ಬ್ರಸಲ್ಸ್ ನಲ್ಲಿ ಭಾರತ!


ಲಕ್ಸಂಬರ್ಗ್‌ನಿಂದ ಬ್ರಸಲ್ಸ್ ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿ‌ಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ. ಎಲ್ಲಿಂದಲಾದರೂ ಒಂದು ಸಂಬಂಧವನ್ನು ನಾವು ಹೆಕ್ಕಿ ತೆಗೆಯುವುದರಲ್ಲಿ ನಿಷ್ಣಾತರು. ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರೇ ನಾವಲ್ಲವೇ? ಈಚೆಗೆ ಚಿದಾನಂದ ರಾಜಘಟ್ಟ ನೊಬೆಲ್ ಪುರಸ್ಕೃತರ ಬಗ್ಗೆ ಬರೆಯುತ್ತಾ, ಯಾರನ್ನೆಲ್ಲಾ ಭಾರತೀಯರೆಂದು ಹೇಳಿಕೊಂಡು ನಾವು ವಿನಾಕಾರಣ ಹೆಮ್ಮೆ ಪಡಬಹುದು ಎಂದು ಬರೆದಿದ್ದರು. ಅದರಲ್ಲಿ ನೈಪಾಲರ ಹೆಸರನ್ನೂ ಅವರು ಸೇರಿಸಿದ್ದರು. ನೈಪಾಲರು ಎಷ್ಟು ಭಾರತೀಯರೋ, ರಾಯ್ ಕೂಡಾ ಅಷ್ಟೇ ಭಾರತೀಯ. ಹೀಗಾಗಿ ದೇಶದ ಹೆಸರಿನಲ್ಲಿ ಅವನ ಕಾರಿನಲ್ಲಿ ಹೇರಿಕೊಳ್ಳುವುದು ನನ್ನ ಜನ್ಮದ ಹಕ್ಕಾಗಿತ್ತು. ಭಾಷೆಯ ಪರಿಜ್ಞಾನವಿಲ್ಲದ ಜಾಗದಲ್ಲಿ ಎರಡು ಭಾರೀ ಸೂಟ್‌ಕೇಸುಗಳನ್ನು ಹೇರಿಕೊಂಡು, ಟ್ಯಾಕ್ಸಿ ಹಿಡಿದು, ಗಂಟೆಗೊಮ್ಮೆ ಬ್ರಸಲ್ಸ್ ಗೆ ಹೋಗುವ ರೈಲನ್ನು ಹತ್ತಿ ಅದರಲ್ಲಿ ಪ್ರಯಾಣ ಮಾಡುವುದಕ್ಕಿಂತ, ಭಾರತೀಯನೆಂದು ಹೇಳಿಕೊಂಡು ಹೇರಿಕೊಂಡು ಹೋಗುವುದೇ ಉತ್ತಮ ಎನ್ನಿಸಿತ್ತು. ಮೇಲಾಗಿ ಈ ಮೂಲಕ ೨೮ ಯೂರೋಗಳನ್ನೂ ಉಳಿಸಿ ಅದರಲ್ಲಿ ಮನೆಗೆ ಬೆಲ್ಜಿಯನ್ ಚಾಕೊಲೇಟುಗಳನ್ನೂ ತರಬಹುದಿತ್ತು!

ಮುಂದೆ...



No comments: