ಹೃದ್ರೋಗಿಗಳು ಕಡಿಮೆಯಾಗುತ್ತಾರೆ

ಬರಹಗಾರರು ನಗುವುದನ್ನ ಮರೆತಿಲ್ಲ. ಅವರು ಬರೆದ ಘನಘಂಭೀರ ಕೃತಿಗಳನ್ನು ವಿಮರ್ಶಕರು ಕುಯ್ದುಕುಯ್ದು ಒಳಗೆ ಅರ್ಥವನ್ನು ಹುಡುಕುವುದನ್ನು ನೋಡಿ ಅದನ್ನು ಅರ್ಥೈಸುವ ರೀತಿಯನ್ನ ನೋಡಿ, ವಿಮರ್ಶಕರ ಪದಪ್ರಯೋಗವನ್ನು ನೋಡಿ ನಗುತ್ತಲೇ ಇದ್ದಾರೆ. 

ಹೀಗೆ ಹೇಳಿದಾಗ ಬರಹಗಾರರಿಗೂ ವಿಮರ್ಶಕರಿಗೂ ವ್ಯತ್ಯಾಸವಿದೆ ಅನ್ನುವುದನ್ನು ನಾವು ಗಮನಿಸಬೇಕು. ಕವಿ, ಕಥೆಗಾರ, ನಾಟಕಕಾರರನ್ನು ಜನ ಬರಹಗಾರರೆಂದು ಗುರುತಿಸುತ್ತಲೇ ವಿಮರ್ಶಕರನ್ನು ಬೇರೆಯಾಗಿ ಇಟುಬಟ್ಟಿದ್ದಾರೆ! ಆದರೆ ಘಂಭೀರ ಕೃತಿಗಳಲ್ಲೂ ಹಾಸ್ಯವನ್ನು ಹುಡುಕುವುದು, ಖುಷಿಯನ್ನು ಹುಡುಕುವ ಜವಾಬ್ದಾರಿ ಇರುವುದು ಓದುಗನ ಮೇಲೆ ಅವಲಂಬಿತವಾಗಿದೆ. ಓದುಗನೇ ಆ ಕೃತಿಯನ್ನು ಘಂಭೀರವಾಗಿ ಸ್ವೀಕರಿಸಿದರೆ ಅದು ಬರಹಗಾರನ ತಪ್ಪೇ? 




ರಾಮಲಿಂಗ ರಾಜು ಎನ್ನುವ ಎನ್ ಮೈನಸ್ ವನ್ ಹೀರೋ

ಎಲ್ಲರ ನಂಬಿಕೆಗೆ ದ್ರೋಹ ಮಾಡಿರಬಹುದು ಆದರೆ ರಾಮಲಿಂಗ ರಾಜು ಕ್ರಿಮಿನಲ್ ಅಲ್ಲ ಎಂದು ತೆಲುಗು ಚಾನೆಲ್‌ಗಳು ನಡೆಸಿದ ಎಸ್.ಎಂ.ಎಸ್. ಪೋಲ್ ತಿಳಿಸಿದೆಯಂತೆ. ಇದೊಂದು ಆಸಕ್ತಿಯ ಸುದ್ದಿ! ಈ ರೀತಿಯ ಸಿಂಪತಿ ರಾಜುವಿಗೆ ಬರುವುದರಲ್ಲಿ ಅಷ್ಟು ಆಶ್ಚರ್ಯವಾಗಬಾರದೇನೋ. ಯಾಕೆಂದರೆ ಅವರು ಸತ್ಯಂ ವಧಾ ಮಾಡಿದ್ದಲ್ಲದೇ ಕನ್ನೇಶ್ವರ ಧರ್ಮಂ ಚರಾ ಮಾಡಿದ್ದಾರೆ!  "ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ನನಗಾಗಿಲ್ಲ", ಎಂದ ಮೇಲೆ ಅವರು ಅಪರಾಧಿ ಹೇಗಾಗುತ್ತಾರೆ? ಆದರೆ ನಮ್ಮ ಪ್ರಶ್ನೆ "ನಿಮಗಂತೂ ಲಾಭವಾಗಿಲ್ಲ.. ಆದರೆ ಇದರಿಂದ ಯಾರಿಗೆ ಲಾಭವಾಯಿತು?" ಅನ್ನುವುದು.




ಶುಷ್ಕ ವಕ್ರ ಈ ನಗೆ

ಹಾಸ್ಯದ ಬಗ್ಗೆ ವಿಶ್ಲೇಷಣೆ ಬರೆಯಬೇಕು ಎಂದು ಹಾಸ್ಯ ಬರೆಯುವ ಲೇಖಕರನ್ನಾಗಲೀ ಅಥವಾ ವಿಮರ್ಶಕರನ್ನಾಗಲೀ ಕೇಳುವುದೇ ಒಂದು ವಿಡಂಬನೆಯಲ್ಲವೇ. ಇನ್ನು ಆ ಬಗ್ಗೆ ಗಂಭೀರವಾಗಿ ಬರೆದರೆ ವಿಮರ್ಶಕರ ಮೀಮಾಂಸೆಯಾಗುತ್ತದೆ. ಆದರೆ ಅದನ್ನೇ ಲೇವಡಿ ಮಾಡಿದರೆ ಹೇಳಿದ ಕೆಲಸವನ್ನು ಮಾಡದಂತೆ ಆಗುತ್ತದೆ! ಈ ಇಕ್ಕಟ್ಟಿನಲ್ಲಿ ನನ್ನನ್ನು ಸಿಕ್ಕಿಹಾಕಿ ಎಲ್ಲ ಕುಹಕವನ್ನೂ ತೆರೆಮರೆಯಲ್ಲಿ ನೋಡುತ್ತಿರುವ ವಿಜಯ ಕರ್ನಾಟಕದ ಸಂಪಾದಕ ವೃಂದದ ಖುಷಿಯೇ ರೈ ಹಾಸ್ಯ. ಇದು ಡ್ರ್ರೈ ಹಾಗೂ ರೈ [ಐಶ್ವರ್ಯ, ಪ್ರಕಾಶ್...] ಹಾಸ್ಯಕ್ಕಿಂತ ಭಿನ್ನ.



