ರಾಮ್ ಗುಹಾಗೆ ಪದ್ಮಭೂಷಣ

ಬರಹಗಾರ ರಾಮಚಂದ್ರ ಗುಹಾಗೆ ಪದ್ಮಭೂಷಣ ಪ್ರಶಸ್ತಿಯನ್ನು ಇಂದು ಘೋಷಿಸಲಾಗಿದೆ. ಪದ್ಮ ಅವಾರ್ಡುಗಳ ಪಟ್ಟಿ ಸಾಮಾನ್ಯವಾಗಿ ನೂರಕ್ಕೂ ಹೆಚ್ಚಿನ ಸಂಖ್ಯೆಯದ್ದಾಗಿರುತ್ತದಾದ್ದರಿಂದ ಪತ್ರಿಕೆಗಳು ವಿಭೂಷಣ/ಭೂಷಣ ಪ್ರಸಸ್ತಿಗಳ ಪಟ್ಟಿಯನ್ನು ಕೊಟ್ಟು, ಪದ್ಮಶ್ರೀ ಪ್ರಸಸ್ತಿಗಳನ್ನು ಪಡೆದವರ ಪ್ರಮಖರ ಹೆಸರನ್ನು ಮಾತ್ರ ಹಾಕಿಡುತ್ತವೆ. ಹೀಗಾಗಿ ಗುಜರಾತಿನಲ್ಲಿರುವ ನನ್ನಂತಹವರು ಕರ್ನಾಟಕದ ಮತ್ತೂರು ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಬಂದಿದೆಯೆನ್ನುವುದನ್ನು ತಿಳಿಯಲು ಅಂತರ್ಜಾಲಕ್ಕೆ ಹೋಗಿ ಸರಕಾರದ ಪಟ್ಟಿಯನ್ನು ಪರಿಶೀಲಿಸಬೇಕಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ಇಂತಿಥಹ ಸೇವೆ, ಇಂತಿಥಹ ರಾಜ್ಯಕ್ಕೆ ಸೇರಿದವರಿಗೆ ಕೊಡುತ್ತಾರೆನ್ನುವುದು ಪಟ್ಟಿಯನ್ನು ನೋಡಿದಾಗ ವೇದ್ಯವಾಗುತ್ತದೆ. ಉದಾಹರಣೆಗೆ ಈ ಬಾರಿಯ ಪದ್ಮ ಪ್ರಶಸ್ತಿ ಪಡೆದಿರುವ ಮ್ಯಾನೇಜ್‌ಮೆಂಟ್ ಚಿಂತಕ ಸಿ.ಕೆ.ಪ್ರಹ್ಲಾದ್‌ಅವರ ಹೆಸರಿನ ಮುಂದೆ ಸೇವೆ: ವಿದ್ಯಾರಂಗವೆಂದೂ ರಾಜ್ಯ: "ಎನ್.ಆರ್.ಐ/ಪಿ.ಐ.ಓ" ಎಂದೂ ಬರೆಯಲಾಗಿದೆ. ರಾಮ್ ಗುಹಾರ ಹೆಸರಿನ ಮುಂದೆ ಸಾಹಿತ್ಯ ಎಂದು ಬರೆಯಲಾಗಿದೆ. ಚರಿತ್ರೆಗಾಗಿ ಇತರರಿಗೆ ಪ್ರಶಸ್ತಿ ಬಂದಿದ್ದರೂ ಚರಿತ್ರಕಾರ ರಾಮ್‌ಗೆ ಸಾಹಿತ್ಯಕ್ಕೆ ಬಂದಿದೆ. ಇದರಿಂದ ದುಃಖವೇನೂ ಇಲ್ಲ, ಬಹುಶಃ ಅವರ ಒಟ್ಟಾರೆ ಬರವಣಿಗೆಯ ಸೃಜನಶೀಲತೆಯನ್ನು ನೋಡಿ ಅವರಿಗೆ "ಸಾಹಿತ್ಯ"ದ ಪದ್ಮಭೂಷಣ ಕೊಟ್ಟಿರಬಹುದು.




No comments: