ಇದ್ದೇ ಇದೆ ಅನ್ನುವ ಮಾತನ್ನು ಜನ ಗ್ರಹಿಸಿಬಿಟ್ಟಿದ್ದರು ಎಂದು ಅಲೋಷಿಯಸ್ ಫರ್ನಾಂಡಿಸ್ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ. ಆಡುಭಾಷೆಯನ್ನೇ ಬದಲಾವಣೆ ಮಾಡಿದ ಕೀರ್ತಿ ಕರ್ನಾಟಕದ ಜನಾರ್ಧನ ಪೂಜಾರಿಯವರಿಗೆ ಸಲ್ಲುತ್ತದೆ!!

ಈ ಎರಡೂ ಕಾರ್ಯಕ್ರಮಗಳಿಂದ ಆಗಿದ್ದೇನೆಂದರೆ ಸಹಕಾರಿ ಸಂಘಗಳು ಸಹಕಾರಿ ಸಂಘಗಳಾಗಿ ಉಳಿಯದೇ ಸರಕಾರೀ ವಿಭಾಗಗಳಾಗಿ ತಯಾರಾದದ್ದು. ಬ್ಯಾಂಕುಗಳು ಸಾಲ ಮೇಳಗಳ ಒತ್ತಡಕ್ಕೆ ಬಲಿಯಾಗಿ ಹಣವನ್ನು ಹಂಚಿದ್ದು. ಕೆಟ್ಟ ತಿರುಗಿಬರಲಾರದ ಸಾಲದ ದೊಡ್ಡ ಬೆಟ್ಟವೇ ಭಾರತದ ಆರ್ಥಿಕ ಸ್ಥಿತಿಯ ಮೇಲೆ ಒಂದು ಒತ್ತಡವಾಗಿ ನಿಂತಿತ್ತು. ೧೯೮೯ರಲ್ಲಿ ಚೌಧರೀ ದೇವೀಲಾಲರ ಪ್ರಿಯಯೋಜನೆಯಾದ ಸಾಲಮನ್ನಾ ಕಾರ್ಯಕ್ರಮವನ್ನು ಮೊದಲಬಾರಿಗೆ ದೇಶಾದ್ಯಂತ ಘೋಷಿಸಲಾಯಿತು. ಆ ಯೋಜನೆಯನ್ನು ಮಂಡಿಸಿದವರು ಅಂದಿನ ವಿತ್ತ ಮಂತ್ರಿಯಾಗಿದ ಮಧು ದಂಡವತೆಯವರಾಗಿದ್ದರೂ, ದೇವೀಲಾಲರ ಯೋಜನೆಯೆಂದೇ ಅದು ತನ್ನ ಖ್ಯಾತಿಯನ್ನು ಪಡೆಯಿತು. ಈ ಕಾರ್ಯಕ್ರಮ ಗ್ರಾಮೀಣ ವಿತ್ತೀಯ ಯೋಜನೆಯ ಮೇಲೆ ಸರಕಾರ ನೀಡಿದ ಒಂದು ಬಲವಾದ ಪ್ರಹಾರವಾಗಿತ್ತು. ಇದರಿಂದೇನಾಯಿತು? ಲೋನ್ ಅನ್ನುವುದು ಸರಕಾರದ ದೇಣಿಗೆ ಎನ್ನುವ ಮಾತು ಸತ್ಯವಾಗುತ್ತಾ ಹೋಯಿತು. ಹೌದು, ಸಾಲ ತಿರುಗಿ ಕಟ್ಟಿದವರು ಕೋಡಂಗಿಗಳಾದರು. ತೀರಿಸದೇ ಓಡಾಡಿದವರು ಈರಭದ್ರರಾದರು! ಇದರ ಪ್ರಭಾವವನ್ನು ಆ ಕ್ಷಣಕ್ಕೆ ಲೆಕ್ಕ ಕಟ್ಟಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ, ಸರಕಾರ "ಹೇಗೂ ವಾಪಸ್ಸು ಬರುವುದಿಲ್ಲ" ಎಂದು ನಂಬಿದ್ದ ಹಣವನ್ನು ಸಹಕಾರ ಸಂಘಗಳಿಗೆ, ಗ್ರಾಮೀಣ ಬ್ಯಾಂಕುಗಳಿಗೆ ಮತ್ತು ಬ್ಯಾಂಕುಗಳಿಗೆ ನೀಡಿದ್ದರಿಂದ ಈ ಸಂಸ್ಥೆಗಳ ಬ್ಯಾಲೆನ್ಸ್ ಷೀಟ್ ಚೆನ್ನಾಗಿ ಕಾಣತೊಡಗಿತು. ಆದರೆ ಆ ನಂತರದ ದಶಕದಲ್ಲಿ ನಮಗೆ ಸ್ಪಷ್ಟವಾಗಿ ಕಂಡದ್ದು ಸಹಕಾರಿ ಸಂಘಗಳ ಅವಸಾನ, ಮತ್ತು ಗ್ರಾಮೀಣ ಬ್ಯಾಂಕುಗಳು ನಷ್ಟದ ಪ್ರಪಾತದಲ್ಲಿ ತೂರಿಹೋದ ದುರಂತ ಗಾಥೆ.