  

ಮಕ್ಕಳಿಸ್ಕೂಲು ಮನೇಲಲ್ಲ

ಆಂಧ್ರಪ್ರದೇಶ - ರಂಗಾರೆಡ್ಡಿ ಜೆಲ್ಲೆ - ಶಂಕರಪಲ್ಲಿ ಮಂಡಲದ ಪೊದ್ದುಟೂರು ಗ್ರಾಮ ಸರಪಂಚ್ ಕಟಿಕೇ ಶ್ರೀನಿವಾಸ್ ಸಾಮಾನ್ಯ ಗ್ರಾಮೀಣ ರಾಜಕಾರಣಿಯಂತೆ ಕಾಣುವುದಿಲ್ಲ. ಯುವಕನೂ ವಿದ್ಯಾವಂತನೂ ಆಗಿರುವ ಆತ ತನ್ನ ಗ್ರಾಮದ ಬಗ್ಗೆ ಯೋಚಿಸುತ್ತಲೇ ಆ ಗ್ರಾಮದ ನಸೀಬು ವಿಸ್ತಾರವಾದ ಆರ್ಥಿಕ-ರಾಜಕೀಯ-ಸಾಮಾಜಿಕ ಆಗುಹೋಗುಗಳ ಜೊತೆ ಹೇಗೆ ಬೆಸೆದಿದೆ ಎಂದು ನೋಡಬಲ್ಲವ. ಹೀಗಾಗಿ ಆತನ ಜೊತೆ ಮಾತನಾಡುವುದೂ ಒಂದು ಒಳ್ಳೆಯ ಅನುಭವವೇ. ಆತ ಯಾವ ಪಕ್ಷಕ್ಕೆ ಸೇರಿದವ ಅನ್ನುವುದು ಮುಖ್ಯವಲ್ಲ, ಆದರೆ ಸರಪಂಚರಲ್ಲಿ ಇಂಥ ಯೋಚನಾಧೋರಣೆ ಇರುವುದು ನಿಜಕ್ಕೂ ಒಂದು ಉತ್ತಮ ಲಕ್ಷಣ ಅನ್ನಿಸುತ್ತದೆ.

ಆತನ ಸಹಜ ಬುದ್ಧಿವಂತಿಕೆಗೆ ತುಸುವಾದರೂ ಪೂರಕವಾಗಿರಬಹುದಾದ ಕಾರಣ ಆತ ಹಿಂದೆ ಎಂ.ವಿ.ಫೌಂಡೇಶನ್ [ಎಂ.ವಿ.ಎಫ್] ಜೊತೆಗೆ ಒಡನಾಡಿ ಅಲ್ಲಿನ ಗ್ರಾಮಾಂತರ ಶಾಲೆಯಲ್ಲಿ ಸ್ವಯಂ-ಪ್ರೇರಣೆಯಿಂದ ಪಾಠಮಾಡಿದ್ದ. ಎಂ.ವಿ.ಎಫ್ ರಂಗಾರೆಡ್ಡಿ ಜಿಲ್ಲೆಯಲ್ಲಿ ಹಲವಾರು ವರುಷಗಳಿಂದ ಕಷ್ಟ ಎನ್ನಿಸಬಹುದಾದ ಕೆಲಸವನ್ನು ಮಾಡುತ್ತಿದೆ. ಆ ಸಂಸ್ಥೆಯ ಮೂಲೋದ್ದೇಶ ಮಕ್ಕಳಿಗೆ ತಮ್ಮ ಸಹಜವಾದ ಹಕ್ಕುಗಳನ್ನು ಕೊಡಿಸುವುದು. ಹೀಗಾಗಿ ಅವರು ಹೇಳುವ ಮಾತುಗಳು ರಾಜಿಗೆ ಒಗ್ಗದ ಈ ಅಂಶಗಳ ಆಧಾರದಿಂದ ಕೂಡಿದೆ:


  

ಸ್ಲಂಡಾಗ್/ವೈಟ್ ಟೈಗರ್: ಸಂಭ್ರಮದ ನಡುವೆ ನೈತಿಕ ನಿಲುವಿನ ಕೆಲವು ಪ್ರಶ್ನೆಗಳು.

ಸ್ಲಂಡಾಗ್ ಮಿಲಿಯನೇರ್ ಮತ್ತು ಅರವಿಂದ ಅಡಿಗರ ಪುಸ್ತಕಗಳಿಗೆ ಅನಿರೀಕ್ಷಿತವಾದ ಪ್ರಚಾರ ಸಿಕ್ಕು ಎಲ್ಲೆಡೆ ಅದರ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಕೇತವೇ. ಈ ಎರಡೂ ಕೃತಿಗಳು ಜಗತ್ತಿನ ಸದಭಿರುಚಿಯ ಸಂಕೇತವೇ ಅನ್ನುವ ಪ್ರಶ್ನೆಗಳನ್ನು ಎಬ್ಬಿಸಿವೆ. ನಾನು ಈವರೆಗೂ ಮಾತನಾಡಿರುವ ಅನೇಕ ಜನರು ಇಲ್ಲವೇ ಈ ಎರಡೂ ಕೃತಿಗಳನ್ನು ಮೆಚ್ಚಿದ್ದಾರೆ, ಇಲ್ಲವೇ ಎರಡನ್ನೂ ಸಹಿಸಿಲ್ಲ. ಎರಡೂ ಕೃತಿಗಳ ಬಗ್ಗೆ ನನ್ನ ತಕರಾರನ್ನು ಚರ್ಚೆಗೆ ಹಚ್ಚಬೇಕಾದ್ದು ಮುಖ್ಯ. ಯಾಕೆಂದರೆ ಈ ಎರಡೂ ಕೃತಿಗಳು ಹಾಗೂ ಅವುಗಳಿಗೆ ದೊರಕಿರುವ ಮನ್ನಣೆ ನಾವು ಈ ವರ್ಷದಲ್ಲಿ ಸೃಜನಶೀಲತೆಯನ್ನು ಯಾವ ಮಾಪನದಲ್ಲಿ ನೋಡುತ್ತಿದ್ದೇವೆ ಅನ್ನುವ ಪ್ರಶ್ನೆಯನ್ನು ಎಬ್ಬಿಸುತ್ತವೆ.




