ಕುರಿಯನ್: ಹಾಲು ಕುಡಿಯದ ಹುಡುಗಾ


ಭಾನುವಾರ ಮುಂಜಾನೆ ಎಚ್ಚರವಾಗುವಷ್ಟರಲ್ಲಿ ತಲುಪಿದ ಸುದ್ದಿ: "ವರ್ಗೀಸ್ ಕುರಿಯನ್ ಅಸುನೀಗಿದರು". ತೊಂಬತ್ತು ವರ್ಷ ಪೂರ್ಣ ಜೀವನ ನಡೆಸಿ ತಮ್ಮ ಕರ್ಮಭೂಮಿಯಾದ ಗುಜರಾತಿನಲ್ಲಿ ಅಸುನೀಗಿದ ಕುರಿಯನ್ ಅವರ ಸೇವೆಗೆ ಪ್ರತಿಯಾಗಿ ಕನಿಷ್ಟ ಒಂದು ಭಾರತ ರತ್ನ ಪುರಸ್ಕಾರವನ್ನೂ ಕೊಡದೆಯೇ ದೇಶ ಅವರನ್ನು ಬೀಳ್ಕೊಟ್ಟಿತು. ಸಿರಿಯನ್ ಕ್ರೈಸ್ತರಾದ ಆತನ ದೇಹವನ್ನು ಮಣ್ಣು ಮಾಡದೆಯೇ ಆತನ ಕೋರಿಕೆಯಂತೆ ಆಣಂದದ ಕೈಲಾಶಭೂಮಿಯಲ್ಲಿನ ವಿದ್ಯುತ್ ಚಿತಾಗಾರಕ್ಕೆ ಅರ್ಪಿಸಲಾಯಿತು. ತಮ್ಮ ಕಾಯಿದೆಯ ಪ್ರಕಾರ ತಮಗಿಷ್ಟಬಂದಂತೆ, ರಾಜನಂತೆ, ಜೀವಿಸಿದ ಕುರಿಯನ್ ಸಾವಿನಲ್ಲೂ ತಮ್ಮದೇ ಮಾರ್ಗವನ್ನು ಹಿಡಿದು ನಡೆದರು. ಅವರು ತಮ್ಮ ದೇಹವನ್ನು ಸ್ಥಳೀಯ ಸಂಸ್ಕೃತಿಗೆ – ತಾವು ದುಡಿದ ರೈತರ ಆಚಾರಕ್ಕೆ ಸಮರ್ಪಕವಾಗಿ ಸುಡಬೇಕೆಂದು ಕೇಳಿಕೊಂಡಿದ್ದರಂತೆ. ಎಂದೂ ಸ್ಥಳೀಯ ಸಂಸ್ಕೃತಿಗೆ ಒಗ್ಗಿಕೊಳ್ಳದ ಅವರ ಈ ಕೋರಿಕೆ ಅಸಾಧಾರಣವಾದದ್ದೇ. ಬದುಕಿರುವಾಗಲೇ ತಾವು ಇದ್ದ ಮೊದಲ ಮನೆ, ಅದರ ಗ್ಯಾರೇಜನ್ನು ಸಂಗ್ರಹಾಲಯವನ್ನಾಗಿಸಿದ್ದನ್ನು ಕಂಡು ತೃಪ್ತಿ ಪಟ್ಟಿದ್ದ ಆತನಿಗೆ ತಮ್ಮ ದೇಹದ ಮೇಲೊಂದು ಸ್ಮಾರಕವನ್ನು ನಿರ್ಮಿಸುವುದು ಇಷ್ಟವಿರಲಿಲ್ಲವೆನ್ನಿಸುತ್ತದೆ. ಸಾಂಪ್ರದಾಯಿಕ ಗುಜರಾತಿಗಳ ನಡುವೆ ತಮ್ಮ ಮಾಂಸಾಹಾರದ ಬಗ್ಗೆ ಖುಲ್ಲಂ ಖುಲ್ಲಾ ಆಗಿದ್ದು – ಪಾನವಿರೋಧಿ ಕಾಯಿದೆಯಿದ್ದ ಗುಜರಾತಿನಲ್ಲಿ ತಮ್ಮ ಸಂಜೆಯ ಪೆಗ್ಗನ್ನು ಸಂತೋಷದಿಂದಲೇ ಹಾಕುತ್ತಾರೆಂದು ಪ್ರತೀತಿಯಿದ್ದ, "ಹಾಲೆಂದರೆ ನನಗಿಷ್ಟವಿಲ್ಲ, ನಾನು ಕುಡಿಯುವುದಿಲ್ಲ" ಎನ್ನುತ್ತಿದ್ದ, ಎಂದೂ ಗುಜರಾತಿ ಭಾಷೆ ಮಾತಾಡದ ಕುರಿಯನ್ ಇದ್ದಕ್ಕಿದ್ದ ಹಾಗೆ ತಮ್ಮ ಸಾವಿಗೆ ಸ್ಥಳೀಯ ಸಂಸ್ಕೃತಿಯ ಲೇಪ ಕೊಡುವುದರಲ್ಲಿ ಅದಕ್ಕಿಂತಲೂ ಮಿಗಿಲಾದ ಅರ್ಥವಿರಬಹುದು.




No comments: