ಕಾಬೂಲಿವಾಲಾನ ಕಥಾನಕ

ಕಾಬೂಲಿಗೆ ಕೆಲಸದ ಮೇಲೆ ಹೋಗಬೇಕು ಅನ್ನುವ ಮಾತು ಬಂದ ಕೂಡಲೇ ನನಗೆ ಎಲ್ಲೆಡೆಯಿಂದಲೂ ಎಲ್ಲ ರೀತಿಯ ಉಪದೇಶಗಳು ಬರತೊಡಗಿದುವು. ಮೂಲಭೂತವಾಗಿ ಎಲ್ಲರೂ ಹೇಳಿದ್ದು ಇಷ್ಟೇ - ಅಲ್ಲಿಗೆ ಹೋಗುವುದು ತುಂಬಾ ಅಪಾಯದಿಂದ ಕೂಡಿದ್ದು, ಯಾವಾಗ ಏನುಬೇಕಾದರೂ ಆಗಬಹುದು. ಹೀಗಿದ್ದರೂ ಕಳೆದ ನಾಲ್ಕುತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿಬಂದಿರುವೆ. ಮೊದಲ ಯಾತ್ರೆ ನಡೆದಾಗ ಅಲ್ಲಿನ ಚುನಾವಣೆಯ ತಯಾರಿ ನಡೆದಿತ್ತು. ಎರಡನೆಯ ಯಾತ್ರೆಯ ಸಮಯಕ್ಕೆ ಆ ಚುನಾವಣೆಯ ಫಲಿತಾಂಶ ಬರಬಹುದೆನ್ನುವ ಸುದ್ದಿಯಿತ್ತಾದರೂ, ಚುನಾವಣೆಯಲ್ಲಿ ನಡೆದಿರಬಹುದಾದ ಅವ್ಯವಹಾರದ ಕಾರಣವಾಗಿ ತನಿಖೆ ಇನ್ನೂ ನಡೆಯುತ್ತಿದೆ.





ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು

ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ. ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.




ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ

ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಪ್ರಣಾಲಿಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿರಬಹುದಾದ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.