ಸತ್ಯಂ ತಲ್ಲಣಗಳು

"ನೀವೆಲ್ಲರೂ ನಂಬಿರುವಂತೆ - ಹಾಗೂ ಕಂಪನಿಯ ಲೆಕ್ಕಪತ್ರದನುಸಾರವಾಗಿ ಇರಬೇಕಿದ್ದ ಏಳುಸಾವಿರ ಕೋಟಿ ರೂಪಾಯಿಗಳು ಇಲ್ಲ. ಆದರೆ ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ. ತಪ್ಪಾಯಿತು ಕ್ಷಮಿಸಿ". ಐದು ಪುಟಗಳ ದೊಡ್ಡ ಪತ್ರಬರೆದ ರಾಮಲಿಂಗ ರಾಜು ಹೇಳಿದ್ದರ ಮಜಕೂರು ಇಷ್ಟೇ. ಮಿಕ್ಕ ನಾಲ್ಕಾರು ಪುಟಗಳು ಏನೊಂದನ್ನೂ ವಿವರಿಸಲಾಗದ ಅನವಶ್ಯಕ ವಿವರಗಳು. ಹೀಗೆ ಹಣ ಮಾಯವಾಗುವುದರ ಸುಳಿವು ಯಾರಿಗೂ ಉಂಟಾಗಲಿಲ್ಲ. ಹಿಂದೆ ನಡೆದ ಅನೇಕ ಇಂತಹ ಭ್ರಷ್ಟ ನಡಾವಳಿಯಲ್ಲಿ ಈ ಇಂಥ ಪತನಕ್ಕೆ ಮುನ್ನ ಯಾವುದಾದರೂ ಸುದ್ದಿಯಿದ್ದೇ ಇರುತ್ತಿತ್ತು. ಅದು ಹರ್ಷದ್ ಮೆಹತಾ ಬಿಗ್ ಬುಲ್ ಆಗಿ ಉತ್ತುಂಗಕ್ಕೇರುತ್ತಿದ್ದ ಕಥೆಯೇ ಇರಬಹುದು, ಕೇತನ್ ಪಾರೀಕನ ಕಥೆಯೇ ಇರಬಹುದು, ಅಥವಾ ವಿಪರೀತವಾಗಿ ಬಿಸಿಯೇರಿದ್ದ ಆರ್ಥಿಕ ಸಂಸ್ಥೆಗಳ ಆಕರ್ಷಣೆಯ ಸಿ ಆರ್‍ ಬಿ ಸಂಸ್ಥೆಯಿಂದ ಪ್ರಾರಂಭವಾದ ಎನ್.ಬಿ.ಎಫ್.ಸಿ ಹಗರಣವೇ ಆಗಿರಬಹುದು.. ಇಲ್ಲವೇ ಡಾಟ್.ಕಾಂ ಕಂಪನಿಗಳು ಒಂದರ ನಂತರ ಒಂದು ಪತನಗೊಂಡ ಪರಿಯೇ ಇರಬಹುದು. ಎನ್ರಾನ್ ಸಂಸ್ಥೆ 




ರಾಮ್ ಗುಹಾ ಬರೆದ ಕ್ರಿಕೆಟ್ ರಾಜ್ಯ

ಈ ಬಾರಿ ರಾಮ್ ಗುಹಾ ಜೊತೆಗೆ ಮತಷ್ಟು ಸಮಯ ಕಳೆಯಲಿದ್ದೇನೆ; ನನ್ನ ಬಾಲ್ಯದ ಕ್ರಿಕೆಟ್ಟಿಗೆ ಪಯಣ ಮಾಡಲಿದ್ದೇನೆ. ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ರಾಮ್ ಗುಹಾರ ಕ್ರಿಕೆಟ್ಟಿನ ಬಗೆಗಿನ ಪುಸ್ತಕವೂ ಒಂದು. ರಾಮ್ ಗುಹಾರ ಅನೇಕ ಬರವಣಿಗೆಗಳನ್ನು ನಾನು ಓದಿದ್ದೇನೆ, ಹಾಗೂ ಅವುಗಳನ್ನು ಇಷ್ಟಪಟ್ಟಿದ್ದೇನೆ. ವರಿಯರ್ ಎಲ್ವಿನ್ ಅವರ ಜೀವನ ಚರಿತ್ರೆ ರಾಮ್ ಅವರ ಅದ್ಭುತವಾದ ಸಂಶೋಧನಾ ಪ್ರತಿಭೆಯನ್ನು ತೋರುವ ಪುಸ್ತಕ. ರಾಮ್ ಒಳ್ಳೆಯ ಲೇಖಕರಷ್ಟೇ ಅಲ್ಲ, ಬರೇ ಬರವಣಿಗೆಯ ಆಧಾರದ ಮೇಲೆಯೇ ಜೀವನವನ್ನು ನಡೆಸುತ್ತಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ರಾಮ್ ಅವರ ಬರವಣಿಗೆಯನ್ನು ಶ್ರೇಣೀಕರಿಸುವುದು ಕಷ್ಟದ ಮಾತು.



