ಬಿಸಿಲಿನ ನೆರಳನ್ನರಸಿ ಹೊರಟ ಮೂರ್ತಿ - ಅವರನ್ನರಸಿ ಹೊರಟ ಉಮಾ

ಇದು ಮತ್ತೊಂದು ಜೀವನಚರಿತ್ರೆ. ಭಾರತೀಯರ ಜೀವನಚರಿತ್ರೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ನಾವು ಶ್ರೀಗಣೇಶ ವಂದನೆಯಂತೆ ರಾಮ್ ಗುಹಾರನ್ನು ಕರೆತರುವುದು ಸಮರ್ಪಕವೆನ್ನಿಸುತ್ತದೆ. ಸುಬ್ಬುಲಕ್ಷ್ಮಿ ಮತ್ತೆ ಮನ್ಸೂರರ ಜೀವನಚರಿತ್ರೆಯ ಪುಸ್ತಕಗಳನ್ನು ಚರ್ಚಿಸುತ್ತಾ ನಾನು ಗುಹಾರ ವಾದವನ್ನು ಪ್ರಸ್ತಾಪಿಸಿದ್ದೆ

ಮುಂದೆ.....



4 comments:

Anonymous said...

ಶ್ರೀರಾಮ್,

"ಮೇಲಾಗಿ ತಮ್ಮ ಶಿಷ್ಯ ಗೋವಿಂದ್ ನಿಹಲಾನಿಯ ನಿರ್ದೇಶನದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಕೂಡಾ ಅವರಗೆ ಒದಗಿ ಬಂದಿತ್ತು" ಎಂದು ನೀವು ಹೇಳುವುದು 'ಅದೊಂದು ಅಸಹಾಯಕ ಸ್ಥಿತಿ' ಎಂಬ ಅರ್ಥ ಕೊಡುತ್ತದೆ. ನನಗೆ ತಿಳಿದಂತೆ ಗೋವಿಂದ್ 'ತಮಸ್' ಚಿತ್ರ ಮಾಡುವಾಗ ಮೂರ್ತಿಯವರೇ ಅದರ ಛಾಯಾಗ್ರಾಹಕರಾಗಬೇಕೆಂಬುದು ಅವರ ಇಚ್ಛೆಯಾಗಿತ್ತು. ಅದಕ್ಕಾಗಿ ಪ್ರೀತಿ ಗೌರವಗಳಿಂದ ಅವರನ್ನು ಒಪ್ಪಿಸಿದ್ದಾಗಿ ಗೋವಿಂದ್ ಹೇಳಿಕೊಂಡಿದ್ದಾರೆ.

- ಪ್ರಶಾಂತ್

ಎಂ.ಎಸ್.ಶ್ರೀರಾಮ್ said...

ಪ್ರಶಾಂತ್: ನನ್ನ ಅಭಿಪ್ರಾಯ ಅಸಹಾಯಕತೆಯ ಸ್ಥಿತಿಯದ್ದಲ್ಲ, ಗುರುಶಿಷ್ಯ ಪರಂಪರೆಯ ಒಂದು ಹೊಳಹು ಉಮಾ ಅವರ ಬರವಣಿಗೆಯಲ್ಲಿ ಕಾಣಿಸುತ್ತದೆ. ಹೀಗಾಗಿ ಆ ಪರಂಪರೆಯಲ್ಲಿ ಈ ಸಂಬಂಧವನ್ನು ಇಬ್ಬರೂ ಅತ್ಯಂತ ಮೆಚ್ಯೂರ್ ಆಗಿಯೇ ಸಂಭಾಳಿಸಿರುತ್ತಾರೆ. ಇಲ್ಲವಾದರೆ ಮೋರ್ತಿ ತಮಸ್‍ನಲ್ಲಿ ಕೆಲಸ ಮಾಡುತ್ತಲೂ ಇರಲಿಲ್ಲ ನಿಹಾಲಾನಿ ಕೇಳುತ್ತಲೂ ಇರಲಿಲ್ಲ. ಆದರೆ ಒಂದು ಗುರು-ಶಿಷ್ಯ ಸಂಬಂಧ ಗೆಳೆಯ-ಸಮಾನ ಸಂಬಂಧ ಆಗುವ ಪ್ರಕ್ರಿಯೆ ಇಬ್ಬರ ಬೆಳವಣಿಗೆಯ ಚಿನ್ಹೆ.ಇದನ್ನು ಗ್ರಹಿಸುವ ಅವಕಾಶವನ್ನು ಉಮಾ ಕಳೆದುಕೊಂಡರೇನೋ ಎಂಬ ಕಳಕಳಿಯಷ್ಟೇ...

ರಾಘವೇಂದ್ರ - ನಿಮ್ಮ ಮಾತನ್ನು ಒಪ್ಪುತ್ತೇನೆ. ಆದ್ದರಿಂದ ಜೀವನಚರಿತ್ರೆಗಳನ್ನು ಎಲ್ಲರೂ ಬರೆಯಬೇಕು ಎನ್ನುವುದು ನನ್ನ ಅಭಿಪ್ರಾಯವಲ್ಲ. ರಾಮ್ ಗುಹಾ ಮೊಲತಃ ಚರಿತ್ರಕಾರರು, ಆದ್ದರಿಂದ ಅವರಿಗೆ ಈ ಪರಿಕರಗಳ ಅವಶ್ಯಕತೆ ಇರುತ್ತದಾದ್ದರಿಂದ ಈ ಸಾಹಿತ್ಯದ ಪ್ರಾಕಾರವೂ ಭರಪೂರ ಬೇಕೆಂಬುದು ಅವರ ವಾದ. ನನ್ನ ನಿಲುವು ಇಷ್ಟೇ: ಜೀವನಚರಿತ್ರೆಯ [ಪಾಶ್ಚಾತ್ಯ] ಫಾರ್ಮಾಟಿಗೆ ನಾವು ನಮ್ಮನ್ನು ಆಗಾಗ ಒಗ್ಗಿಸಿಕೊಂಡಾಗ ಅದಕ್ಕಿರಬೇಕಾದ ಶಿಸ್ತನ್ನು ಪಾಲಿಸಿದರೆ ತತ್ಫಲಿತವಾಗಿ ಬರುವ ಬರವಣಿಗೆಯ ಓದಿನ ಖುಶಿಯೇ ಬೇರೆ. ಮೊರ್ತಿಯವರ ಬಗ್ಗೆ ಬರೆದ ಉಮಾ ಅವರ ಶಿಸ್ತಿನ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ಆದರೆ ಬೇರೊಬ್ಬರ ಜೀವನಚರಿತ್ರೆಯನ್ನು ಬರೆಯುವಾಗ ಉಂಟಾಗಬಹುದಾದ ಮೂರನೆಯ ವ್ಯಕ್ತಿಗಿರಬೇಕಾದ ಕುತೂಹಲ ಮತ್ತು ಅದರ ಫಲಿತವಾಗಿ ಬರುವ ಅನಾಲಿಸಿಸ್ ಇದರಲ್ಲಿ ಕಡಿಮೆಯಾಯಿತೇನೋ... ಎಲ್ಲೋ ನಾನು ನನ್ನ ಅಸಮಾಧಾನ ವ್ಯಕ್ತ ಪಡಿಸುವುದರಲ್ಲಿ ಈ ಪುಸ್ತಕವನ್ನು ತಳ್ಳಿಹಾಕುವ ಧ್ವನಿ ಉಪಯೋಗಿಸಿದೆನೇ ಅಂತ ಅನುಮಾನವಾಗುತ್ತಿದೆ. ಅದು ನನ್ನ ಉದ್ದೇಶವಲ್ಲ. ಇದು ಒಂದು ಉತ್ತಮ ಪುಸ್ತಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಹೇಗೆ ಅತ್ಯುತ್ತಮ ಪುಸ್ತಕವಾಬದುದಿತ್ತು ಎನ್ನುವ ಸಧ್ಯತೆಗಳ ಚರ್ಚೆಯನ್ನು ನಾನು ಮಾಡುತ್ತಿದ್ದೇನೆ ಅಷ್ಟೇ.