೫೦ರ ದಶಕದಲ್ಲಿ ಗ್ರಾಮೀಣ ಕುಟುಂಬಗಳು ಪಡೆದ ಒಟ್ಟಾರೆ ಸಾಲದಲ್ಲಿ ಸಂಸ್ಥಾಗತ ಮೂಲಗಳಿಂದ ಪಡೆದದ್ದು ಕೇವಲ ೭.೩ ಪ್ರತಿಶತವಾಗಿತ್ತು. ಆ ಸಂದರ್ಭದಲ್ಲಿಯೇ ಗೋರ್‌ವಾಲಾ ಸಮಿತಿ ಸಹಕಾರಿ ಸಂಘಗಳು ಸರಕಾರದ ಭಾಗಸ್ವಾಮ್ಯದಲ್ಲಿ ಕೆಲಸ ಮಾಡಬೇಕೆಂದು ಕರೆಯಿತ್ತದ್ದು. ೧೯೬೧ರ ವೇಳೆಗ ಸಂಸ್ಥಾಗತ ಮೂಲಗಳ ಪಾಲು ೧೮.೭% ಸೇರಿತ್ತು. ೧೯೭೧ರ ವೇಳೆಗೆ ಇದು ಇನ್ನೂ ಹೆಚ್ಚಾಗಿ ೩೨%ವಾಗಿತ್ತು. ಆಗಷ್ಟೇ ಬ್ಯಾಂಕುಗಳ ರಾಷ್ಟ್ರೀಕರಣ, ಮತ್ತು ೭೦ ದಶಕದಲ್ಲಿ ಪ್ರಾರಂಭವಾದ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯಿಂದಾಗಿ ಒಂದೇ ದಶಕದಲ್ಲಿ ಸಂಸ್ಥಾಗತ ಮೂಲದಿಂದ ಬಂದ ಸಾಲದ ದುಪ್ಪಟ್ಟಾಗಿ ೬೩ ಪ್ರತಿಶತವಾಯಿತು. ೧೯೯೧ರವರೆಗೂ ಇದು ಬೆಳವಣಿಗೆಯದಿಕ್ಕನ್ನೇ ಹೊಂದಿತ್ತು. ೧೯೯೧ರ ಸರ್ವೇ ಪ್ರಕಾರ ಸಂಸ್ಥಾಗತ ಮೂಲದ ಪಾಲು ೬೬ ಪ್ರತಿಶತವಾಯಿತು. ಆದರೆ ೧೯೮೯ರ ಮನ್ನಾದ ನಂತರ ಈ ಪಾಲು ೬೧%ಗೆ ಇಳಿದದ್ದನ್ನು ನಾವು ಕಾಣಬಹುದಾಗಿದೆ. ಆದರೆ ಇದರಲ್ಲಿನ ಇನ್ನೂ ಗಹನವಾದ ವಿಚಾರವೆಂದರೆ ಸಂಸ್ಥಾಗತ ಋಣದ ಭಾಗದಲ್ಲಿ ಸಹಕಾರ ಸಂಘಗಳ ಪಾಲು ೧೯೮೦ರ ದಶಕದಿಂದಲೇ ಕಿರಿದಾಗುತ್ತಾ ಹೋಗಿದ್ದು.

ಹೀಗಿರುವಾಗ ಋಣ ನೀಡುವ ಈ ಸಂಸ್ಥೆಗಳನ್ನು ಮುಗಿಸಿಬಿಡಬಹುದಾದ ಈ ಆಶ್ವಾಸನೆಗಳನ್ನು ಪೈಪೋಟಿಯ ಮೇಲೆ ಪಕ್ಷಗಳು ಯಾಕೆ ನೀಡುತ್ತವೆ ಎನ್ನುವುದು ಅರ್ಥವಾಗದಿರುವ ಮಾತಾಗಿದೆ. ೧೯೯೧ರ ನಂತರ ಬ್ಯಾಂಕುಗಳಿಗೆ ಸಾಕಷ್ಟು ಸ್ವಾಯತ್ತತೆಯನ್ನು ಸರಕಾರ ನೀಡಿತ್ತು. ಒಟ್ಟಾರೆ ಋಣದಲ್ಲಿ ೪೦ ಪ್ರತಿಶತ ಕಾಯ್ದಿಟ್ಟ ಕೆಲವು ವಲಯಗಳಿಗೆ ನೀಡಬೇಕೆಂದೂ, ೧೮ ಪ್ರತಿಶತ ಋಣ ಕೃಷಿಗಾಗಿಯೇ ನೀಡಬೇಕೆಂಬ ನೀತಿಯನ್ನು ಪಾಲಿಸುವುದರಿಂದಾಗಿ, ಆರ್ಥಿಕವಾಗಿ ಮಿಕ್ಕ ಕ್ಷೇತ್ರಗಳು ಬೆಳೆದ ಗತಿಯಲ್ಲಿ ಕೃಷಿಗೂ ಋಣ ಲಭ್ಯವಾಗುವ ನೀತಿಯಂತೂ ಇದ್ದೇ ಇತ್ತು. ಆದರೆ ಕೃಷಿ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಆರ್ಥಿಕ ಪರಿಹಾರವನ್ನು ಹುಡುಕುವವರೆಗೂ ಸಾಲ, ಬಡ್ಡಿಗೆ ಸಂಬಂಧಿಸಿದ ನೀತಿಗಳು ಮರುಕಳಿಸುತ್ತಲೇ ಇರುತ್ತವೆ. ೧೯೯೧ರ ನಂತರ ಆರ್ಥಿಕ ನೀತಿಯಲ್ಲಿ ಒಂದೆರಡು ಹೆಜ್ಜೆ ಮುಂದೆ ಹೋಗಿದ್ದ ಸರಕಾರ ೨೧ನೇ ಶತಮಾನ ಪ್ರವೇಶಿಸುವ ವೇಳೆಗೆ ಹಿಂದಕ್ಕೆ ನಾಲ್ಕಾರು ಹೆಜ್ಜೆಗಳನ್ನು ಹಾಕಬೇಕೆಂದು ನಿರ್ಧರಿಸಿದಂತಿದೆ!

ಈಬಾರಿ ಕೇಂದ್ರ ಸರಕಾರ ಘೋಷಿಸಿರುವ ಸಾಲ ಮನ್ನಾದ ಮೂಲ ಸರಕಾರದ ಕಳೆದ ನಾಲ್ಕಾರು ವರ್ಷಗಳ ನೀತಿಯಲ್ಲಿ ನಾವು ಕಾಣಬಹುದಾಗಿದೆ. ಮೊದಲನೆಯದಾಗಿ ಕೃಷಿಯಲ್ಲಿ ಬಿಕ್ಕಟ್ಟು ಕಂಡಾಗಲೆಲ್ಲಾ ಸರಕಾರ ಮತ್ತು ರಾಜಕೀಯ ಪಕ್ಷಗಳ ಉತ್ತರ ಋಣವನ್ನು ಸುಲಭವಾಗಿ ರೈತರಿಗೆ ಒದಗಿಸುವತ್ತಲೇ ವಾಲುತ್ತದೆ. ಇದಕ್ಕೆ ಕಾರಣ ಬಹುಶಃ "ಸಿಂಗಲ್ ಲೈನ್ ಕಥೆ"ಗೆ ಇದು ಪೂರಕವಾಗಿರಬಹುದಾದ್ದೇ ಇರಬಹುದು. ಹೀಗಾಗಿ "ಮೂರು ವರ್ಷಗಳಲ್ಲಿ ಕೃಷಿ ಸಾಲ ದ್ವಿಗುಣ" ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಅದನ್ನು ಸಾಧಿಸಿದ್ದೇವೆಂದು ಘೋಷಿಸುವುದೂ ಸುಲಭ, ಅದರಬಗ್ಗೆ ಸಂಸ್ಥೆಗಳ ಕೈ ತಿರುಚುವುದೂ ಸುಲಭ. ಅದೇ ಕೃಷಿಗೆ ಸಂಬಧಿತ ವಿಸ್ತರಣೆಯ ಕಾರ್ಯಕ್ರಮಗಳನ್ನು ಅದರ