ಅಹಮದಾಬಾದಿನಲ್ಲಿ ನಡೆ-ನುಡಿ

ಈಗೀಗ ಎಲ್ಲ ನಗರಗಳಲ್ಲೂ ’ಹೆರಿಟೇಜ್ ವಾಕ್’ ಆಯೋಜನೆ ಪ್ರಾರಂಭವಾಗಿದೆ. ನಗರದ ಹಿನ್ನೆಲೆ ಚರಿತ್ರೆ ತಿಳಿಯಲು ಇದೊಂದು ಒಳ್ಳೆಯ ಮಾರ್ಗ. ಅನೇಕ ವರ್ಷಗಳಿಂದ ಅಹಮದಾಬಾದಿನಲ್ಲಿ ಮುನಿಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಹೆರಿಟೇಜ್ ವಾಕ್ ಪ್ರಸಿದ್ಧವಾಗಿದೆ. ಮುಂಜಾನೆ ಏಳೂವರೆಗೆ ಪ್ರಾರಂಭವಾಗುವ ಈ ನಡಿಗೆ ಸುಮಾರು ಎರಡು ಘಂಟೆಕಾಲ, ನಿಧಾನಗತಿಯಲ್ಲಿ ಹಳೆಯ ಕಟ್ಟಡಗಳು, ಮನೆ ಮತ್ತು ಮಂದಿರಗಳನ್ನು ತೋರಿಸುತ್ತದೆ. ನಮ್ಮ ಹಿಂದಿನ ತಲೆಮಾರಿನವರು ತೋರಿದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಅರಿಯಲು ಇದು ಒಂದು ಉತ್ತಮ ವಿಧಾನ.





ಆತಂಕವಾದದ ಕಾಲದಲ್ಲಿ ಐಶಾರಾಮದ ಆತಂಕ

ಈ ಹಿಂದೆ ನಾನು ತಾಜ್ ಬಗ್ಗೆ ಬರೆದಾಗಲೂ ಇಂಥದೊಂದು ಪ್ರತಿಕ್ರಿಯೆ ಬರಬಹುದು ಅನ್ನುವ ಅನುಮಾನವಿತ್ತು. ಸಾಮಾಜಿಕ/ಆರ್ಥಿಕ ಸ್ಥರದಲ್ಲಿ ಭಿನ್ನತೆಯಿರುವ ಸಮಸಮಾಜದ ಉಟೋಪಿಯಾದಲ್ಲಿ ಬದುಕದಿರುವ ನಿಜಜಗತ್ತಿನಲ್ಲಿ ಈ ರೀತಿಯಾದಂತಹ ಪ್ರತಿಕ್ರಿಯೆ ಬರುವುದು ಸಹಜವೂ ಹೌದು, ಸಮಂಜಸವೂ ಹೌದು. ಈ ಮಾತು, ಅದರ ಹಿನ್ನೆಲೆಗೆ, ಪ್ರತಿಕ್ರಿಯೆಯಾಗಿ ನಾನು ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ ಆ ಬಗ್ಗೆ ನನ್ನ ಅನುಮಾನಗಳನ್ನೂ, ಕಾಳಜಿಯನ್ನೂ, ಸಮಜಾಯಿಷಿಯನ್ನೂ, ಅಸಹಾಯಕತೆಯನ್ನೂ, ಅಷಾಢಭೂತಿತನವನ್ನೂ ಪ್ರಾಮಾಣಿಕವಾಗಿ ಮಂಡಿಸಲು ಸಿದ್ಧನಾಗಿದ್ದೇನೆ.

"ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು....

ಮುಂದೆ.....



ಟಂಕಸಾಲೆಯ ಬಿಂಕ

ಮುಂಬಯಿಯಲ್ಲಿ ನೋಡಲು ಅನೇಕ ಜಾಗಗಳಿವೆ. ನಾನು ಈ ಸರಣಿಯಲ್ಲಿ ನನ್ನ ಬರವಣಿಗೆಯನ್ನು ಪ್ರಾರಂಭಿಸಿದ್ದೇ ಜಯಂತ ಕಾಯ್ಕಿಣಿ ಕಾಣಿಸಿದ ಮತ್ತೊಂದು ಮುಂಬಯಿಯ ಬಗ್ಗೆ. ಆದರೆ ಕೆಲವು ವಿಶಿಷ್ಟ ಸಂಸ್ಥೆಗಳೂ ಮುಂಬಿಯಿಯಲ್ಲಿವೆ. ರಿಜರ್ವ್ ಬ್ಯಾಂಕು ನಡೆಸುವ ಮಾನೆಟರಿ ಮ್ಯೂಸಿಯಂ ಅಂಥ ಒಂದು ಆಸಕ್ತಿಕರ ಸಂಸ್ಥೆಗಳಲ್ಲಿ ಒಂದು. ಬಹುಮಹಡಿಯ ರಿಜರ್ವ್ ಬ್ಯಾಂಕಿನ ಕಟ್ಟಡದ ಎದುರಿನ ಗಲ್ಲಿಯಲ್ಲಿ ಹೋಗಿ ಬಲಕ್ಕೆ ತಿರುಗಿದರೆ, ಫಿರೋಜ್ ಷಾ ಮೆಹತಾ ಮಾರ್ಗದಲ್ಲಿ ಅಮರ್ ಬಿಲ್ಡಿಂಗ್ ಎನ್ನುವ ಪುಟ್ಟ ಜಾಗದಲ್ಲಿ ದುಡ್ಡಿನ ಚರಿತ್ರೆಯನ್ನು ಕಾಣಿಸುವ ಮಾನಿಟರಿ ಮ್ಯೂಸಿಯಂ ಇದೆ. ಪುಟ್ಟಜಾಗವಾದರೂ ಇದು ತುಂಬಾ ಆಸಕ್ತಿಕರವಾದ ಜಾಗ. ಅಲ್ಲಿ ತಿಳಿದ ಕೆಲವು ಆಸಕ್ತಿಯ ವಿಷಯಗಳು