ಯಶಸ್ವಿನಿ: ಇದಕ್ಕೆ ವಿಮರ್ಶೆಯ ಭಾರವನ್ನು ಹೇರಬೇಡಿ. ನಾನು ಬ್ಲಾಗನ್ನು ಬರೆಯಲು ಪ್ರಾರಂಭಿಸಿದ್ದೇ ಈ ಭಾರವನ್ನು ತಳ್ಳಿ ಚರ್ಚೆಯ ಫಾರ್ಮಾಟಿಗೆ ಬರುವುದಕ್ಕಾಗಿ. ಹೀಗಾಗಿ ಇಲ್ಲಿ ಬರೆದ ಮಾತುಗಳು ನನ್ನ ಕಡೆಯ ಮಾತುಗಳೂ ಅಲ್ಲ, ಗಂಭೀರ ಅಧ್ಯಯನದ ನಂತರದ ಮಾತುಗಳೂ ಅಲ್ಲ. ಇದು ನನ್ನ ಮಟ್ಟಿಗೆ ಒಂದು ಸ್ಪಂದನದ ಮಾಧ್ಯಮ ಮಾತ್ರ. ಆದರೆ ನಿಮ್ಮ ಮಾತು ನಿಜ, ಜೀವನಚರಿತ್ರೆ ಬರೆಯುವುದು ಎಷ್ಟು ಕಷ್ಟವೊ ಅದರ ವಿಮರ್ಶೆಯೂ ಅಷ್ಟೇ ಕಷ್ಟವೇನೋ.. ಎಷ್ಟೋ ಬಾರಿ ವಿಮರ್ಶೆಯ ವಸ್ತು ಪುಸ್ತಕವೋ, ಲೇಖರೋ [ಜೀವನಚರಿತ್ರೆಯಾಗಿದ್ದರೆ] ಪುಸ್ತಕದ ವಿಷಯವನ್ನಾವರಿಸದ ವ್ಯಕ್ತಿಯೋ ಎಂಬ ಗೊಂದಲವುಂಟಾಗಬಹುದು!!

Saamaanya Jeevi said...

ಶ್ರೀರಾಮರೆ,

ಬಿಸಿಲು ಕೋಲು ಪುಸ್ತಕವನ್ನು ಪೂರ್ತಿಯಾಗಿ ಓದದಿದ್ದರೂ ಒಟ್ಟಾರೆಯಾಗಿ ತಮ್ಮ ನಿಲುವನ್ನು ಸಮರ್ಥಿಸಬೇಕೆನ್ನಿಸುತ್ತದೆ. ಪುಸ್ತಕದ excerpts ಅನ್ನು ಓದಿದ್ದೇನೆ, ಮತ್ತು ಹೆಚ್ಚೂ ಕಡಿಮೆ ನನಗೂ ಹಾಗೆಯೇ ಅನ್ನಿಸಿದೆ. ವ್ಯತ್ಯಾಸವಿರುವುದು ಕೇವಲ ಗುಹಾ-ರ ವಾದ ಮತ್ತು ಅದಕ್ಕೆ ನಿಮ್ಮ ಸುಮಾರಾದ ಅನುಮೋದನೆ. ಈ ವಿಷಯದಲ್ಲಿ ರಾಘವೇಂದ್ರರ ಅಭಿಪ್ರಾಯಗಳಾನ್ನು ಅನುಮೋದಿಸುತ್ತೇನೆ.

