2012ರಲ್ಲಿ ಪ್ರಸ್ತುತವಾಗಿರುವ ಶ್ರೀಕಾಂತರ ಕಥೆಗಳು


ಈ 2012ನೇ ಸಂವತ್ಸರದಲ್ಲಿ ಶ್ರೀಕಾಂತರ ಇಡಿಯ ಸಾಹಿತ್ಯವನ್ನು ಓದಿ, ಅದನ್ನು ಅರ್ಥೈಸಿ ಅದಕ್ಕೊಂದು ಚಾರಿತ್ರಿಕ ಮಹತ್ವವನ್ನೂ, ಸಂದರ್ಭವನ್ನೂ ಸೃಷ್ಟಿಸುವುದು ಸುಲಭವಾದ ಕೆಲಸವಲ್ಲ. ನಾನು ಈ ಹಿಂದೆ ಶ್ರೀಕಾಂತರ ಕಥೆಗಳನ್ನು ಓದಿಯೇ ಇರಲಿಲ್ಲ. ಈ ಮಾತು ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಇರಬಹುದಾದ ಒಂದು ಕಂದರವನ್ನು ಪ್ರಾತಿನಿಧಿಕವಾಗಿ ಸೂಚಿಸುತ್ತದೆ. ನವ್ಯರ ಕಾಲದಲ್ಲಿ ಬಂದ ಮುಖ್ಯ ಲೇಖಕರಾದ ಆದರೆ ವಿರಳವಾಗಿ ಬರೆದ ರಾಜಲಕ್ಷ್ಮೀ ರಾವ್, ಕಾಮರೂಪಿ, ಗಿರಿ, ಖಾಸನೀಸ, ಕಥೆಗಾರ ಗಿರಡ್ಡಿ, ಕನ್ನಡದಲ್ಲಿ ಸೀಮಿತವಾಗಿ ಬರೆದ ರಾಮಾನುಜನ್ ಇಂಥ ದಿಗ್ಗಜರ ಯಾದಿಗೆ ಶ್ರೀಕಾಂತರೂ ಸೇರುತ್ತಾರೆ. ವಿರಳವಾಗಿ ಬರೆದದ್ದರಿಂದಲೇ ಒಂದು ರೀತಿಯ ಮರವೆಗೆ ಬಲಿಯಾಗುವುದೂ ಸಹಜ. ವಿಪುಲವಾಗಿ ಬರೆಯುವವರ ಹೊಸ ಕೃತಿಯ ಜೊತೆಜೊತೆಗೇ ಅವರುಗಳ ಹಳೆಯ ಕೃತಿಗಳ ಮರುಮೌಲ್ಯಮಾಪನವಾಗುತ್ತದೆ. ಹೀಗಾಗಿ ಅದು ಸಾಮೂಹಿಕ ನೆನಪಿಗೆ ಒಡ್ಡಿಕೊಳ್ಳುತ್ತದೆ. ಕನ್ನಡದಲ್ಲಿ ವಿರಳವಾಗಿ ಬರೆದೂ ಸಾಮೂಹಿಕ ಪ್ರಜ್ಞೆಯಲ್ಲಿ ಜೀವಂತವಾಗಿರುವವರು ದೇವನೂರ ಮಹಾದೇವ ಮಾತ್ರವೇನೋ. ಇಂಗ್ಲೀಷಿನಲ್ಲಿ ತಕ್ಷಣಕ್ಕೆ ನೆನಪಾಗುವ ಹೆಸರು ಟು ಕಿಲ್ ಎ ಮಾಕಿಂಗ್ ಬರ್ಡ್ ಬರೆದ ಹಾರ್ಪರ್ ಲೀ.





No comments: