Showing posts with label ರುಜುವಾತು. Show all posts
Showing posts with label ರುಜುವಾತು. Show all posts

ಕನ್ನಡಕ್ಕಿನ್ನೊಂದು ಪತ್ರಿಕೆ, ಕನ್ನಡ ಕಾವ್ಯ, ಕೆಲವು ಇತರ ವಿಚಾರಗಳು

ಭಾಗ ೧: ಶಬ್ದಗುಣ: ಮತ್ತೊಂದು ಸಣ್ಣ ಪತ್ರಿಕೆ

ದೇಶಕಾಲದ ಬಗ್ಗೆ ಚರ್ಚಿಸುತ್ತಿರುವಾಗಲೇ ಕನ್ನಡಕ್ಕೆ ಮತ್ತೊಂದು ಸಣ್ಣ ಪತ್ರಿಕೆಯ ಪ್ರವೇಶವಾಗಿದೆ. ಇದು ವಸಂತ ಬನ್ನಾಡಿಯವರು ಇತ್ತೀಚೆಗೆ ಹೊರತಂದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ. ದೇಶಕಾಲದ ಬಗ್ಗೆ ನಾನು ನಾಲ್ಕು ಸಂಚಿಕೆಗಳ ನಂತರ ಬರೆದೆನಾದರೂ ಇದರ ಬಗ್ಗೆ ನಾನು ತಕ್ಷಣವೇ ಬರೆಯುತ್ತಿರುವುದಕ್ಕೆ ಕಾರಣಗಳು ಹಲವು. ಮೊದಲ ಭಾಗದಲ್ಲಿ ನಾನು ಈ ಪತ್ರಿಕೆಯ ಸ್ಥಾನ, ಉದ್ದೇಶ, ವಿನ್ಯಾಸದ ಬಗೆ ಚರ್ಚಿಸುತ್ತೇನೆ. ಎರಡನೆಯ ಭಾಗದಲ್ಲಿ ಈ ಸಂಚಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಕಾಲೀನ ಕನ್ನಡಕಾವ್ಯದ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆಯುತ್ತೇನೆ. ಕಡೆಯದಾಗಿ ಕಾವ್ಯವಲ್ಲದೇ ಈ ಸಂಚಿಕೆಯಿಂದ ಹೊರಹೊಮ್ಮಿರುವ ಕೆಲವು ವಿಚಾರಗಳನ್ನು ಚರ್ಚೆ ಮಾಡುವ ಉದ್ದೇಶ ನನಗಿದೆ. ಅಂದರೆ ಶಬ್ದಗುಣದಲ್ಲಿ ಸಾಕಷ್ಟು ಹೂರಣವಿದೆ ಅಂತ ನಾನು ಒಪ್ಪಿದಂತಾಯಿತು. ಅದು ನಿಜವೂ ಸಹ.




ಕನ್ನಡದಲ್ಲಿ ಸಣ್ಣ ಪತ್ರಿಕೆಗಳು, ದೇಶಕಾಲದ ನಾಲ್ಕು ಸಂಚಿಕೆಗಳು

ಕನ್ನಡದಲ್ಲಿ ಅತ್ಯುತ್ತಮ ಸಣ್ಣ ಪತ್ರಿಕೆಗಳು ಬಂದಿವೆ, ಮತ್ತು ನಿಂತುಹೋಗಿವೆ ಸಹ. ಕೆಲವು ಸಣ್ಣ ಪತ್ರಿಕೆಗಳು ಆಯಾಕಾಲದ ಸಾಹಿತ್ಯದ, ಸಾಹಿತ್ಯ ಶೈಲಿಯನ್ನು ಪ್ರತಿನಿಧಿಸಿ ನಿಂತಿವೆ. ಹೀಗಾಗಿಯೇ ಅವು ಆಯಾ ಸಾಹಿತ್ಯಕಾಲದ ಉತ್ತಮ ಲೇಖಕರ ಹೆಸರಿನ ಜೊತೆ ಅವಿನಾಭಾವವಾಗಿ ಅಂಟಿನಿಂತಿದೆ. ಸಾಕ್ಷಿಯ ಜೊತೆ ಅಡಿಗರ ಹೆಸರು, ರುಜುವಾತುವಿನ ಜೊತೆ ಅನಂತಮೂರ್ತಿಯವರ ಹೆಸರು, ಅದಕ್ಕೂ ಹಿಂದೆ ಜೀವನದ ಜೊತೆ ಮಾಸ್ತಿಯವರ ಹೆಸರು ಇದಕ್ಕೆ ಉದಾಹರಣೆಗಳು. ಒಂದು ಥರದಲ್ಲಿ ಈ ಲೇಖಕರು ಆಯಾ ಸಮಯಘಟ್ಟಕ್ಕೆ ಪ್ರಯೋಗಗೊಂಡ ಹೊಸ ಬರವಣಿಗೆಯ ಶೈಲಿಯನ್ನು ಪ್ರತಿನಿಧಿಸುತ್ತದ್ದರಿಂದ ಆ ಶೈಲಿಯ ಸಮರ್ಥ ಅನುಯಾಯಿಗಳನ್ನು ಹುಟ್ಟುಹಾಕುವುದರಲ್ಲಿ ಈ ಪತ್ರಿಕೆಗಳು ಪ್ರೇರಕವಾಗುವಂತಹ ಕೆಲಸ ಮಾಡಿದವು. ಅಂಕಣದಂತಹ ಪತ್ರಿಕೆಯನ್ನು ಹುಟ್ಟುಹಾಕಿದ್ದು ಪಿಪಿ ಗೆಳೆಯರ ಬಳಗದ ತ್ರಿಮೂರ್ತಿಗಳು [ಪಿಪಿ= ಪೋಲಿ ಪಟಾಲಂ]. ಅವರಲ್ಲಿ ಎಚ್ ಎಸ್ ಆರ್ ಮತ್ತು ಕೆ ವಿ ನಾರಾಯಣ ವಿಮರ್ಶಕರೆಂದು ಪ್ರಸಿದ್ಧರು. ಚಿ.ಶ್ರೀನಿವಾಸರಾಜು ಸಾಹಿತ್ಯಪ್ರೇಮಿ, ಸಾಹಿತ್ಯ ಪರಿಚಾರಕರು, ಮತ್ತು ಲೇಖಕರು [ಆದರೆ ಹೆಚ್ಚು ಬರೆದವರಲ್ಲ]. ಬಹುಶಃ ಕನ್ನಡದ ಸಣ್ಣಪತ್ರಿಕೆಯಲ್ಲಿ ಒಂದು ಗುಂಪಿನ ಪ್ರಯತ್ನ ಇದೇ ಮೊದಲನೆಯದಿರಬಹುದು....