ಗೋಡೆ ಗಡಿಯಾರ - ಕೈಗಡಿಯಾರ

ರಾಜಾಸ್ಥಾನದ ಡುಂಗರ್‍-ಪುರದಲ್ಲಿ ನಮ್ಮ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಶಾಶ್ವತೀ ಒಂದು ದಿನ ಬಂದು ಒಂದು ವಿಚಿತ್ರವಾದ ಮಾತನ್ನು ಹೇಳಿದಳು. ಈ ಮಾತು ಮಾಹಿತಿಯನ್ನಾಧರಿಸಿದ್ದಲ್ಲ, ಬದಲಿಗೆ ತಾನು ಗಮನಿಸಿದ್ದ ವಿಷಯವೆಂದೂ ಹೇಳಿದಳು. ನಾವುಗಳು ಮಾಹಿತಿ ಸಂಗ್ರಹಿಸುತ್ತಿದ್ದದ್ದು ಬಡ ಕುಟುಂಬಗಳು ತಮ್ಮ ಆರ್ಥಿಕ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಹಾಗೂ ಎಲ್ಲೆಲ್ಲಿಂದ ಸಾಲ ಪಡೆಯುತ್ತಾರೆ ಅನ್ನುವ ವಿಷಯದ್ದಾಗಿತ್ತು. ಮಾಹಿತಿ ಸಂಗ್ರಹಿಸುವುದು ಒಂದು ಕೆಲಸವಾದರೆ ಆ ಮಾಹಿತಿಯನ್ನು ಅರ್ಥೈಸಲು ಕೆಲ ಒಳನೋಟಗಳೂ ಅವಶ್ಯಕವಾಗುತ್ತವೆ. ಹೀಗಾಗಿ ಶಾಶ್ವತೀ ಹೇಳಿದ್ದ ಮಾತಿಗೆ ನಾನು ಮಹತ್ವ ನೀಡುವ ಅಗತ್ಯವಿತ್ತು.




ರಾಮ್ ಗುಹಾಗೆ ಪದ್ಮಭೂಷಣ

ಬರಹಗಾರ ರಾಮಚಂದ್ರ ಗುಹಾಗೆ ಪದ್ಮಭೂಷಣ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಪದ್ಮ ಅವಾರ್ಡುಗಳ ಪಟ್ಟಿ ಸಾಮಾನ್ಯವಾಗಿ ನೂರಕ್ಕೂ ಹೆಚ್ಚಿನ ಸಂಖ್ಯೆಯದ್ದಾಗಿರುತ್ತದಾದ್ದರಿಂದ ಪತ್ರಿಕೆಗಳು ವಿಭೂಷಣ/ಭೂಷಣ ಪ್ರಸಸ್ತಿಗಳ ಪಟ್ಟಿಯನ್ನು ಕೊಟ್ಟು, ಪದ್ಮಶ್ರೀ ಪ್ರಸಸ್ತಿಗಳನ್ನು ಪಡೆದವರ ಪ್ರಮಖರ ಹೆಸರನ್ನು ಮಾತ್ರ ಹಾಕಿಡುತ್ತವೆ. ಹೀಗಾಗಿ ಗುಜರಾತಿನಲ್ಲಿರುವ ನನ್ನಂತಹವರು ಕರ್ನಾಟಕದ ಮತ್ತೂರು ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಬಂದಿದೆಯೆನ್ನುವುದನ್ನು ತಿಳಿಯಲು ಅಂತರ್ಜಾಲಕ್ಕೆ ಹೋಗಿ ಸರಕಾರದ ಪಟ್ಟಿಯನ್ನು ಪರಿಶೀಲಿಸಬೇಕಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಇಂತಿಥಹ ಸೇವೆ, ಇಂತಿಥಹ ರಾಜ್ಯಕ್ಕೆ ಸೇರಿದವರಿಗೆ ಕೊಡುತ್ತಾರೆನ್ನುವುದು ಪಟ್ಟಿಯನ್ನು ನೋಡಿದಾಗ ವೇದ್ಯವಾಗುತ್ತದೆ. ಉದಾಹರಣೆಗೆ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದಿರುವ ಮ್ಯಾನೇಜ್‌ಮೆಂಟ್ ಚಿಂತಕ ಸಿ.ಕೆ.ಪ್ರಹ್ಲಾದ್‌ಅವರ ಹೆಸರಿನ ಮುಂದೆ ಸೇವೆ: ವಿದ್ಯಾರಂಗವೆಂದೂ ರಾಜ್ಯ: "ಎನ್.ಆರ್.ಐ/ಪಿ.ಐ.ಓ" ಎಂದೂ ಬರೆಯಲಾಗಿದೆ. ರಾಮ್ ಗುಹಾರ ಹೆಸರಿನ ಮುಂದೆ ಸಾಹಿತ್ಯ ಎಂದು ಬರೆಯಲಾಗಿದೆ. ಚರಿತ್ರೆಗಾಗಿ ಇತರರಿಗೆ ಪ್ರಶಸ್ತಿ ಬಂದಿದ್ದರೂ ಚರಿತ್ರಕಾರ ರಾಮ್‌ಗೆ ಸಾಹಿತ್ಯಕ್ಕೆ ಬಂದಿದೆ. ಇದರಿಂದ ದುಃಖವೇನೂ ಇಲ್ಲ, ಬಹುಶಃ ಅವರ ಒಟ್ಟಾರೆ ಬರವಣಿಗೆಯ ಸೃಜನಶೀಲತೆಯನ್ನು ನೋಡಿ ಅವರಿಗೆ "ಸಾಹಿತ್ಯ"ದ ಪದ್ಮಭೂಷಣ ಕೊಟ್ಟಿರಬಹುದು.