ಇದೇ ಸಂದರ್ಭದಲ್ಲಿ ನಾನು ವೈದೇಹಿರವರು ಸಂಗ್ರಹಿಸಿ ಕೃತಿರೂಪದಲ್ಲಿ ನಮಗೆ ಕೊಟ್ಟಿರುವ ಬಿ.ವಿ.ಕಾರಂತರ ಆತ್ಮಚರಿತ್ರೆ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಪುಸ್ತಕವನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಪುಸ್ತಕದ ಮುಖಪುಟದಲ್ಲೇ "ಬದುಕಿನ ನೆನಪು ಅನುಭವಗಳ ಕಥನ" ಎಂದು ಕೊಟ್ಟಿರುವುದೂ ಸಹ ಗಮನಾರ್ಹವಾಗಿದೆ.

ಒಟ್ಟೂ ಪುಸ್ತಕ ಕಾರಂತರ ನಿರೂಪಣೆಯಲ್ಲಿದೆ. ಮತ್ತು ಧ್ವನಿಯಲ್ಲೂ ಸಹ. ಓದಿನಲ್ಲಿ ಅನುಭವಕ್ಕೆ ಬರದಿರಲು ಸಾಧ್ಯವೇ ಇಲ್ಲ. ಕಾರಂತರು ತಮ್ಮ ಆಂತರ್ಯವನ್ನು ಬಗೆದು ಕೊಟ್ಟಿರುವುದಕ್ಕೆ ಒಂದು ಆಕಾರವನ್ನು ಕೊಡುವುದರಲ್ಲಿ ವೈದೇಹಿ ಸಂಪೂರ್ಣಾವಾಗಿ ಯಶಸ್ವಿಯಾಗಿದ್ದಾರೆ.

ಸ್ವತಃ ಕಾರಂತರು ಒಬ್ಬ ರಂಗಕರ್ಮಿಯಾಗಿದ್ದುದು ಹೆಚ್ಚಿನ ಸಹಾಯಕ್ಕೆ ಬಂತೇ? ಹೇಳುವುದು ಕಷ್ಟ. ತಮ್ಮ ಜೀವನದ ಅದೆಷ್ಟು ಘಟನೆಗಳನ್ನು ಮುಜುಗರವಿಲ್ಲದೇ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಅದೆಲ್ಲಾ ಕಲಾವಿದ-ವ್ಯಕ್ತಿ ಕಾರಂತರನ್ನು ಇಡಿಯಾಗಿ ನಮ್ಮ ಮುಂದೆ ನಿಲ್ಲಿಸುವುದಕ್ಕೆ ದುಡಿಯುತ್ತದೆ ಎನ್ನುವುದು ಇಲ್ಲಿ ಮುಖ್ಯ. ಅವೆಲ್ಲಾ ಬಿಡಿಯಾದ ವಿವರಗಳಂತೆ ಹರಿದು ಹಂಚಿಹೋಗಿಲ್ಲ. ನಿಸ್ಸಂಶಯವಾಗಿ, ವೈದೇಹಿಯವರ ಶ್ರಮ ಎದ್ದು ಕಾಣುತ್ತದೆ. ಕಾರಂತರ ವೈಯಕ್ತಿಕ ಪರಿಚಯ ವೈದೇಹಿಯವರಿಗಿದ್ದುದೂ ಸಹ ಹೆಚ್ಚಿನ ಸಹಾಯಕ್ಕೆ ಬಂದಿದ್ದೀತು.

ಈ ಒಂದು ಪ್ರಯೋಗವೇ ತುಂಬಾ ಆಸಕ್ತಿಕರ ಮತ್ತು ಅನುಕರಣೀಯವೆಂದೆನ್ನಿಸುತ್ತದೆ. ನಿರೂಪಕ ತನ್ನ ಜೀವನಪಯಣವನ್ನೇ ನಮ್ಮೊಂದಿಗೆ ಹಂಚಿಕೊಂಡ ಅನುಭವಾಗುತ್ತದೆಯಲ್ಲದೇ, ಒಂದು ಅಪರೂಪವಾದ ಸಾಂಸ್ಕೃತಿಕ ದಾಖಲಾತಿಯೂ ದೊರಕಿದೆ. ಇಲ್ಲಿ ಮೊದಲನೇಯದು ಕಲಾತ್ಮಕವಾದ ವಿಷಯವಾದರೆ, ಎರಡನೇಯದು ಕಾಕತಾಳೀಯವಾದ ವಿವರಗಳ ಸಮೃದ್ಧಿಯಿಂದ ಸಿದ್ದಿಸಿದ್ದು ಎನ್ನಿಸುತ್ತದೆ. ಎರಡನೇಯದನ್ನು ಕೂಡಾ ಕಲಾತ್ಮಕತೆಯೆನ್ನುವುದು ಸ್ಪರ್ಷಿಸಿದಾಗ ನಮಗೆ ಸಿಗುವ ಒಳನೋಟಗಳೇ ಬೇರೆ.

ಜೀವನಚರಿತ್ರೆ, ಆತ್ಮಚರಿತ್ರೆಗಳ ಕುರಿತು ವಿಶೇಷವಾದ ಆಸಕ್ತಿ ತಮಗಿದೆ ಎಂದು ಗಮನಿಸಿದರೆ ತಪ್ಪಾಗುವುದಿಲ್ಲವೇನೋ. ಈ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳೇನಿದ್ದೀತು ಎಂದು ತಿಳಿಯಲು ನನಗೆ ಕುತೂಹಲವಿದೆ.

ಇದೊಂದು ಬಗೆಯದಾದರೆ ಇಂದಿರಾ ಗಾಂಧಿ ಕುರಿತು ಕ್ಯಾಥೀರ್ನ್ ಫ಼್ರ್ಯಾಂಕ್ ಬರೆದಿರುವ ಜೀವನಚರಿತ್ರೆ ಮತ್ತೊಂದು ಬಗೆಯದು. ಆ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೇಯದು, ಇಂದಿರಾಗಾಂಧಿಯನ್ನು ಒಬ್ಬ ವ್ಯಕ್ತಿಯಾಗಿ ಲೇಖಕಿ ನಮ್ಮ ಮುಂದೆ ನಿಲ್ಲಿಸಿರುವ ರೀತಿ. ತನ ಅಗತ್ಯವಿರುವ ಸಂಪನ್ಮೂಲಗಳನ್ನು, ವಿವರಗಳನ್ನು ಬಳಸಿಕೊಂಡು ಅತ್ಯುತ್ತಮವಾದ ವ್ಯಕ್ತಿಚಿತ್ರಣವನ್ನು ಕೊಡಲು ಲೇಖಕಿಗೆ ಸಾಧ್ಯವಾಗಿದೆ. ಪಾಶ್ಚಾತ್ಯ ರೀತಿಯ ಜೀವನಚರಿತ್ರೆಗೆ ಇದು ಒಳ್ಳೆಯ ಉದಾಹರಣೆಯಾಗಿದೆ. ಇದನ್ನೂ ಸಹ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. (ಪುಸ್ತಕದ ಎರಡನೇಯ ಭಾಗವಾದ ಇಂದಿರಾರ ರಾಜಕೀಯ ಜೀವನ ಅತ್ಯಂತ ಕಳಪೆ ಪುಸ್ತಕದ ಭಾಗದಂತಿದೆ. ಭಾರತದ ಕುರಿತ ತಮ್ಮ ಪೂರ್ವಾಗ್ರಹಗಳನ್ನು ಮೀರಲಾಗದ ಬ್ರಿಟಿಷ್ ಲೇಖಕಿಯೆಂದು ನಾವು ಅವರನ್ನು ಕರುಣೆಯಿಂದ ನೋಡಬೇಕೆನ್ನಿಸುತ್ತದೆ).

ಈ ಎರಡೂ ಸಹ ಎರಡು ಭಿನ್ನವಾದ ದೃಷ್ಟಿಕೊನಗಳ ಸಾರ್ಥಕ್ಯಕ್ಕೆ ನಿದರ್ಶನದಂತಿದೆ.

ಸದ್ಯಕ್ಕೆ ಅಷ್ಟೇನೂ, ಮುಖ್ಯವಲ್ಲವಾದರೂ, ಪ್ರಶಾಂತರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆ ವಾಕ್ಯ ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ. ಒಟ್ಟು ಆ ಪ್ಯಾರಾವನ್ನು ಓದಿದರೆ, ಆ ವಾಕ್ಯದ ಅಪಾರ್ಥ ತಕ್ಷಣ ಗಮನಕ್ಕೆ ಬರುವುದಷ್ಟೇ ಅಲ್ಲದೆ, ಅದು ಒಟ್ಟು ಪ್ಯಾರಾಕ್ಕೆ ಹೊಂದಿಕೊಳ್ಳುತ್ತಿಲ್ಲವೆನ್ನುವುದೂ ಗಮನಕ್ಕೆ ಬರುತ್ತದೆ.

-ಶಿವು

ಎಂ.ಎಸ್.ಶ್ರೀರಾಮ್ said...

ಶಿವು, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಪ್ರಶಾಂತರೆ ಅಭಿಪ್ರಾಯದ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆನ್ನಿಸುತ್ತದೆ. ಇದರಿಂದಾಗಿಯೇ ನನಗೆ ಬ್ಲಾಗಿನ ಫಾರ್ಮಾಟಿನ ಅನುಕೂಲತೆಗಳು ಕಂಡಿವೆ. ಇಲ್ಲ್ಲಿ ಮೊದಲಬಾರಿಗೆ ನನ್ನ ಅಭಿವ್ಯಕ್ತಿಯಲ್ಲಿರುವ ಅಸಮಂಜಸ ಎನ್ನಿಸುವಂತಹ ನಿಲವನ್ನು ನಾನು ಸ್ಪಷ್ಟೀಕರಿಸಲು ಸಾಧ್ಯವಾಯಿತು. ನನ್ನ ಸಷ್ಟೀಕರಣದ ಬಗ್ಗೆ ನಿಮ್ಮ ವಿರೋಧ ಇಲ್ಲವೆಂದು ಭಾವಿಸುತ್ತೇನೆ.

ನನಗೆ ಜೀವನಚರಿತ್ರೆಗಳ ಬಗ್ಗೆ ವಿಶೇಷ ಆಸಕ್ತಿಯೇನೂ ಇಲ್ಲ. ಒಂದೇ ಕಾಲಕ್ಕೆ ಮೂರು ಪುಸ್ತಕಗಳ ಬಗ್ಗೆ ಬರೆದದ್ದು ಕಾಕತಾಳೀಯವಷ್ಟೇ.ಕಾರಂತರ ಬಗ್ಗೆ ಬಂದಿರುವ ಪುಸ್ತಕದ ಬಗ್ಗೆ ಕೇಳಿದ್ದೇನೆ. ಈ ಬಾರಿ ಬೆಂಗಳೂರಿಗೆ ಹೋದಾಗ ಕೊಳ್ಳುತ್ತೇನೆ. ವೈದೇಹಿ ತುಂಬಾ ಸಮರ್ಥ ಹಾಗೂ ಪರ್ಸೆಪ್ಟಿವ್ ಬರಹಗಾರರು. ಅವರ ಬರವಣಿಗೆ ಉತ್ತಮವಾಗಿರುತ್ತದೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೂ ಆ ಬಗ್ಗೆ ನಾನೂ ಪುಸ್ತಕವನ್ನು ಓದಿದ ನಂತರ ಚರ್ಚಿಸುವುದು ಉತ್ತಮ ಅನ್ನಿಸುತ್ತದೆ.