ನನಗೂ ಕೇಸ್ಲಾಗೂ ಅಂಟಿದ ನಂಟು

ಪಾಠ-ಪ್ರವಚನ ಮಾಡುವ ನನ್ನಂತಹವರಿಗೆ ಎಲ್ಲೆಲ್ಲಿ ಪಾಠ ಮಾಡಲು ಅವಕಾಶ ಸಿಗುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಪ್ರವಚನಕಾರರಂತೆಯೇ ಪಾಠಮಾಡುವವರೂ ಸಹ ಒಂದು ಗುಂಪಿನ ಕೇಳುಗರು ಸಿಕ್ಕಿದರೆ ಸಾಕು ತಮ್ಮ ಪುಂಗಿಯೂದುವುದಕ್ಕೆ ಪ್ರಾರಂಭಿಸುತ್ತಾರೇನೋ! ಆದರೆ ಸಾಮಾನ್ಯವಾಗಿ ಕ್ಯಾಂಪಸ್ ಬಿಟ್ಟು ಹೊರಗೆ ಹೋಗಿ ಪಾಠ ಮಾಡುವಾಗ ಒಂದು ಟೀಂ ಅಂತ ಇರುತ್ತದೆ. ಇಬ್ಬರಾದರೂ ಇರುವುದರಿಂದ ನಮಗೆ ಒಂದು ಥರದ ಕಂಪನಿ ಇರುತ್ತದೆ. ಆದರೆ ಒಮ್ಮೊಮ್ಮೆ ಅದೂ ಸಾಧ್ಯವಾಗುವುದಿಲ್ಲ. ಸ್ವಯಂ ಸೇವಾ ಸಂಸ್ಥೆಗಳವರು ಯಾರಾದರೂ ಹೀಗೆ ತರಬೇತಿ ಕಾರ್ಯಕ್ರಮನನ್ನು ಮಾಡಿ ಎಂದು ಕೇಳಿದಾಗಲೇ ಹೆಚ್ಚಿನ ಪೀಕಲಾಟಕ್ಕೆ ಬರುವುದು. ಯಾಕೆಂದರೆ ಅಂಥ ಸಂಸ್ಥೆಗಳಿಗೆ ಹೋಗುವಾಗ ಈ ಟೀಂ ಕೈಕೊಡುತ್ತದೆ. ಅವರು ಕೊಡುವ ಹಣ ಹೆಚ್ಚಲ್ಲವಾದ್ದರಿಂದ ನನ್ನ ಸಹಚರರಿಗೆ ಆಸಕ್ತಿ ಕಡಿಮೆಯೂ ಆಗಬಹುದು. ಜೊತೆಗೆ ಸ್ವಯಂ ಸೇವಾ ಸಂಸ್ಥೆಗಳವರ ಟ್ರೈನಿಂಗ್ ವಿಭಾಗಗಳು ದೂರದ ಜಾಗಗಳಲ್ಲಿರುತ್ತವೆ. ಅಥವಾ ನಗರದಲ್ಲಿದ್ದರೂ ಅಲ್ಲಿ ನಮಗೆ ಬೇಕಾದ ಪರಿಕರಗಳೆಲ್ಲವೂ ಸುಲಭವಾಗಿ ಸಿಗುವುದಿಲ್ಲ. ಒಂದು ಥರದಲ್ಲಿ ಈಡನ್ ಗಾರ್ಡನ್, ಚಿನ್ನಸ್ವಾಮಿ ಸ್ಟೇಡಿಯಂನಂತಹ ಜಾಗದಲ್ಲಿ ಅಂತರರಾಷ್ಟ್ರೀಯ ಮ್ಯಾಚುಗಳನ್ನು ಆಡಿದವರನ್ನು ಕಾಲೇಜಿನ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಕೇಳಿದಂತೆ. ಒಂದೆರಡು ಬಾರಿ ತಮಾಷೆಗೆಂದು ಆ ಆಟ ಚೆನ್ನಾಗಿರುತ್ತದಾದರೂ ಇದನ್ನು ಇಡೀ ಟೀಮು ಆಡುವುದನ್ನು ಊಹಿಸುವುದು ಕಷ್ಟ. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳು ಈ ರೀತಿಯ ತರಬೇತಿಯ ಕೋರಿಕೆಯನ್ನು ನಮ್ಮ ಮುಂದಿಟ್ಟಾಗ ಮಾಡಬೇಕೆನ್ನಿಸಿದರೂ, ಅದನ್ನು ಕಾರ್ಯರೂಪಗೊಳಿಸುವುದು ಸ್ವಲ್ಪ ಕಷ್ಟವೇ.





ಶಾಂತಾರಾಮ್-ಆತಂಕರಾಮ್

ಕಳೆದೆರಡು ವರುಷಗಳಿಂದ ನನ್ನ ಮುಂಬಯಿ ಯಾತ್ರೆಗಳು ಸುಮಾರು ತಿಂಗಳಿಗೊಮ್ಮೆ ಆಗುತ್ತಿದೆ. ಅಲ್ಲಿರುವ ಸಂಸ್ಥೆಯೊಂದರ ಬೋರ್ಡಿಗೆ ನನ್ನನ್ನು ಸೇರಿಸಿಕೊಂಡಿರುವುದರಿಂದ ಮೀಟಿಂಗಿಗಾಗಿ ಆಗಾಗ ಹೋಗಬೇಕಾಗುತ್ತದೆ. ಮೀಟಿಂಗು ಸಂಸ್ಥೆಯ ೧೬ನೇ ಮಹಡಿಯ ಆಫೀಸಿನಲ್ಲಾಗುತ್ತದಾದರೂ ಉಳಿದುಕೊಳ್ಳುವುದಕ್ಕೆ ಏರ್ಪಾಟು ಮುಖ್ಯತಃ ತಾಜ್ ಹೋಟೇಲಿನಲ್ಲಿ ಮಾಡುತ್ತಿದ್ದರು. ಮೊದಲಿಗೆ ಪಂಚತಾರಾ ಹೋಟೇಲಿನಲ್ಲಾಗುವ ಎಲ್ಲ ಮುಜುಗರಗಳಿಗೂ ನಾನು ಒಳಗಾಗಿದ್ದೆನಾದರೂ, ಬರಬರುತ್ತಾ ಆ ಜಾಗ ನನಗೆ ಅಭ್ಯಾಸವಾಗಹತ್ತಿತ್ತು. ಹೀಗಾಗಿಯೇ ಎರಡು ತಿಂಗಳುಗಳ ಹಿಂದೆ ಆ ಹೊಟೇಲಿನಲ್ಲಿ ಹೆಚ್ಚು ಉಳಿದದ್ದರ ಪ್ರತೀಕವಾಗಿ ಅವರು ನನಗೆ ಗೋಲ್ಡ್ ಕಾರ್ಡ್ ಒಂದನ್ನು ಕೊಟ್ಟಿದ್ದನ್ನು ಜೋಪಾನವಾಗಿ ಉಳಿಸಿಕೊಂಡಿದ್ದೆ.





ಕೋವಲಂನ ಮಣ್ಣು; ಪದ್ಮನಾಭಸ್ವಾಮಿ ಗುಡಿ

ಊರೂರು ಅಲೆಯುವಾಗ ಎರಡು ಭಿನ್ನ ರೀತಿಯ ಯಾತ್ರೆಗಳು ಸಾಧ್ಯವಾಗುತ್ತದೆ. ಒಂದು, ಕೆಲಸದ ಮೇಲೆ ಹೋಗುವುದು. ಹಾಗೆ ಹೋದಾಗ ಕಾಣುವುದು ಏರ್‌ಪೋರ್ಟು, ರೈಲು ನಿಲ್ದಾಣ, ಬಸ್ಸು, ಕಾರು, ಹೋಟೇಲಿನ ರೂಮು, ಪವರ್ ಪಾಯಿಂಟ್, ಮತ್ತು ಎಣ್ಣೆಭರಿತ ಊಟ. ಇದಿಲ್ಲವೆಂದರೆ ನಮ್ಮದೇ ರಜೆಗೆ ಹೋಗುವುದು. ಆಗ ಯಾತ್ರೆಯ ಸ್ವರೂಪವೇ ಬೇರು. ಹಿಂದಿನ ದಿನವೇ ಹೋಗೆ ಬೇಕರಿಯಿಂದ ಯಾತ್ರೆಗೆ ಬೇಕಾದ ಜ್ಯೂಸಿನ ಡಬ್ಬ, ಕುರುಕಲು, ಡಿಜಿಟಲ್ ಕ್ಯಾಮರಾ ಬರುವುದಕ್ಕೆ ಮುನ್ನ ಕೊಂಡು ತರುತ್ತಿದ್ದ ಕ್ಯಾಮರಾದ ಫಿಲಂ. ಹಾದೂ ಇಂಥ ರಜೆಗೆಂದೇ ವಿಶೇಷ ಪೋಷಾಕುಗಳು - ಬಹುಶಃ ಎಂದೂ ಧರಿಸದ ಚೆಡ್ಡಿ, ಟೀ ಷರ್ಟುಗಳು, ಟೋಪಿ ಮತ್ತು ಕಣ್ಣಿಗೆ ಬಣ್ಣದ ಕನ್ನಡಕ. ಕೆಲಸದ ಮೇಲಿನ ಯಾತ್ರೆಗಳಲ್ಲಿ ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ. ರಜೆಯಲ್ಲಿ ನಾವೇ ಧಣಿಗಳು.



ಅರವಿಂದ ಅಡಿಗರ ಬಿಳಿಹುಲಿ

ಸಾಮಾನ್ಯವಾಗಿ ಹೊಸ ಲೇಖಕನ ಪ್ರಥಮ ಪುಸ್ತಕಕ್ಕೆ ದೊರೆಯುವುದಕ್ಕಿಂತ ಹೆಚ್ಚಿನ ಪ್ರಚಾರ ಈ ಪುಸ್ತಕಕ್ಕೆ ದೊರೆತಿರಬಹುದೇನೋ. ಈ ಪುಸ್ತಕ ಬಿಡುಗಡೆಯಾದ ಕೆಲದಿನಗಳಲ್ಲೇ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಅನೇಕ ಟಿವಿ ವಾಹಿನಿಗಳಲ್ಲಿ ಈ ಪುಸ್ತಕದ ಜಾಹಿರಾತೂ ಕಂಡಿತ್ತು. ನನ್ನ ಅರಿವಿನಲ್ಲಿ ಸಣ್ಣ ಪರದೆಯ ಮೇಲೆ ಮೊದಲಬಾರಿಗೆ ಕಾರ್ಯಕ್ರಮಗಳನ್ನು ಒಂದು ಸಾಹಿತ್ಯ ಕೃತಿ ಪ್ರಾಯೋಜಿಸುತ್ತಿತ್ತು. ಇದೆಲ್ಲವೂ ಒಂದು ಹೊಸತನದಿಂದ ಕೂಡಿದ್ದು. ಸಾಹಿತ್ಯದ ಒಂದು ಕೊನೆಯಲ್ಲಿ ಚೇತನ್ ಭಗತ್‍ರ ಪುಸ್ತಕಗಳು ವಿಚಿತ್ರ ದಾಖಲೆಗಳನ್ನು ಸ್ಥಾಪಿಸುತ್ತಾ, ಬೆಳೆಯುತ್ತಾ ಹೋದಂತೆಯೇ ಈಗ ಜಾಹೀರಾತಿನ ಬಲವನ್ನೂ ಉಪಯೋಗಿಸಿ ಮಾರಾಟಮಾಡುತ್ತಿರುವ ’ಸಾಹಿತ್ಯ ಕೃತಿ’ಯಿಂದಾಗಿ ಭಾರತೀಯ ಆಂಗ್ಲ ಬರವಣಿಗೆಯ ಮಾರುಕಟ್ಟೆ ಮತ್ತೊಂದು ಘಟ್ಟವನ್ನೇ ತಲುಪಿದೆ ಅನ್ನಿಸುತ್ತದೆ. ಭಾರತೀಯ ಸಂಜಾತ ಹಿಂದಿನ ವಿಜೇತರನ್ನು ನೋಡಿದರೆ ಯಾರಿಗೂ ಈ ರೀತಿಯ ಓಪನಿಂಗ್ ದೊರೆತಿರಲಿಲ್ಲವೇನೋ. ಅರುಂಧತಿ ರಾಯ್‍ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ನಿರಾಕರಿಸಿತ್ತು. ಅದರಲ್ಲಿನ ತಿರುಳನ್ನು ನೋಡಿದ ತರುಣ್ ತೇಜ್‍ಪಾಲ್ ಆ ಸಂಸ್ಥೆಯಿಂದ ಹೊರಬಿದ್ದು ಇಂಡಿಯಾ ಇಂಕ್ ಅನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆಕೆಯ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟಿಸಿದ್ದರು. ಕಿರಣ್ ದೇಸಾಯಿ ಅವರ ಪುಸ್ತಕವನ್ನು ಪ್ರಕಟಿಸಲು [ಅದು ಅವರ ಎರಡನೆಯ ಪುಸ್ತಕವಾಗಿದ್ದು, ಆಕೆ ಅನಿತಾ ದೇಸಾಯಿಯವರ ಮಗಳಾಗಿದ್ದರೂ ಸಹ] ಅವರಿಗೆ ಪೀಕಲಾಟವಾಗಿತ್ತು ಅನ್ನುವ ಮಾತನ್ನು ಆಕೆಗೆ ಬುಕರ್ ಬಂದಾಗ ಕೇಳಿದ್ದೆವು. ಅರವಿಂದ ಅಡಿಗರ ಪುಸ್ತಕಕ್ಕೆ ಇಂಥಹ ತೊಂದರೆ ಉಂಟಾಗಲಿಲ್ಲ. ಅರುಂಧತಿಯನ್ನು ಇಲ್ಲವೆಂದ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅಡಿಗರನ್ನು ಪ್ರಕಟಿಸಿದ್ದಲ್ಲದೇ ಸಾಕಷ್ಟು ಪ್ರಚಾರವನ್ನೂ ನೀಡಿತು.



ಕಂದೀಲಿನ ಮೇಲೆ ಧೂಳು!

ಗುಜರಾತ್ ಸರಕಾರ ವಿಕಾಸದ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ರಾಜ್ಯದ ಆಚೆ ಹೆಚ್ಚಾಗಿ ನಡೆಯುವುದಿಲ್ಲ. ಗುಜರಾತಿನ ಬಗ್ಗೆ ಹೊರಗೆ ಚರ್ಚೆ ನಡೆಯುವಾಗ ಎರಡು ಮುಖ್ಯ ವಿಚಾರಗಳು ಚರ್ಚಿತಗೊಳ್ಳುತ್ತವೆ. ಮೊದಲನೆಯ ಮತ್ತು ಅತಿ ಮುಖ್ಯ ವಿಷಯ ಗೋಧ್ರಾ ಮತ್ತು ತದನಂತರದ ಹತ್ಯಾಕಾಂಡ. ಆ ಬಗ್ಗೆ, ಅದರಲ್ಲಿ ಸರಕಾರದ ಪಾತ್ರದ ಬಗ್ಗೆ, ಪೋಲೀಸರ ಪಾತ್ರದ ಬಗ್ಗೆ ಎಷ್ಟೋ ಚರ್ಚೆ ನಡೆದಿದೆ. ಅದೇ ಸಮಯಕ್ಕೆ ಗುಜರಾತಿನಲ್ಲಿನ ವಿಕಾಸದ ಬಗೆಗಿನ ವಿಚಾರಗಳು ಹೊರಕ್ಕೆ ಬರುವುದೇ ಇಲ್ಲ. ಇಲ್ಲಿ ಜನ ಸುಖವಾಗಿದ್ದಾರೆಯೇ? ಒಂದು ಕೋಮಿನವರು ಭಯಭೀತಿಯಿಂದ ಜೀವಿಸುತ್ತಿದ್ದಾರೆಯೇ? ಇಲ್ಲಿ ರಾಕ್ಷಸತ್ವ ಕಾಣಿಸುತ್ತದೆಯೇ? ಈ ಎಲ್ಲಕ್ಕೂ ಸರಳವಾದ ಉತ್ತರಗಳನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಗುಜರಾತಿನ ವಿಷಯಕ್ಕೆ ಬಂದಾಗ ಚರ್ಚೆಗೊಳಗಾಗುವ ಮತ್ತೊಂದು ವಿಚಾರ ನರ್ಮದಾ, ಅಣೆಕಟ್ಟು, ನೀರು, ಮೇಧಾ ಮತ್ತು ಅದಕ್ಕೆ ಸಂಬಂಧಿಸಿದ ವಿವಾದದ್ದು.



ಕೈಮಗ್ಗದ ಬಿಕ್ಕಟ್ಟು

ಕರೀಂನಗರ ಜಿಲ್ಲೆಯ ಕೊತ್ತಪಲ್ಲಿ ಕೈಮಗ್ಗ ಸಹಕಾರ ಮಂಡಲಿಯ ಅಧ್ಯಕ್ಷರಾದ ಕಮಟಂ ರಾಜೇಶಂ ಮೆಲುದನಿಯಲ್ಲಿ ತಮ್ಮ ಮಂಡಳಿಯ ಕೆಲಸಕಾರ್ಯಗಳನ್ನು ವಿವರಿಸುತ್ತಾ ಹೇಳುತ್ತಾರೆ: "ನಾಲ್ಕಾರು ವರ್ಷಗಳ ಕೆಳಗೆ ನಾವು ೯೫ ಲಕ್ಷ ರೂಪಾಯಿಯ ವ್ಯಾಪಾರ ಮಾಡಿದ್ದೆವು. ಈ ವರ್ಷ ಅದು ೭೦ ಲಕ್ಷಗಳಿಗೆ ನಿಲ್ಲಲಿದೆ. ಹಾಗೂ ಆ ಸ್ಥರದಲ್ಲೇ ನಮ್ಮ ವ್ಯಾಪಾರ ಸ್ಥಗಿತಗೊಳ್ಳುತ್ತದೆ ಅನ್ನಿಸುತ್ತದೆ."